
ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ದಾಳಿ ಹಿನ್ನೆಲೆ ಕಾಂಗ್ರೆಸ್ ಯುವ ಮುಖಂಡ ಮೊಹಮ್ಮದ್ ನಲಪಾಡ್ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿ, ತಮ್ಮ ಮೇಲೆ ಮತ್ತು ಅವರ ತಮ್ಮನ ಮೇಲೆ ಮಾಡಲಾಗುತ್ತಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ತಮ್ಮ ತಂದೆಗೆ ಸಚಿವ ಸ್ಥಾನ ದೊರಕದಂತೆ ಮಾಡಲು ಉದ್ದೇಶ ಪೂರ್ವಕ ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ನಲಪಾಡ್, ನಿನ್ನೆ ಬೆಳಗ್ಗೆಯಿಂದಲೇ ಅಧಿಕಾರಿಗಳು ನಮ್ಮ ಮನೆಯಲ್ಲಿ ಇದ್ದರು. ನನ್ನ ಮೇಲೆ ಮತ್ತು ನನ್ನ ತಮ್ಮನ ಮೇಲೆ ಆರೋಪ ಮಾಡಲಾಗಿದೆ. ಆದರೆ ಈ ಪ್ರಕರಣಕ್ಕೂ ನಮ್ಮ ತಂದೆ ಹ್ಯಾರೀಸ್ ಅವರಿಗೆ ಯಾವುದೇ ಸಂಬಂಧ ಇಲ್ಲ. ನಾವು ಅವರ ಮನೆಯಲ್ಲಿ ವಾಸಿಸುತ್ತಿರುವುದಷ್ಟೇ ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಇಸಿಐಆರ್ 2021ರಲ್ಲಿ ದಾಖಲಾಗಿದೆ. ಆದರೆ ಈಗ ಆರು ವರ್ಷಗಳ ಬಳಿಕ ಏಕಾಏಕಿ ಸರ್ಚ್ ಮಾಡಲು ಬಂದಿದ್ದಾರೆ. ಈ ಸಮಯದ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ನಲಪಾಡ್ ಅಭಿಪ್ರಾಯಪಟ್ಟರು.
ಇದು ನನ್ನ ತಮ್ಮನನ್ನು ಟಾರ್ಗೆಟ್ ಮಾಡಲು ನಡೆದ ದಾಳಿ ಅಲ್ಲ. ನಮ್ಮ ತಂದೆ ಹ್ಯಾರೀಸ್ ಗೆ ಸಚಿವ ಸ್ಥಾನ ಸಿಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ನಾನು ನನ್ನ ತಂದೆಗೆ ಒಳ್ಳೆಯ ಮಗನಾಗಬೇಕೆಂದು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದರು.
ನಲಪಾಡ್ ಹೇಳುವಂತೆ, ಇಡಿ ಅಧಿಕಾರಿಗಳು ಸುಮಾರು 21 ಗಂಟೆಗಳ ಕಾಲ ಶೋಧ ನಡೆಸಿದ್ದು, ಎರಡು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಮಾಧ್ಯಮಗಳಲ್ಲಿ ₹37 ಲಕ್ಷ ಸಿಕ್ಕಿದೆ ಎಂದು ವರದಿಯಾಗಿದೆ. ಈ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡಲು ನಾನು ಸಿದ್ಧನಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು.
ನಮ್ಮ ಅಜ್ಜ ವಯೋವೃದ್ಧರು, ನಮ್ಮ ತಾಯಿ ಇದ್ದಾರೆ. ಇಂತಹ ಘಟನೆಗಳಿಂದ ಅವರಿಗೆ ಏನಾಗುತ್ತದೋ ಎಂಬ ಆತಂಕವಿದೆ ಎಂದು ನಲಪಾಡ್ ಇದೇ ವೇಳೆ ಹೇಳಿದ್ದಾರೆ.
ಶ್ರೀಕಿ ನಮಗೆ ಗೊತ್ತಿಲ್ಲ ಎಂದು ಹೇಳಿಲ್ಲ. ಪರಿಚಯ ಇದೆ, ಅವರ ಜೊತೆ ಊಟ ಮಾಡಿದ್ದೇವೆ. ಆದರೆ ಯಾವುದೇ ವ್ಯವಹಾರ ಇಲ್ಲ. ಅವರ ಮನೆಯಲ್ಲೇನಾಗುತ್ತಿತ್ತೋ ನಮಗೆ ತಿಳಿದಿಲ್ಲ. ಅವರ ತಪ್ಪನ್ನು ನಮ್ಮ ಮೇಲೆ ಹಾಕುವುದು ಸರಿಯಲ್ಲ ಎಂದರು. ಮೀಡಿಯಾ ಟ್ರಯಲ್ ಮಾಡಬೇಡಿ. ಯಾವುದೇ ಮಾಹಿತಿ ಪ್ರಕಟಿಸುವ ಮೊದಲು ಪರಿಶೀಲನೆ ಮಾಡಿಕೊಳ್ಳಿ,” ಎಂದು ಅವರು ಮನವಿ ಮಾಡಿದರು.
ನಾನು ರಾಜಕೀಯಕ್ಕೆ ಬಂದು ಹಣ ಸಂಪಾದನೆ ಮಾಡುವ ಉದ್ದೇಶ ಇಲ್ಲ. ಈ ಮನೆ ಕೂಡ ರಾಜಕೀಯಕ್ಕೆ ಬಂದ ನಂತರ ಕಟ್ಟಿಲ್ಲ. ನಾನು ಈಗ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷನಾಗಿ ಹಂತ ಹಂತವಾಗಿ ಬೆಳೆಯುತ್ತಿದ್ದೇನೆ. ಆದರೆ ಒಳ್ಳೆಯ ಹೆಸರು ಗಳಿಸಬೇಕೆಂದರೂ ಅವಕಾಶ ನೀಡುತ್ತಿಲ್ಲ,” ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ತಂದೆ ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಗದಂತೆ ತಡೆಯಲು ಈ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರಾದರೂ ನನ್ನ ಪರಿಚಯದಲ್ಲಿರುವವರು ಹಗರಣದಲ್ಲಿ ಸಿಕ್ಕಿದರೆ, ಅದಕ್ಕೆ ನಾನು ಹೇಗೆ ಹೊಣೆಗಾರ? ಎಂದು ಪ್ರಶ್ನಿಸಿದರು. ಒಟ್ಟಿನಲ್ಲಿ, ಇಡಿ ದಾಳಿ ಹಾಗೂ ಅದರ ಸುತ್ತಮುತ್ತಲಿನ ರಾಜಕೀಯ ಆರೋಪ–ಪ್ರತ್ಯಾರೋಪಗಳು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ