
ಬೆಂಗಳೂರು (ಜೂ.01): ಲೈಂಗಿಕ ಹಗರಣದಲ್ಲಿ ಮಾಜಿ ಸಂಸದ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಬಂಧನಕ್ಕೆ ಒಳಗಾಗಿ ಒಂದು ವರ್ಷ ಪೂರೈಸಿದೆ. ಲೈಂಗಿಕ ಹಗರಣದಲ್ಲಿ ಬಂಧನ ಭೀತಿಗೊಳಗಾಗಿ ವಿದೇಶಕ್ಕೆ ಪ್ರಜ್ವಲ್ ಪರಾರಿಯಾಗಿದ್ದರು. ಎರಡು ವಾರದ ಬಳಿಕ ಜರ್ಮನಿಯಿಂದ ಮರಳಿದ ಕೂಡಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್ಐಟಿ ಅಧಿಕಾರಿಗಳು ಅವರನ್ನು ಬಂಧಿಸಿದ್ದರು. ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಅವರು ಕಾಲ ಕಳೆಯುವಂತಾಗಿದೆ.
ಏನಿದು ಪ್ರಕರಣ?: 2024ರ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಆಗಿನ ಜೆಡಿಎಸ್ ಸಂಸದ ಪ್ರಜ್ವರ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್ ಡ್ರೈವ್ ಬಿಡುಗಡೆಗೊಂಡು ಸಾರ್ವಜನಿಕ ವಲಯಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಂದು ಲೋಕಸಭಾ ಚುನಾವಣೆ ಮತದಾನಕ್ಕೂ ಎರಡು ದಿನ ಮುನ್ನ ಸುಮಾರು 2 ಸಾವಿರ ಅಶ್ಲೀಲ ಪೋಟೋಗಳು ಹಾಗೂ ವಿಡಿಯೋಗಳು ತುಂಬಿದ್ದ ಪೆನ್ಡ್ರೈವ್ಗಳು ಸದ್ದು ಮಾಡಿದ್ದವು. ಈ ಹಗರಣ ಬಯಲಾದ ಕೂಡಲೇ ಜೆಡಿಎಸ್ ಅಭ್ಯರ್ಥಿಯೂ ಆಗಿದ್ದ ಪ್ರಜ್ವಲ್ ರಾತ್ರೋರಾತ್ರಿ ವಿದೇಶಕ್ಕೆ ಹಾರಿದ್ದರು.
ಈ ನಡುವೆ, ಈ ದೌರ್ಜನ್ಯ ಕೃತ್ಯಗಳ ಕುರಿತು ತನಿಖೆಗೆ ಎಡಿಜಿಪಿ ಬಿ.ಕೆ.ಸಿಂಗ್ ಸಾರಥ್ಯದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ)ವನ್ನು ರಾಜ್ಯ ಸರ್ಕಾರ ರಚಿಸಿತ್ತು. 2024ರ ಮೇ 31ರಂದು ತಡರಾತ್ರಿ ಜರ್ಮನಿ ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಜ್ವಲ್ ರನ್ನು ಮಹಿಳಾ ಪೊಲೀಸರ ತಂಡ ಬಂಧಿಸಿತ್ತು. ಬಳಿಕ ಎರಡು ವಾರಗಳ ವಿಚಾರಣೆ ನಡೆಸಿ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಅಂದಿನಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಪ್ರಜ್ವಲ್ ಇದ್ದಾರೆ.
ಬಳಿಕ ಪ್ರಜ್ವಲ್ ವಿರುದ್ಧ ಅತ್ಯಾ ಚಾರ ಆರೋಪ ಮಾಡಿ ಅವರ ಮನೆ ಕೆಲಸದಾಳು ಹಾಗೂ ಹಾಸನ ಜಿಪಂ ಸದಸ್ಯೆ ದೂರು ಆಧರಿಸಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಇದರಿಂದ ಬಂಧನ ಭೀತಿಗೊಳಗಾದ ಪ್ರಜ್ವಲ್ ವಿದೇಶದಲ್ಲೇ ಉಳಿದುಕೊಂಡಿದ್ದರು. ಕೊನೆಗೆ ಈ ಲೈಂಗಿಕ ಹಗರಣದಲ್ಲಿ ನ್ಯಾಯಾಲಯಕ್ಕೆ ಜಾಮೀನು ಕೋರಿ ಅವರು ಸಲ್ಲಿಸಿದ್ದ ಅರ್ಜಿಗಳು ತಿರಸ್ಕೃತಗೊಂಡಿದ್ದವು. ಅಲ್ಲದೆ ಲೈಂಗಿಕ ಹಗರಣದ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸುವ ಮೂಲಕ ಇದೀಗ ಪ್ರಜ್ವಲ್ ಅವರಿಗೆ ಭವಿಷ್ಯದ ಬಗ್ಗೆ ಆತಂಕ ಮೂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ