ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ್ ಇನ್ನಿಲ್ಲ!

By Suvarna NewsFirst Published Apr 27, 2021, 10:36 AM IST
Highlights

ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಂಸದ ಎಸ್.ಬಿ.ಸಿದ್ನಾಳ ಮಂಗಳವಾರ ಬೆಳಗಿನ ಜಾವ ನಿಧನ| ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದ ಸಿದ್ನಾಳ್| ಮೂಲತಃ ಬೈಲಹೊಂಗಲ ತಾಲೂಕು ಸಾಣಿಕೊಪ್ಪದವರು. ಅವರ ಅಂತ್ಯಕ್ರಿಯೆ ಸಾಣಿಕೊಪ್ಪದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.

ಬೆಳಗಾವಿ(ಏ.27): ಮಾಜಿ ಸಂಸದ, ಕಾಂಗ್ರೆಸ್ ಹಿರಿಯ ನಾಯಕ ಎಸ್.ಬಿ. ಸಿದ್ನಾಳ್(86) ಮಂಗಳವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 4 ಬಾರಿ ಆಯ್ಕೆಯಾಗಿದ್ದ ಸಿದ್ನಾಳ್, ಮೂಲತಃ ಬೈಲಹೊಂಗಲ ತಾಲೂಕು ಸಾಣಿಕೊಪ್ಪದವರು. ಅವರ ಅಂತ್ಯಕ್ರಿಯೆ ಸಾಣಿಕೊಪ್ಪದಲ್ಲಿ ಇಂದು ಸಂಜೆ 5 ಗಂಟೆಗೆ ನಡೆಯಲಿದೆ.

ಸಿದ್ನಾಳ್ ಹಿನ್ನೆಲೆ

1936ರ ಏಪ್ರಿಲ್​ 6ರಂದು ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಸಂಪಗಾಂವದಲ್ಲಿ ಜನಿಸಿದ ಶಣ್ಮುಖಪ್ಪ ಬಸಪ್ಪ ಸಿದ್ನಾಳ್​ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. ಸತತ ನಾಲ್ಕು ಬಾರಿ ಈ ಕ್ಷೇತ್ರದ ಸಂದರಾಗಿದ್ದರು. ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. 

ಮಾಜಿ ಪ್ರಧಾನಿಗಳಾದ ದಿ.ರಾಜೀವ ಗಾಂಧಿ ಹಾಗೂ ಇಂದಿರಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕೇಂದ್ರದ ಮಾಜಿ ಸಚಿವ ಬಿ.ಶಂಕರಾನಂದ ಅವರ ಜತೆಗೂ ಉತ್ತಮ ಸ್ನೇಹ ಹೊಂದಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೇರು ಮಟ್ಟದಲ್ಲಿ ಸಂಘಟಿಸುವಲ್ಲಿ ಸಾಕಷ್ಟು ಶ್ರಮಿಸಿದ್ದರು.

ಸಾಣಿಕೊಪ್ಪ ಗ್ರಾಮದಲ್ಲಿ ಅಂತ್ಯಕ್ರಿಯೆ

ಮೃತರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಗ್ರಾಮದಲ್ಲಿ ಇಂದು ಸಂಜೆ 4 ಗಂಟೆಗೆ ನೆರವೇರಲಿದೆ. ಮೃತರಿಗೆ ಪತ್ನಿ, ಪುತ್ರರಾದ ಉದ್ಯಮಿಗಳಾದ ಶಿವಕಾಂತ ಸಿದ್ನಾಳ್, ಶಶಿಕಾಂತ ಸಿದ್ನಾಳ್ ಮತ್ತು ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವಿದೆ.

click me!