
ಬೆಂಗಳೂರು (ಡಿ.10): ಲೈಂಗಿಕ ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ನೀಡುವ ಹೆಸರಿನಲ್ಲಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದ 'ವಿಜಯ್ ಚಿತ್ತೋಡಿಯಾ ಗುರೂಜಿ' ಎಂಬ ನಕಲಿ ಸ್ವಾಮೀಜಿ ಮತ್ತು ಆತನ ಸಹಚರನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ. ಲೈಂಗಿಕ ಸಮಸ್ಯೆ ಎಂದು ಹೇಳಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ 40 ಲಕ್ಷ ರೂಪಾಯಿ ವಂಚಿಸಿದ್ದ ಈ ಖತರ್ನಾಕ್ ಗ್ಯಾಂಗ್, ಐಷಾರಾಮಿ ಜೀವನ ನಡೆಸುತ್ತಿತ್ತು.
ಬಂಧಿತ ಆರೋಪಿಗಳನ್ನು ವಿಜಯ್ ಚಿತ್ತೋಡಿಯಾ ಗುರೂಜಿ ಮತ್ತು ಆತನ ಸಹಚರ ಮನೋಜ್ ಸಿಂಗ್ ಚಿತ್ತೋಡಿಯಾ ಎಂದು ಗುರುತಿಸಲಾಗಿದೆ. ಇವರು ಮೂಲತಃ ಗುಜರಾತ್ ಮೂಲದವರಾಗಿದ್ದಾರೆ.
ಈ ಗ್ಯಾಂಗ್ ಬೆಂಗಳೂರು, ತುಮಕೂರು ಸೇರಿದಂತೆ ವಿವಿಧ ನಗರಗಳಲ್ಲಿ ಒಟ್ಟು 8 ಟೆಂಟ್ಗಳನ್ನು ಹಾಕಿಕೊಂಡು ವಂಚನೆಯ ಜಾಲವನ್ನು ನಡೆಸುತ್ತಿತ್ತು.
ಈ ಟೆಂಟ್ಗಳಲ್ಲಿ, ಬಹುತೇಕ ಎಲ್ಲಾ ರೀತಿಯ ಆರೋಗ್ಯ ಮತ್ತು ವೈದ್ಯಕೀಯ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ನಂಬಿಸಿ ಜನರನ್ನು ವಂಚಿಸುತ್ತಿದ್ದರು.
ಲೈಂಗಿಕ ಸಮಸ್ಯೆ ಎದುರಿಸುತ್ತಿದ್ದ ದೂರುದಾರರೊಬ್ಬರು ಈ ನಕಲಿ ಗುರೂಜಿ ಬಳಿ ಹೋಗಿದ್ದರು. 'ನಿಮ್ಮ ಸಮಸ್ಯೆ ಸರಿಪಡಿಸುತ್ತೇವೆ' ಎಂದು ಭರವಸೆ ನೀಡಿದ ಆರೋಪಿಗಳು, ಹಂತ ಹಂತವಾಗಿ ದೂರುದಾರರಿಂದ ಸುಮಾರು 40 ಲಕ್ಷ ರೂಪಾಯಿಗಳಷ್ಟು ಹಣವನ್ನು ವಂಚಿಸಿದ್ದರು. ತದನಂತರ, ಈ ಗುರೂಜಿ ಗ್ಯಾಂಗ್ ವಂಚಕರು ಎಂಬುದು ದೂರುದಾರರಿಗೆ ಮನವರಿಕೆಯಾದಾಗ, ಅವರು ತಕ್ಷಣವೇ ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಜ್ಞಾನ ಭಾರತಿ ಪೊಲೀಸರು, ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದರು.
ಸೈಬರಬಾದ್ ಪೊಲೀಸರ ನೆರವಿನಿಂದ ವಿಜಯ್ ಗುರೂಜಿಯನ್ನು ತೆಲಂಗಾಣದ ಮೊಹಬೂಬ್ ನಗರದಲ್ಲಿ ಬಂಧಿಸಲಾಯಿತು.
ಆತನ ಸಹಚರ ಮನೋಜ್ ಸಿಂಗ್ ಚಿತ್ತೋಡಿಯಾನನ್ನು ಸೈಬರಬಾದ್ನಲ್ಲಿ ಅರೆಸ್ಟ್ ಮಾಡಲಾಯಿತು.
ಆರೋಪಿಗಳಿಂದ ವಂಚನೆ ಮಾಡಿದ್ದ 40 ಲಕ್ಷ ರೂಪಾಯಿಗಳ ಪೈಕಿ 19.50 ಲಕ್ಷ ರೂಪಾಯಿ ನಗದು ಹಣವನ್ನು ಹಾಗೂ ಐಷಾರಾಮಿ ಜೀವನ ನಡೆಸಲು ಬಳಸುತ್ತಿದ್ದ ಒಂದು ಟಿಟಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರು ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ