
ವರದಿ: ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ನ.11) : ಬರಗಾಲದಲ್ಲಿ ರಾಜಕೀಯ ಮಾಡಬೇಡಿ ಎನ್ನುತ್ತಲೇ ಎರಡು ರಾಷ್ಟ್ರೀಯ ಪಕ್ಷದ ನಾಯಕರು ಬರ ಪ್ರವಾಸದ ನೆಪದಲ್ಲಿ ರಾಜಕೀಯವೇ ಮಾಡುತ್ತಿವೆ. ಪ್ರತ್ಯೇಕ ತಂಡವಾಗಿ ಬರ ಪ್ರವಾಸ ಮಾಡುತ್ತಿರೋ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು. ರೈತರಿಗೆ ಸಮಾಧಾನ ಮಾಡಿ ಪರಿಹಾರವನ್ನು ನೀಡೋ ಕೆಲಸ ಮಾಡುತ್ತಿಲ್ಲ. ಬದಲಾಗಿ ಕೇಂದ್ರದವರು ಮೊದಲು ಪರಿಹಾರ ನೀಡಲಿ ಎಂದು ಕಾಂಗ್ರೆಸ್ ನಾಯಕರು ಹೇಳಿದ್ರೇ, ಮೊದಲು ರಾಜ್ಯ ಸರ್ಕಾರ ಎಷ್ಟು ಪರಿಹಾರ ಕೊಟ್ಟಿದೆ ಲೆಕ್ಕ ನೀಡಲಿ ಎಂದು ಬಿಜೆಪಿ ನಾಯಕರು ಕೇಳ್ತಿದ್ದಾರೆ. ಈ ಮಧ್ಯೆ ಅನ್ನದಾತ ಮಾತ್ರ ಕಣ್ಣಿರಿಡುತ್ತಿದ್ದಾನೆ.
ಪರಸ್ಪರ ಕೆಸರೆರಚಾಟೋ ಮಾಡೂ ಬಿಜೆಪಿ ಕಾಂಗ್ರೆಸ್ ನಾಯಕರು
ಮೊನ್ನೆ ಮಾಜಿ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ತಂಡದಿಂದ ಬರ ಇರೋ ಪ್ರದೇಶದ ವೀಕ್ಷಣೆ.. ನಿನ್ನೆ ಮತ್ತು ಇಂದು ಸಚಿವ ನಾಗೇಂದ್ರ ಅವರಿಂದ ಬರ ಪ್ರದೇಶದ ವೀಕ್ಷಣೆ.. ಆದ್ರೇ, ಯಾರಿಂದಲೂ ಪರಿಹಾರ ಬಿಡುಗಡೆ ಯಾವಾಗ ಎನ್ನುವ ಬಗ್ಗೆ ಮಾತೇ ಇಲ್ಲ. ಹೌದು, ಬರಗಾಲದ ಹಿನ್ನೆಲೆ ರೈತರ ಪರವಾಗಿ ನಾವಿದ್ದೇವೆ ಎನ್ನುವ ಸಂದೇಶ ಸಾರೋ ನಿಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪೈಪೊಟಿಗೆ ಬಿದ್ದವರಂತೆ ಬರ ಇರೋ ಪ್ರದೇಶಗಳಿಗೆ ಭೇಟಿ ನೀಡ್ತಿದ್ದಾರೆ. ರೈತರ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ರೈತರ ಪಾಲಿಗೆ ಸರ್ಕಾರ ಜೀವಂತವಿದೆಯೋ ಸತ್ತಿದೆಯೋ: ಯಡಿಯೂರಪ್ಪ ಕಿಡಿ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಹತ್ತಿ, ತೊಗರಿ, ಮೆಣಸಿನ ಕಾಯಿ, ಭತ್ತ ಸೇರಿದಂತೆ ಬಹುತೇಕ ಬೆಳೆಗಳು ಈ ಬಾರಿ ಕೈಕೊಟ್ಟಿವೆ. ಅವಳಿ ಜಿಲ್ಲೆಯ ಹತ್ತು ತಾಲೂಕುಗಳನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಈಗಾಗಲೇ ಘೋಷಣೆ ಮಾಡಿದೆ. ಆದ್ರೇ, ಈವರೆಗೂ ಅವಳಿ ಜಿಲ್ಲೆಯ ರೈತರಿಗೆ ಬಿಡಿಗಾಸು ಪರಿಹಾರ ಬಂದಿಲ್ಲ. ಈ ಬಗ್ಗೆ ಮಾತನಾಡಿದ ಸಚಿವ ಹೆಚ್.ಕೆ. ಪಾಟೀಲ್ ಮತ್ತು ನಾಗೇಂದ್ರ ಕೇಂದ್ರದಿಂದ 3700 ಕೋಟಿ ಪರಿಹಾರ ನೀಡಬೇಕಿದೆ. ಕೇಂದ್ರದ ತಂಡ ಬಂದು ಎಲ್ಲ ವೀಕ್ಷಣೆ ಮಾಡಿ ಹೋಗಿದೆ. ಆದ್ರೇ, ಈವರೆಗೂ ಬಿಡಿಗಾಸು ಪರಿಹಾರ ನೀಡಿಲ್ಲ. ಬರಗಾಲದಲ್ಲೂ ರಾಜಕೀಯ ಮಾಡೋ ಮೂಲಕ ಬಿಜೆಪಿ ಆಟವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಸರ್ಕಾರ ಮೊದಲು ಪರಿಹಾರ ನೀಡಲಿ
ಇನ್ನೂ ಕಾಂಗ್ರೆಸ್ ನಾಯಕರಿಗಿಂತ ಮುಂಚೆ ಮಾಜಿ ಸಚಿವ ಈಶ್ವರಪ್ಪ ನೇತೃತ್ವದಲ್ಲಿ ಬಳ್ಳಾರಿ ವಿಜಯನಗರ, ಕೊಪ್ಪಳ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಬರ ಪ್ರದೇಶದ ವೀಕ್ಷಣೆ ಮಾಡಿದ್ರು. ಮುಂಗಾರು ಮಳೆ ಕೈಕೊಟ್ಟಿದೆ ಅನ್ನದಾತ ಸಂಕಷ್ಟದಲ್ಲಿದ್ದಾರೆ. ಆದ್ರೇ ರಾಜ್ಯ ಸರ್ಕಾರದ ಯಾವೊಬ್ಬ ಸಚಿವರು ಕೂಡ ರೈತರ ಕಣ್ಣಿರು ಒರೆಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಕೇವಲ ಕೇಂದ್ರದಿಂದ ಹಣ ಬಂದಿಲ್ಲವೆಂದು ಹೇಳೋ ಬದಲು ಕೇಂದ್ರಕ್ಕೆ ಬರದ ಬಗ್ಗೆ ಸರಿಯಾದ ಮಾಹಿತಿಯನ್ನಾದ್ರೂ ನೀಡಿದ್ದಾರೆಯೇ ಎಂದು ಪ್ರಶ್ನೆ ಮಾಡೋ ಮೂಲಕ ಬರದಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಬರ ಪ್ರವಾಸದ ಬದಲು ಮೋದಿ ಕಾಲಿಗೆ ಬೀಳಿ: ಬಿಜೆಪಿಗರಿಗೆ ಸಿದ್ದು ಟಾಂಗ್
ಕೇಂದ್ರದ್ದಾದ್ರೂ ಸರಿ ರಾಜ್ಯದ್ಯಾದ್ರು ಸರಿ ಮೊದಲು ಪರಿಹಾರ ನೀಡಿ
ಬರಗಾಲದಲ್ಲಿ ಬಿಜೆಪಿ ರಾಜಕೀಯ ಮಾಡ್ತಿದೆ ಎಂದು ಕಾಂಗ್ರೆಸ್ನವರು ಹೇಳಿದ್ರೇ, ಕಾಂಗ್ರೆಸ್ ನವರೇ ರಾಜಕೀಯ ಮಾಡ್ತಿದ್ದಾರೆಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಆದ್ರೇ ಅವರಿವರ ಆರೋಪ ಪ್ರತ್ಯಾರೋಪದ ಮಧ್ಯೆ ಅನ್ನದಾತ ಮಾತ್ರ ಪರಿಹಾರವಿಲ್ಲದೇ ಕಣ್ಣಿರಿಡುತ್ತಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ