ಬಿಜೆಪಿ ನಾಯಕರಲ್ಲಿ ಭಿನ್ನಮತ ಸ್ಫೋಟವಾಗಿದ್ದು, ಇದು ಹಿರಿಯ ನಾಯಕರಿಗೆ ಇರುಸು ಮುರುಸು ಉಂಟು ಮಾಡಿದೆ.
ವಿಜಯಪುರ: ಜಿಲ್ಲೆಯ ಬಿಜೆಪಿ ಮುಖಂಡರಲ್ಲಿದ್ದ ಭಿನ್ನಮತ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಸ್ಫೋಟವಾಗಿದ್ದು, ಇದು ಬಿಜೆಪಿ ನಾಯಕರಲ್ಲಿ ಇರುಸು ಮುರುಸು ಉಂಟು ಮಾಡಿದೆ. ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಭಿನ್ನಮತ ಫೇಸ್ಬುಕ್ನಲ್ಲಿ ಹೊರಬಂದಿದೆ.
ಜಿಗಜಿಣಗಿ ಗುರುವಾರವಷ್ಟೇ ಕಾರ್ಯಕ್ರಮವೊಂದರಲ್ಲಿ ಮಾತನಾಡಿ, ವಿಜಯಪುರ ಮಾರುಕಟ್ಟೆಯಲ್ಲಿ ಶಾಸಕ ಯತ್ನಾಳ್ ಹಣ ಸಂಗ್ರಹಿಸಿದ್ದಾರೆ ಎಂದು ಪರೋಕ್ಷವಾಗಿ ಕುಟುಕಿದ್ದರು.
ಶಾಸಕ ಯತ್ನಾಳ್ ಇದಕ್ಕೆ ಕೌಂಟರ್ ಆಗಿ ಫೇಸ್ಬುಕ್ನಲ್ಲಿ 10 ವರ್ಷದ ಸಂಸದರ ನಿಧಿ ಎಲ್ಲಿ? ಅದು ಯಾವ ಹಳ್ಳಿಗೆ ತಲುಪಿದೆ? ಸಂಸದರ ದತ್ತು ಗ್ರಾಮವಾದ ಮಕಣಾಪುರ ಇನ್ನೂ ಹಿಂದುಳಿದೆ. ನಿಮಗೆ ನಾಚಿಕೆಯಾಗಬೇಕು. ವಿನಾಶ ಕಾಲಕ್ಕೆ ವಿಪರೀತ ಬುದ್ದಿ ಎಂದು ಜಿಗಜಿಣಗಿ ವಿರುದ್ಧ ಫೇಸ್ ಬುಕ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಬೂದಿ ಮುಚ್ಚಿದ ಕೆಂಡದಂತಿದ್ದ ಬಿಜೆಪಿಯಲ್ಲಿನ ಭಿನ್ನಮತ ಈಗ ಬಹಿರಂಗಗೊಂಡಿದೆ.