
ಗದಗ(ಅ.2): ಸಿಗರೇಟ್ ಬಾಕಿ ಹಣದ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಗದಗ ಜಿಲ್ಲೆಯ ಶಿರಹಟ್ಟಿ ಪಟ್ಟಣದ ತಳಗೇರಿ ಬಡಾವಣಗೆಯಲ್ಲಿ ನಡೆದಿದ್ದು, ಘರ್ಷಣೆಯಲ್ಲಿ ಐವರು ಹಿಂದೂ, ಓರ್ವ ಮುಸ್ಲಿಂ ವ್ಯಕ್ತಿ ಸೇರಿ ಆರು ಜನರು ಗಾಯಗೊಂಡಿದ್ದಾರೆ.
ಗಾಯಾಳುಗಳಾದ ಅಬ್ದುಲ್ ಘನಿ ಮಕಾಂದಾರ್, ದೇವಪ್ಪ ಪೂಜಾರ್, ಪರಶುರಾಮ್ ಡೊಂಕಬಳ್ಳಿ, ಮೈಲಾರಪ್ಪ ಕಪ್ಪಣ್ಣವರ್, ರವಿ ಕಪ್ಪಣ್ಣವರ್ ಮತ್ತು ವಿರುಪಾಕ್ಷ ಹಿರೇಮಠ ಅವರಿಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಗರೇಟ್ ಬಾಕಿ ಹಣದ ವಿಚಾರಕ್ಕೆ ನಡೆದ ಜಗಳ:
ತಳಗೇರಿಯಲ್ಲಿ ಬೀಡಾ ಅಂಗಡಿ ನಡೆಸುತ್ತಿರುವ ಅಬ್ದುಲ್ ಘನಿ ಅವರಿಗೆ ದೇವಪ್ಪ ಪೂಜಾರ್ ಸಿಗರೇಟ್ ಮತ್ತು ಟೀಗಾಗಿ ₹2,500 ಬಾಕಿ ಉಳಿಸಿಕೊಂಡಿದ್ದರು ಎನ್ನಲಾಗಿದೆ.
ಇಂದು ಅಬ್ದುಲ್ ಅಂಗಡಿಯ ಪಕ್ಕದ ಅಂಗಡಿಗೆ ಹೋಗಿದ್ದಾನೆ. ಅಂಗಡಿಯಲ್ಲಿ ಬಾಕಿ ಹಣ ಉಳಿಸಿಕೊಂಡು ಈಗ ಪಕ್ಕದ ಅಂಗಡಿಗೆ ಹೋಗಿದ್ದಾನೆಂದು ದೇವಪ್ಪ ಪೂಜಾರ್ ಬಳಿಗೆ ಹೋಗಿರುವ ಅಬ್ದುಲ್ಲ್, 2,500 ರೂಪಾಯಿ ಬಾಕಿ ಹಣ ಕೊಡುವಂತೆ ಕೇಳಿದ್ದಾನೆ. ಇದಕ್ಕೆ ದೇವಪ್ಪ 2,500 ರೂಪಾಯಿ ಅಲ್ಲ.. 800 ರೂಪಾಯಿಯಷ್ಟೆ ಬಾಕಿ ಇದೆ ಅಂತಾ ವಾದ ಮಾಡಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡಿದ್ದಾರೆ. ಜಗಳದಲ್ಲಿ ಏಟು ತಿಂದಿದ್ದ ದೇವಪ್ಪ ತನ್ನ ಸ್ನೇಹಿತರಿಗೆ ವಿಷಯ ತಿಳಿಸಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಗೆಳೆಯರಿಂದ ಮತ್ತೆ ಶುರುವಾದ ಗಲಾಟೆ, ಪೆಟ್ಟಿಗೆ ಅಂಗಡಿ ದ್ವಂಸಗೊಳಿಸಿದ್ದಾರೆ.
ಅಂಗಡಿ ಬಿಳಿಸಿದ್ದಕ್ಕೆ ರೊಚ್ಚಿಗೆದ್ದ ಮುಸ್ಲಿಂ ಯುವಕರು:
ಇಬ್ಬರ ನಡುವಿನ ಜಗಳ ಗುಂಪು ಘರ್ಷಣೆಯಾಗಿ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಕಾರಣವಾಗಿದೆ. ಹಿಂದೂಗಳ ಗುಂಪು ಅಬ್ದುಲ್ಲನ ಅಂಗಡಿ ಬಿಳಿಸಿದ್ದಾರೆಂದು ಕುಪಿತಗೊಂಡ ಮುಸ್ಲಿಂ ಯುವಕರು ದೇವಪ್ಪ ಸಹಚರರೊಂದಿಗೆ ಗಲಾಟೆ ನಡೆಸಿದೆ. ಈ ಘರ್ಷಣೆಯಲ್ಲಿ ದೇವಪ್ಪ ಗೆಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ಆರೋಪಿಸಲಾಗಿದೆ. ಇದರಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.
ಪ್ರತ್ಯಾರೋಪ:
ಅಬ್ದುಲ್ ಅವರ ಪತ್ನಿ ಮುಮ್ತಾಜ್ ಹೇಳುವ ಪ್ರಕಾರ ಹಿಂದೂ ಯುವಕರೇ ಮೊದಲು ಹಲ್ಲೆ ಮಾಡಿ, ಅಂಗಡಿಯನ್ನ ಧ್ವಂಸ ಮಾಡಿದ್ದಾರೆ. ಇದರ ಜೊತೆಗೆ 'ಪಾಕಿಸ್ತಾನಕ್ಕೆ ಕಳಿಸುತ್ತೇವೆ' ಎಂದು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಆದರೆ ಹಿಂದೂ ಯುವಕರು ಆರೋಪವನ್ನು ನಿರಾಕರಿಸಿದ್ದಾರೆ ಅಲ್ಲದೇ ನಾವು ಹಿಂದೂಗಳೆಂಬ ಕಾರಣಕ್ಕೆ ಮುಸ್ಲಿಂ ಯುವಕರ ಗುಂಪು ನಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಗಾಯಾಳು ವಿರುಪಾಕ್ಷಪ್ಪ ಹೇಳುವಂತೆ, ಗಲಾಟೆ ವೇಳೆ ಹಿಂದೂ ಜನರನ್ನು ಹೊಡೆಯಿರಿ ಎಂದು ಪ್ರಚೋದನೆ ನೀಡಿ ಬೆನ್ನಹತ್ತಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಪೊಲೀಸ್ ಮಧ್ಯಸ್ಥಿಕೆ:
ಶಿರಹಟ್ಟಿ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದ ತಳಗೇರಿ ಬಡಾವಣೆಯಲ್ಲಿ ತಾತ್ಕಾಲಿಕವಾಗಿ ಉಂಟಾದ ಉದ್ವಿಗ್ನತೆ ಈಗ ಶಾಂತವಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ