'ನೀರು ಉಳಿಸಿ ಬೆಂಗಳೂರು ಬೆಳೆಸಿ' ಅಭಿಯಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ ಚಾಲನೆ

By Kannadaprabha NewsFirst Published Mar 15, 2024, 2:33 PM IST
Highlights

ಬರದ ಸಂದರ್ಭದಲ್ಲಿ ನಾವೆಲ್ಲರೂ ಜವಾಬ್ದಾರಿಯುತವಾಗಿ ಮತ್ತು ವಿವೇಚನೆಯಿಂದ ನೀರನ್ನು ಬಳಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರು (ಮಾ.15): ಬರದ ಸಂದರ್ಭದಲ್ಲಿ ನಾವೆಲ್ಲರೂ ಜವಾಬ್ದಾರಿಯುತವಾಗಿ ಮತ್ತು ವಿವೇಚನೆಯಿಂದ ನೀರನ್ನು ಬಳಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

‘ನೀರು ಉಳಿಸಿ, ಬೆಂಗಳೂರು ಬೆಳೆಸಿ’ ಅಭಿಯಾನಕ್ಕೆ ಚಾಲನೆ ನೀಡಿ, ಅಂತರ್ಜಲ ಮತ್ತು ನೀರಿನ ಸಂರಕ್ಷಣೆಗೆ BWSSB ಅಭಿವೃದ್ಧಿಪಡಿಸಿದ ನಾಲ್ಕು ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

 

ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ: ಗ್ಯಾರಂಟಿ ಸಮಾವೇಶದಲ್ಲಿ ಡಿಕೆ ಶಿವಕುಮಾರ ಭವಿಷ್ಯ!

'ಬೆಂಗಳೂರು ನಗರ ಈ ವರ್ಷ ಮಳೆಯಿಲ್ಲದೆ ತತ್ತರಿಸಿದೆ. ನಗರದಲ್ಲಿ 6,900 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಉಳಿದ 7,000 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ನೀರಿನ ವಿವೇಚನಾಯುಕ್ತ ಬಳಕೆ ಬಗ್ಗೆ ಜಾಗೃತಿ ಮೂಡಿಸಬೇಕು. ಕೊಳವೆಬಾವಿಗಳ ನೀರಿನ ಬಳಕೆ ಮೇಲೆ ನಿಗಾ ಇಡಲು ಪ್ರಯತ್ನಿಸಲಾಗುತ್ತಿದೆ. ಯಾರಾದರೂ ಹೊಸ ಕೊಳವೆಬಾವಿ ಕೊರೆಯಲು, ಬಿಡಬ್ಲ್ಯುಎಸ್ಎಸ್‌ಬಿ ಅನುಮತಿ ಪಡೆಯಬೇಕು' ಎಂದರು.

'ಅಧಿಕಾರಿಗಳು ಬೆಂಗಳೂರಿನ ಖಾಸಗಿ ಟ್ಯಾಂಕರ್‌ಗಳನ್ನು ನೋಂದಾಯಿಸಿದ್ದಾರೆ ಮತ್ತು ಟ್ಯಾಂಕರ್‌ಗಳಿಗೆ ಸರ್ಕಾರವು ಸಬ್ಸಿಡಿ ದರವನ್ನು ನಿಗದಿಪಡಿಸಿದೆ. ಟ್ಯಾಂಕರ್‌ಗಳನ್ನು ನೋಂದಾಯಿಸುವ ಮೂಲಕ ಟ್ಯಾಂಕರ್ ನೀರು ಸರಬರಾಜು ಹೆಸರಿನಲ್ಲಿ ನಡೆಯುತ್ತಿದ್ದ ದಂಧೆಯನ್ನು ಪರಿಣಾಮಕಾರಿಯಾಗಿ ನಿಲ್ಲಿಸಿದ್ದಾರೆ' ಎಂದು ಹೇಳಿದರು.

ನೀರಿನ ಅಭಾವ ಪರಿಸ್ಥಿತಿಯನ್ನು ಸರ್ಕಾರ ಉತ್ತಮವಾಗಿ ನಿರ್ವಹಿಸುತ್ತಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯ ಕಾರಣ ಈ ವಿಷಯದ ಬಗ್ಗೆ ಸಾಕಷ್ಟು ಪ್ರಚಾರ ಮತ್ತು ರಾಜಕೀಯ ನಡೆಯುತ್ತಿದೆ. ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳಬಾರದು ಮತ್ತು ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಚುನಾವಣೆ ನೀತಿ ಸಂಹಿತೆ ಏನೇ ಬಂದರೂ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದರು.

ಎಲ್ಲೆಲ್ಲಿ ನೀರಿನ ಕೊರತೆ ಇದೆಯೋ ಅಲ್ಲಿ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಿಡಬ್ಲ್ಯುಎಸ್‌ಎಸ್‌ಬಿ ಅಧ್ಯಕ್ಷ ಡಾ.ವಿ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, ನಗರದಲ್ಲಿ ಪ್ರಸ್ತುತ ನೀರಿನ ಸಮಸ್ಯೆ ಕುರಿತು ವಿವರಿಸಿ, ಸಾರ್ವಜನಿಕರು ಸಹಕರಿಸಿದರೆ ಮಾತ್ರ ನೀರಿನ ಸಮಸ್ಯೆ ನೀಗಿಸಲು ಸಾಧ್ಯ ಎಂದರು.

ಸಮಾವೇಶಕ್ಕೆ ಬಂದವರಿಗೆ ₹200 ಗ್ಯಾರಂಟಿ! ಕಾರ್ಯಕ್ರಮ ಮುಗಿದ ಬಳಿಕ ಹಣಕ್ಕಾಗಿ ಬಿಸಲಲ್ಲಿ ಕಾದು ಸುಸ್ತಾದ ಮಹಿಳೆಯರು!

ನೀರಿನ ದರ ಏರಿಕೆ?

ಮುಂದಿನ ದಿನಗಳಲ್ಲಿ ನೀರಿನ ದರ ಹೆಚ್ಚಳದ ಸುಳಿವು ನೀಡಿದ ಶಿವಕುಮಾರ್, ಕಳೆದ 10 ವರ್ಷಗಳಿಂದ ನೀರಿನ ದರವನ್ನು ಹೆಚ್ಚಿಸಿಲ್ಲ. ನಾನು ಈ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ದಿನದಿಂದ ಬಿಡಬ್ಲ್ಯುಎಸ್‌ಎಸ್‌ಬಿಯನ್ನು ಬಲಪಡಿಸಲು ನಿರ್ಧರಿಸಿದ್ದೇನೆ. ಸಾರ್ವತ್ರಿಕ ಚುನಾವಣೆಯ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

click me!