ಕನ್ನಡದಲ್ಲೇ ಔಷಧಿ ಚೀಟಿ ಬರೆಯುತ್ತಾರೆ ಹೊಸದುರ್ಗದ ಡಾ.ಸಂಜಯ್; ವೈದ್ಯರ ಕನ್ನಡ ಪ್ರೇಮಕ್ಕೆ ಮೆಚ್ಚುಗೆ

By Suvarna NewsFirst Published Sep 14, 2024, 1:04 PM IST
Highlights

ವೈದ್ಯರು ಚೀಟಿ ಮೇಲೆ ಬರೆಯುವ ಭಾಷೆ ಮೆಡಿಕಲ್ ಶಾಪ್ ನವನಿಗೆ ಬಿಟ್ರೆ ಬೇರೆಯವರಿಗೆ ಅರ್ಥನೇ ಅಗಲ್ಲಪ ಎನ್ನುವ ಎಷ್ಟೋ ಜನರು ಇದ್ದಾರೆ. ಆದ್ರೆ ಇಲ್ಲೊಬ್ಬ ಸರ್ಕಾರಿ ವೈದ್ಯ ತಮ್ಮ ಬಳಿ ಬರುವ ಎಲ್ಲಾ ರೋಗಿಗಳಿಗೆ ಕನ್ನಡದಲ್ಲಿಯೇ ಟ್ರೀಟ್ಮೆಂಟ್ ಬರೆಯುತ್ತಿರುವುದು ತುಂಬಾ ವಿಶೇಷವಾಗಿದೆ.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಸೆ.14):
ವೈದ್ಯರು ಚೀಟಿ ಮೇಲೆ ಬರೆಯುವ ಭಾಷೆ ಮೆಡಿಕಲ್ ಶಾಪ್ ನವನಿಗೆ ಬಿಟ್ರೆ ಬೇರೆಯವರಿಗೆ ಅರ್ಥನೇ ಅಗಲ್ಲಪ ಎನ್ನುವ ಎಷ್ಟೋ ಜನರು ಇದ್ದಾರೆ. ಆದ್ರೆ ಇಲ್ಲೊಬ್ಬ ಸರ್ಕಾರಿ ವೈದ್ಯ ತಮ್ಮ ಬಳಿ ಬರುವ ಎಲ್ಲಾ ರೋಗಿಗಳಿಗೆ ಕನ್ನಡದಲ್ಲಿಯೇ ಟ್ರೀಟ್ಮೆಂಟ್ ಬರೆಯುತ್ತಿರುವುದು ತುಂಬಾ ವಿಶೇಷವಾಗಿದೆ.

ತಪಾಸಣೆಗೆ ಬರುವ ರೋಗಿಗಳಿಗೆ ಸಮಾಧಾನವಾಗಿಯೇ ಮಾತನಾಡಿಸುತ್ತಾ ಅವರ ಅಳಲನ್ನು ಆಲಿಸ್ತಿರೋ ವೈದ್ಯರ ಹೆಸರು ಡಾ.ಸಂಜಯ್ ಅಂತ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರೋ ಇವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. 

Latest Videos

ವೈದ್ಯರು ಕನ್ನಡದಲ್ಲೇ ಔಷಧಿ ಚೀಟಿ ಬರೆಯಲು ಕಅಪ್ರಾ ಮನವಿ..!

ವೈದ್ಯರು ಅಂದ್ರೆ ಸಾಕು ಅವರ ಬಳಿ ಹೋಗುವ ರೋಗಿಗಳು ಒಂದು ಕ್ಷಣ ಯೋಚನೆ ಮಾಡಿ ಹೋಗ್ತಾರೆ. ಯಾಕಂದ್ರೆ ವೈದ್ಯರ ಬಳಿ ಹೋದ್ಮೇಲೆ ಜಾಸ್ತಿ ಮಾತನಾಡಂಗಿಲ್ಲ, ಮಾತನಾಡಿದ್ರೆ ಅವರು ಬೈಯ್ತಾರೆ ಎನ್ನುವ ಭಯ. ಹಾಗಾಗಿ ಅವರ ಸಮಸ್ಯೆಗಳನ್ನು ಹೇಳುತ್ತಿರುವಾಗಲೇ ವೈದ್ಯರು ಒಂದು ಚೀಟಿ ಮೇಲೆ ಅವರದ್ದೇ ಭಾಷೆಯಲ್ಲಿ ಔಷಧಿ ಕುರಿತು ಗೀಚುತ್ತಾ ಇರುತ್ತಾರೆ. ಅದನ್ನ ಅಲ್ಲಿ ಹೋದಂತಹ ಯಾವುದೇ ರೋಗಿಯೂ ಕೂಡ ಕಂಡು ಹಿಡಿಯಲು ಆಗುವುದಿಲ್ಲ. ಯಾಕಂದ್ರೆ ವೈದ್ಯರ ಭಾಷೆ ಅರ್ಥವಾಗೋದು ಒಬ್ಬರಿಗೆ ಮಾತ್ರ ಅದು ಮೆಡಿಕಲ್ ಶಾಪ್ ನವರಿಗೆ ಅಂದ್ರೆ ತಪ್ಪಾಗಲಿಕ್ಕಿಲ್ಲ. ಆ ಚೀಟಿಯಲ್ಲಿ ರೋಗಿಯ ಔಷಧಿ ಕುರಿತು ಪುಟಗಟ್ಟಲೇ ವೈದ್ಯರು ಇಂಗ್ಲೀಷ್ ನಲ್ಲಿಯೇ ಗೀಚಿದ್ರೆ ಯಾರಿಗ್ ತಾನೇ ಅರ್ಥವಾಗುತ್ತೆ ಬಿಡಿ. ಅದನ್ನು ನೋಡಿದ ಎಷ್ಟೋ ಮಂದಿ ರೋಗಿಗಳು ಇದ್ಯಾವ ಲಿಪಿನಪ್ಪ ಈ ರೀತಿ ಇದೆ ಎಂದು ತಲೆ ಕೆಡಿಸಿಕೊಂಡು ಒದ್ದಾಡಿರೋ ನಿದರ್ಶನಗಳು ಉಂಟು.

ಆದ್ರೆ ಡಾ.ಸಂಜಯ್‌ ಬಗ್ಗೆ ಹೇಳೋದಾದ್ರೆ ಹೊಸದುರ್ಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಬರುವ ‌ಎಲ್ಲಾ ರೋಗಿಗಳನ್ನು ಪ್ರೀತಿಯಿಂದಲೆ ಮಾತನಾಡಿಸುತ್ತಾ ಅವರ ಸಮಸ್ಯೆಯನ್ನು ಆಲಿಸುತ್ತಾರೆ. ಮೂಲತಃ ಕೀಲು ಮೂಳೆ ತಜ್ಞರಾಗಿ ಕೆಲಸ ಮಾಡ್ತಿರೋ ಇವರು, ರೋಗಿಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎನ್ನುವ ಉದ್ದೇಶದಿಂದ, ಟ್ರೀಟ್ಮೆಂಟ್ ಚೀಟಿಯನ್ನು ಕನ್ನಡದಲ್ಲಿಯೇ ಬರೆಯುವ ಮೂಲಕ ವೈದ್ಯ ಲೋಕದಲ್ಲಿ ಮಾದರಿಯಾಗಿದ್ದಾರೆ. ಇನ್ನೂ ಇವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಉತ್ತಮ‌ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಇನ್ನೂ ಈ ಆಲೋಚನೆ ಯಾಕೆ ಬಂತು ಎಂದು ಅವರನ್ನೇ ವಿಚಾರಿಸಿದ್ರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಒತ್ತಾಸೆಯಂತೆ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯವ ವಿಚಾರನ್ನು ಮನಗೊಂಡು ನಿನ್ನೆಯಿಂದಲೇ‌ ನಾನು ನಮ್ಮ ಬಳಿ ಬರುವ ಎಲ್ಲಾ ರೋಗಿಗಳಿಗೆ ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವುದನ್ನು ಶುರು ಮಾಡಿದ್ದೇನೆ. ಸುಮಾರು ೫೦% ಪ್ರಮಾಣ ಇರುವ ಎಲ್ಲಾ ಔಷಧಿಗಳನ್ನು ಕನ್ನಡದಲ್ಲಿಯೇ ಬರೆಯುತ್ತಿದ್ದೇನೆ. ಚಿಕಿತ್ಸೆಯ ಸಲಹೆ ವಿಚಾರ ಒಂದನ್ನು ಬಿಟ್ಟು ಇನ್ನೆಲ್ಲಾ ಔಷಧಿ ಕುರಿತು ಸರಾಗವಾಗಿಯೇ ಕನ್ನಡದಲ್ಲಿಯೇ ಚೀಟಿ ಬರೆಯುತ್ತಿದ್ದೇನೆ.‌ ಇನ್ಮುಂದೆಯೂ ಕನ್ನಡದಲ್ಲಿಯೇ ಔಷಧಿಯನ್ನು ಬರೆಯುವ ಎಲ್ಲಾ ಪ್ರಯತ್ನವನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಹೆಮ್ಮೆಯಿಂದ ಹೇಳುವ ಮೂಲಕ, ಮತ್ತೊಮ್ಮೆ‌ ಕನ್ನಡದ ಕಂದ ವೈದ್ಯ ಎಂದು ಹೆಸರಾದರು.

ಪ್ರಾಥಮಿಕ ಶಾಲೆಗೆ ಆಂಗ್ಲ ಮಾಧ್ಯಮ ಬೇಡ: ಡಾ.ಪುರುಷೋತ್ತಮ ಬಿಳಿಮಲೆ ಮನವಿ

 ಇಂತಹ ಕಾರ್ಯಗಳನ್ನು ವೈದ್ಯರು ಹೆಚ್ಚಾಗಿ ಮಾಡೋದ್ರಿಂದ ರೋಗಿಗಳಿಗೂ ಅನುಕೂಲ‌ ಆಗಲಿದೆ. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳು ವಿದ್ಯಾವಂತರೇ ಆಗಿರಲ್ಲ. ವೈದ್ಯರು ಈ ರೀತಿ ಕನ್ನಡದಲ್ಲಿ ಔಷಧಿ ಚೀಟಿ ಬರೆಯೋದ್ರಿಂದ‌ ನಮಗೆ ಯಾವ ಖಾಯಿಲೆ ಇದೆ ಎಂಬುದು ರೋಗಿಗಳಿಗೆ ತಿಳಿಯುತ್ತದೆ. ಇನ್ನೂ ಡಾ. ಸಂಜಯ್ ರೀತಿ ಎಲ್ಲರೂ ತಮ್ಮ ತಮ್ಮ ಆಸ್ಪತ್ರೆಗಳಲ್ಲಿ ಕನ್ನಡದಲ್ಲಿಯೇ ಚೀಟಿ ಬರೆಯಲಿ ಎಂಬುದು ನಮ್ಮ‌ ಕಳಕಳಿ.

click me!