ಶ್ರೀಮಠದ ಪರಿವಾರಕ್ಕೆ ವಾರ್ಷಿಕ ₹6 ಲಕ್ಷದವರೆಗೆ ಅನುಗ್ರಹ: ರಾಘವೇಶ್ವರ ಭಾರತೀ ಸ್ವಾಮೀಜಿ

Kannadaprabha News   | Kannada Prabha
Published : Jul 12, 2025, 06:59 AM IST
Raghaveshwar bharati shree

ಸಾರಾಂಶ

ರಾಘವೇಶ್ವರ ಭಾರತೀ ಸ್ವಾಮೀಜಿಗಳು ಶ್ರೀಮಠದ ಪರಿವಾರದ ಸೇವೆಯನ್ನು ಶ್ಲಾಘಿಸಿ, ಸೈನಿಕರಂತೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವ ಪರಿವಾರದವರಿಗೆ ವಾರ್ಷಿಕ ₹೩ ರಿಂದ ₹೬ ಲಕ್ಷದವರೆಗೆ ಅನುಗ್ರಹ ನೀಡುವುದಾಗಿ ಘೋಷಿಸಿದ್ದಾರೆ. ಪರಿವಾರದವರ ತ್ಯಾಗ ಮತ್ತು ಸಮರ್ಪಣೆಯನ್ನು ಸಮಾಜ ಗುರುತಿಸಬೇಕು ಎಂದು ಕರೆ ನೀಡಿದರು.

ಗೋಕರ್ಣ (ಜು.12): ರಾಷ್ಟ್ರ ರಕ್ಷಣೆಗೆ ಸೈನಿಕರು ಎಷ್ಟು ಸಮರ್ಪಣೆಯಿಂದ ಕರ್ತವ್ಯ ನಿರ್ವಹಿಸುತ್ತಾರೆಯೋ ಅಷ್ಟೇ ನಿಷ್ಠೆಯಿಂದ ಪರಿವಾರದವರು ಶ್ರೀಮಠಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ರಾಘವೇಶ್ವರ ಭಾರತೀ ಸ್ವಾಮೀಜಿ ಬಣ್ಣಿಸಿದರು.

ಸ್ವಭಾಷಾ ಚಾತುರ್ಮಾಸ್ಯದ ಎರಡನೇ ದಿನವಾದ ಶುಕ್ರವಾರ ಶ್ರೀಪರಿವಾರದಿಂದ ಗುರುಭಿಕ್ಷಾ ಸೇವೆ ಮತ್ತು ಸ್ವರ್ಣಪಾದುಕಾ ಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಸೇನೆ ಇರುವುದರಿಂದ ದೇಶ ನೆಮ್ಮದಿಯಿಂದ ಇರುತ್ತದೆ. ಅಂತೆಯೇ ಪರಿವಾರ ಇರುವುದರಿಂದ ಮಠ ಸುಲಲಿತವಾಗಿ ನಡೆಯುತ್ತದೆ ಎಂದು ವಿಶ್ಲೇಷಿಸಿದರು.

ರಾಷ್ಟ್ರದಲ್ಲಿ ಸೈನಿಕರಿಗೆ ಸಲ್ಲುವ ಗೌರವ ಮಠದ ವ್ಯವಸ್ಥೆಯಲ್ಲಿ ಪರಿವಾರಕ್ಕೂ ಸಲ್ಲಬೇಕು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಶ್ರೀಪೀಠದ, ಶ್ರೀರಾಮನ ಸೇವೆ ಮಾಡುತ್ತಿರುವ ಇವರ ತ್ಯಾಗ, ಸಮರ್ಪಣೆಯನ್ನು ಸಮಾಜ ಗುರುತಿಸಿ ಗೌರವಿಸಬೇಕು ಎಂದು ಸೂಚಿಸಿದರು.

ಈ ತಿಂಗಳಿನಿಂದಲೇ ಆರಂಭವಾಗುವಂತೆ ಶ್ರೀಪರಿವಾರದಲ್ಲಿ ಸೇವೆ ಸಲ್ಲಿಸುವ ಎಲ್ಲರಿಗೂ ಅವರ ಕರ್ತವ್ಯ ಮತ್ತು ಜ್ಯೇಷ್ಠತೆಯನ್ನು ಪರಿಣಿಸಿ ವಾರ್ಷಿಕ ₹೩ರಿಂದ ₹೬ ಲಕ್ಷವರೆಗೆ ಶ್ರೀ ಪೀಠದಿಂದ ಅನುಗ್ರಹದ ರೂಪದಲ್ಲಿ ನೀಡಲಾಗುವುದು. ಪರಿವಾರ ಹಾಗೂ ಈ ಹಿಂದೆ ಪರಿವಾರದಲ್ಲಿ ಸೇವೆ ಸಲ್ಲಿಸಿದವರ ಸಂಪೂರ್ಣ ಹೊಣೆಯನ್ನು ಶ್ರೀಮಠ ವಹಿಸಿಕೊಳ್ಳುತ್ತದೆ ಎಂದು ಘೋಷಿಸಿದರು. ಇದರ ಜತೆಗೆ ಆಚಾರ- ವಿಚಾರ, ಗುಣ-ನಡತೆ ಮತ್ತಿತರ ಅಂಶಗಳನ್ನು ಪರಿಗಣಿಸಿ ವಾರ್ಷಿಕ ಒಂದು ಲಕ್ಷ ರುಪಾಯಿಯನ್ನು ಆಚಾರ ಭತ್ಯೆಯಾಗಿ ವಿತರಿಸಲಾಗುವುದು ಎಂದರು.

ಸಮಾಜ ಪರಿವಾರವನ್ನು ಗೌರವಿಸುವುದು ಎಷ್ಟು ಮುಖ್ಯವೋ, ಪರಿವಾರದಲ್ಲಿರುವವರು ಮಠವನ್ನು ಪ್ರತಿನಿಧಿಸುವವರು ಎಂಬ ಘನತೆ, ಗೌರವ ಕಾಪಾಡಿಕೊಳ್ಳುವುದು ಕೂಡ ಅಗತ್ಯ ಎಂದು ಪ್ರತಿಪಾದಿಸಿದರು.

ಚಾತುರ್ಮಾಸ್ಯದಲ್ಲಿ ಯತಿಗಳ ಸೇವೆ ಮಾಡಿದ ಪುಟ್ಟ ಅನಾಥ ಬಾಲಕ ನಾರದ ಪದವಿಗೆ ಏರಲು ಸಾಧ್ಯವಾಯಿತು. ಅಂತೆಯೇ ಪರಿವಾರದವರು ಇಂದು ಆಯೋಜಿಸಿದ್ದ ಸೇವೆ ಅರ್ಥಪೂರ್ಣ. ಹೀಗೆ ಸತ್ಕಾರ್ಯಗಳ ಮೂಲಕ ಪರಿವಾರ ಸಮಾಜಕ್ಕೆ ಆದರ್ಶವಾಗಿ ಬದುಕಬೇಕು ಎಂದು ಸೂಚಿಸಿದರು.

ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲ ಅಧ್ಯಕ್ಷ ಹರಿಪ್ರಸಾದ್ ಪೆರಿಯಾಪ್ಪು, ಶಾಸನತಂತ್ರ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ರಾಮಚಂದ್ರ ಭಟ್ ಕೆಕ್ಕಾರು, ಚಾತುರ್ಮಾಸ್ಯ ತಂಡದ ಪ್ರಧಾನ ಸಂಚಾಲಕ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ ಪಂಡಿತ್, ಮೂಲಮಠ ಪುನರುತ್ಥಾನ ಸಮಿತಿ ಅಧ್ಯಕ್ಷ ಯುಎಜಿ ಭಟ್, ಶ್ರೀಪರಿವಾರದ ಮಧು ಜಿ.ಕೆ., ದಿನೇಶ್ ಹೆಗಡೆ, ಸುಬ್ರಾಯ ಅಗ್ನಿಹೋತ್ರಿ, ವಿನಾಯಕ ಶಾಸ್ತ್ರಿ, ರಾಮಮೂರ್ತಿ, ವಿನಾಯಕ ಭಟ್, ಗುರು, ಮಂಜುನಾಥ ಶಾಸ್ತ್ರಿ, ಚಂದ್ರಶೇಖರ ಯಾಜಿ, ಪ್ರಶಾಂತ್ ಯಾಜಿ, ರಾಮಚಂದ್ರ, ಹೊನ್ನಾವರ ಮಂಡಲ ಅಧ್ಯಕ್ಷ ಆರ್.ಜಿ. ಹೆಗಡೆ ಹೊಸಾಕುಳಿ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್, ಸೇವಾ ಪ್ರಧಾನ ಉದಯ ಭಟ್ ಮತ್ತಿತರರು ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!