
ಚನ್ನರಾಯಪಟ್ಟಣ ಫೆ.(10): ಪ್ರಸ್ತುತ ಆಹಾರದಲ್ಲಿ ಕಲಬೆರಕೆ ಎಲ್ಲ ಕಡೆ ನಡೆಯುತ್ತಿದ್ದು, ಬಾಯಿರುಚಿಯ ಆಸೆಗೆ ಬಿದ್ದು ಆರೋಗ್ಯ ಕೆಡಿಸಿಕೊಳ್ಳುವ ಮಾರ್ಗವನ್ನು ದೂರ ಮಾಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ನವೋದಯ ವಿದ್ಯಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಆಹಾರ ಮೇಳ ಉದ್ಘಾಟಿಸಿ ಮಾತನಾಡಿ, ವಿಷಕಾರಿ ಅಂಶಗಳಿರುವ ನಿಷೇಧಿತ ಪದಾರ್ಥಗಳನ್ನು ಒಳ್ಳೆಯ ಪದಾರ್ಥಗಳೊಂದಿಗೆ ಮಾರಾಟ ಮಾಡುವುದರಿಂದ ದೀರ್ಘಕಾಲಿಕ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಹೋಟೆಲ್ ಮತ್ತು ಬೀದಿ ಬದಿ ಫಾಸ್ಟ್ ಫುಡ್ಗಳನ್ನು ಗ್ರಾಹಕರ ಸೆಳೆಯಲು ಪದಾರ್ಥಗಳಿಗೆ ವಿಶೇಷವಾಗಿ ಆಹಾರ ಬಣ್ಣಗಳನ್ನು ಬಳಸಲಾಗುತ್ತದೆ. ಆಹಾರ ಸುರಕ್ಷತಾ ಟೇಸ್ಟಿಂಗ್ ಪೌಡರ್, ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ. ಹೀಗಾಗಿ ಆಹಾರ ಸುರಕ್ಷತಾ ಅಧಿಕಾರಿಗಳು ನಿಗಾ ಇಡಬೇಕು. ಅಂತಹ ಘಟಕಗಳನ್ನು ಬಂದ್ ಮಾಡಿಸುವ ಮೂಲಕ ಜನರ ಆರೋಗ್ಯ ಕಾಪಾಡಲು ಮುಂದಾಗಬೇಕು ಎಂದರು. ಶಾಲೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳಲ್ಲಿ ವ್ಯವಹಾರ ಜ್ಞಾನ ಮೂಡಲಿದೆ. ಸಾಮಾನ್ಯ ಜ್ಞಾನವನ್ನೂ ವೃದ್ಧಿಸಿಕೊಳ್ಳಬಹುದಾಗಿದ್ದು ಲಾಭ, ನಷ್ಟ ಲೆಕ್ಕಾಚಾರದ ಅರಿವು ಮೂಡುತ್ತದೆ ಎಂದರು.
ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಎನ್.ಅನಿಲ್, ಪ್ರಾಂಶುಪಾಲ ಎ.ಟಿ.ಸಂಜಯ್ಕುಮಾರ್, ಸುರೇಶ್, ನವೋದಯ ವಿದ್ಯಾಸಂಸ್ಥೆ ಅಧ್ಯಕ್ಷ ಸಿ.ಜೆ.ಮಂಜುನಾಥ್, ಗೌರವಾಧ್ಯಕ್ಷ ಸಿ.ಎಸ್. ಶೇಷಶಯನ, ಉಪಾಧ್ಯಕ್ಷ ಎಸ್.ಪ್ರಮೋದ್, ಕಾರ್ಯದರ್ಶಿ ಕೆ.ಪಿ.ಶರತ್, ಖಜಾಂಚಿ ಜಲೇಂದ್ರ, ನಿರ್ದೇಶಕ ಆನಂದ್ ಕಾಳೇನಹಳ್ಳಿ ಇತರರಿದ್ದರು.
ಪ್ರಾಥಮಿಕ ಶಾಲೆಯಿಂದ ಪದವಿಪೂರ್ವ ಕಾಲೇಜುವರೆಗಿನ ವಿದ್ಯಾರ್ಥಿಗಳು ಆಹಾರ ಮೇಳದಲ್ಲಿ ಭಾಗವಹಿಸಿದ್ದರು. ಬಗೆಬಗೆಯ ಆಹಾರ ತಿನಿಸುಗಳು ಬಾಯಲ್ಲಿ ನೀರೂರುವಂತೆ ಮಾಡಿದವು. ಎಳನೀರು, ಜ್ಯೂಸ್, ವೆಜ್ ಬಿರಿಯಾನಿ, ಪಾನಿಪುರಿ, ಮಜ್ಜಿಗೆ, ಹಣ್ಣುಗಳು, ಒಗ್ಗರಣೆ ಪುರಿ, ಜಾಮೂನು, ರಾಗಿರೊಟ್ಟಿ ಹುಚ್ಚೆಳ್ಳುಪುಡಿ, ಅಕ್ಕಿ ಮತ್ತು ರಾಗಿ ಒತ್ತುಶಾವಿಗೆ, ಮುದ್ದೆಊಟ, ವಡಾಪಾವ್ ಮುಂತಾದ ತಿನಿಸುಗಳನ್ನು ಮಕ್ಕಳು ಮಾರಾಟ ಮಾಡಿ ಗಮನ ಸೆಳೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ