
ಬೆಂಗಳೂರು: ರಾಜ್ಯ ಸರ್ಕಾರವು ಇತ್ತೀಚೆಗೆ ಘೋಷಿಸಿದ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಯೋಜನೆಯನ್ನು ಬೆಂಗಳೂರಿನ ನಮ್ಮ ಮೆಟ್ರೋ ಸೌಲಭ್ಯಕ್ಕೂ ವಿಸ್ತರಿಸಬೇಕೆಂಬ ಬೇಡಿಕೆ ಈಗ ಬಲವಾಗಿದೆ. ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪಾಸ್ ನೀಡುವುದರಿಂದ ಶೈಕ್ಷಣಿಕ ಪ್ರಗತಿ, ಸಾರ್ವಜನಿಕ ಸಾರಿಗೆಯ ಗರಿಷ್ಠ ಬಳಕೆ ಮತ್ತು ಸುರಕ್ಷಿತ ಪ್ರಯಾಣಕ್ಕೆ ದಾರಿಯಾಗುತ್ತದೆ ಎಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ (BMCA) ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ರಾಜ್ಯದಾದ್ಯಂತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ಗಳನ್ನು ಒದಗಿಸಲು ಸರ್ಕಾರ ತೆಗೆದುಕೊಂಡಿರುವ ಜನಪರ ನಿರ್ಧಾರವನ್ನು ಬಿಎಂಸಿಎ ಬುಧವಾರ ಬಿಡುಗಡೆ ಮಾಡಿರುವ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ವಾಗತಿಸಿದೆ. ಆದರೆ, ಬೆಂಗಳೂರಿನಂತಹ ಮೆಟ್ರೋ ಸಿಟಿಯಲ್ಲಿ ಕೇವಲ ಬಸ್ ಪ್ರಯಾಣಕ್ಕೆ ಮಾತ್ರ ಈ ಸೌಲಭ್ಯವನ್ನು ಸೀಮಿತಗೊಳಿಸದೆ, ಮೆಟ್ರೋಗೂ ವಿಸ್ತರಿಸಿದರೆ ಮಾತ್ರ ಈ ಮಹತ್ವಾಕಾಂಕ್ಷಿಯ ಯೋಜನೆ ಸಂಪೂರ್ಣ ಯಶಸ್ವಿಯಾಗಲು ಸಾಧ್ಯ ಎಂದು ಸಂಘ ಹೇಳಿದೆ. ಬಸ್ ಮತ್ತು ಮೆಟ್ರೋ ಎರಡನ್ನೂ ಒಳಗೊಂಡ ಉಚಿತ ಪಾಸ್ ವ್ಯವಸ್ಥೆಯು ವಿದ್ಯಾರ್ಥಿಗಳಿಗೆ ಯಾವುದೇ ಅಡೆತಡೆಯಿಲ್ಲದ, ಸುಗಮ ಹಾಗೂ ಸಮಗ್ರ ಸಾರಿಗೆ ಜಾಲವನ್ನು ಸೃಷ್ಟಿಸಲಿದೆ ಎಂದಿದೆ.
ದೇಶದ ಭವಿಷ್ಯವಾಗಿರುವ ಯುವ ಪೀಳಿಗೆಯ ಶಿಕ್ಷಣಕ್ಕೆ ಸಾರಿಗೆ ವೆಚ್ಚವು ಎಂದಿಗೂ ಅಡ್ಡಿಯಾಗಬಾರದು ಎಂದು ಸಂಘವು ಬಲವಾಗಿ ಪ್ರತಿಪಾದಿಸಿದೆ. ಮೆಟ್ರೋದಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವುದರಿಂದ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯಿಂದ ಬರುವ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ. ಇದು ಅವರ ಕುಟುಂಬಗಳ ಮೇಲಿನ ಹೆಚ್ಚುವರಿ ಆರ್ಥಿಕ ಹೊರೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಹೀಗಾಗಿ ನಗರದ ಯಾವುದೇ ಭಾಗದಲ್ಲಿರುವ ವಿದ್ಯಾರ್ಥಿಗಳು ಯಾವುದೇ ಆರ್ಥಿಕ ಆತಂಕವಿಲ್ಲದೆ ಬೆಂಗಳೂರಿನಾದ್ಯಂತ ಇರುವ ಗುಣಮಟ್ಟದ ಶಾಲೆಗಳು, ಕಾಲೇಜುಗಳು, ತಾಂತ್ರಿಕ ಸಂಸ್ಥೆಗಳು ಹಾಗೂ ಕೇಂದ್ರ ಗ್ರಂಥಾಲಯಗಳನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ ಎಂದು ಬಿಎಂಸಿಎ ಗಮನ ಸೆಳೆದಿದೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಸಾರ್ವಜನಿಕ ಸಾರಿಗೆಯ ಬಳಕೆಯೇ ಏಕೈಕ ಮದ್ದು. ವಿದ್ಯಾರ್ಥಿ ದೆಸೆಯಲ್ಲೇ ಮೆಟ್ರೋ ಪ್ರವೇಶವನ್ನು ಉಚಿತಗೊಳಿಸುವುದರಿಂದ ಯುವ ಪೀಳಿಗೆಯಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಳಸುವ ಉತ್ತಮ ಹವ್ಯಾಸ ಇಂದಿನಿಂದಲೇ ರೂಢಿಯಾಗುತ್ತದೆ. ಇದು ದೀರ್ಘಾವಧಿಯಲ್ಲಿ ವೈಯಕ್ತಿಕ ದ್ವಿಚಕ್ರ ವಾಹನಗಳು ಹಾಗೂ ಕಾರುಗಳ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ. ತನ್ಮೂಲಕ ನಗರದಲ್ಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಬರುವುದಲ್ಲದೆ, ಅತ್ಯಂತ ಸುಸ್ಥಿರ, ಪರಿಸರಸ್ನೇಹಿ ಮತ್ತು ಶಿಸ್ತುಬದ್ಧ ನಗರಾಭಿವೃದ್ಧಿ ಸಾರಿಗೆ ವ್ಯವಸ್ಥೆಯನ್ನು ನಿರ್ಮಿಸಲು ಮಹತ್ತರ ಕೊಡುಗೆ ನೀಡಲಿದೆ ಎಂದು ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ (BMCA) ಸರ್ಕಾರಕ್ಕೆ ಮನದಷ್ಟು ಮಾಡುವಂತೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ