
ಬೆಂಗಳೂರು: ಬೆಂಗಳೂರು ದೇಶದ ಟ್ಯಾಲೆಂಟ್ ಹಬ್ ಆಗಿದೆ. ದೇಶದಲ್ಲೇ ಹೆಚ್ಚು ವೇತನ ಕರ್ನಾಟಕದಲ್ಲಿ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ 250 ಖಾಸಗಿ ಕಂಪನಿಗಳು, ಲಾಡ್ ಫೌಂಡೇಷನ್ ಸಹಯೋಗದಲ್ಲಿ ಕಾರ್ಮಿಕ ಇಲಾಖೆಯಿಂದ ರಾಜ್ಯದ 1,608 ಅಂಗವಿಕಲರಿಗೆ ತ್ರಿಚಕ್ರ ವಾಹನ ಸೇರಿ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾವು ಬರೀ ಕಾರ್ಮಿಕರ ಕಡೆ ಮಾತ್ರ ನೋಡದೆ, ಉದ್ಯೋಗದಾತರ ಕಡೆಯೂ ಗಮನ ಹರಿಸಬೇಕು. ಉದ್ಯೋಗದಾತ ಗಟ್ಟಿಯಾಗಿದ್ದರೆ, ಉದ್ಯೋಗಿಯು ಗಟ್ಟಿಯಾಗಿರುತ್ತಾನೆ. ಉದ್ಯೋಗದಾತರಿಲ್ಲದೆ ಉದ್ಯೋಗಿಗಳು ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಉದ್ಯೋಗಿ ಮತ್ತು ಉದ್ಯೋಗದಾತರ ನಡುವೆ ಸಮತೋಲನ ಕಾಪಾಡಬೇಕು ಎಂದರು.
ರಾಜ್ಯದಲ್ಲಿ ನೌಕರರಿಗೆ ಉತ್ತಮ ವೇತನ ಸಿಗುತ್ತಿದೆ. ಅನೇಕ ಉದ್ಯಮಗಳು ಕರ್ನಾಟಕಕ್ಕೆ ಬರುತ್ತಿವೆ. ಆದರೆ, ಕೇರಳ ಅಥವಾ ಇನ್ನಿತರ ಕಮ್ಯುನಿಸ್ಟ್ ವರ್ತನೆ ಇರುವ ರಾಜ್ಯಗಳಿಗೆ ಹೋಗುವುದಿಲ್ಲ. ಫಾಕ್ಸ್ಕಾನ್ ಕಂಪನಿ 30,000ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಪಿಯುಸಿ ಓದಿದವರಿಗೆ 30,000 ರು. ದಿಂದ 40,000 ರು. ಸಂಬಳ ನೀಡುತ್ತಿದೆ. ನೌಕರರಿಗೆ ಇಡೀ ದೇಶದಲ್ಲೇ ಹೆಚ್ಚು ವೇತನ ಕರ್ನಾಟಕದಲ್ಲಿದೆ. ಇದರಲ್ಲಿ ಇನ್ನೂ ಸಮಾನತೆ ಕಾಪಾಡಬೇಕು ಎನ್ನುವುದು ನಮ್ಮ ಆಶಯ ಎಂದು ಹೇಳಿದರು.
ಅಂಗವಿಕಲರ ಇಲಾಖೆ, ಕಾರ್ಮಿಕ ಇಲಾಖೆಯಿಂದ ನೆರವು, ಉದ್ಯೋಗವಕಾಶಗಳನ್ನು ನೀಡಲಾಗುತ್ತಿದೆ. ಅಂಗವಿಕಲರಿಗೆ ದೇವರು ವರವೂ ಕೊಟ್ಟಿಲ್ಲ ಶಾಪವನ್ನು ನೀಡಿಲ್ಲ. ಒಂದು ಪರೀಕ್ಷೆಯನ್ನು ಕೊಟ್ಟಿದ್ದಾನಷ್ಟೇ. ಯಾರೂ ಮಾನಸಿಕವಾಗಿ ಧೃತಿಗೆಡಬಾರದು. ಗಣೇಶ ದೇವರಿಗೆ ಮುಖ, ಹೊಟ್ಟೆ, ದೇಹ ಒಂದೊಂದು ರೀತಿ ಇದೆ. ಆತನನ್ನು ಅಂಗವಿಕಲ ಎಂದು ಕರೆಯಬಹುದು. ಆದರೆ, ಆತ ಎಲ್ಲಾ ವಿಘ್ನಗಳನ್ನು ನಿವಾರಿಸುವ ನಾಯಕನಾಗಿದ್ದಾನೆ. ಅದೇ ರೀತಿ ನೀವು ಕೂಡ ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಚಿವ ಸಂತೋಷ್ ಲಾಡ್ ಮಾತನಾಡಿ, ಭಾರತವೂ 4 ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಷ್ಟ್ರವಾಗಿದ್ದರೂ, ದೇಶದ ಶೇ.1ರಷ್ಟು ಜನ ದೇಶದ ಸಂಪತ್ತಿನಲ್ಲಿ ಶೇ.40ರಷ್ಟು ಪಾಲು ಹೊಂದಿದ್ದಾರೆ. ಇದು ನಮ್ಮ ದೇಶದಲ್ಲಿ ಅಸಮಾನತೆ ಎತ್ತಿ ತೋರಿಸುತ್ತಿದೆ. ಶ್ರೀಮಂತರು ಶ್ರೀಮಂತರಾಗುತ್ತಿದ್ದರೆ, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ನಮ್ಮ ದೇಶದ ಬಗ್ಗೆ ಏನು ತೋರಿಸಲಾಗುತ್ತಿದೆಯೋ ಅದು ಶ್ರೇಷ್ಠವಲ್ಲ. ಶೇ.83ರಷ್ಟು ಜನ ಅಸಂಘಟಿತ ವಲಯದಲ್ಲಿದ್ದಾರೆ ಎಂದರು.
ಸಂಸದ ಈ. ತುಕಾರಾಂ, ಹರಿಹರ ಪಂಚಮಸಾಲಿ ಪೀಠದ ವಚನನಾನಂದ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ನಿಟ್ಟೂರು ರೇಣುಕಾನಂದ ಸ್ವಾಮೀಜಿ ಮತ್ತಿತರರು ಉಪಸ್ಥಿತರಿದ್ದರು.
ಮುಂಬರುವ ಬಜೆಟ್ ಅಧಿವೇಶನದಲ್ಲಿ ಮನೆ ಕೆಲಸದವರ ಬಿಲ್, ಅಂಗವಿಕಲರ ಬಿಲ್, ವಿಧವಾ ಬಿಲ್ ತರುವ ಉದ್ದೇಶವಿದೆ. ಅಲ್ಲದೆ, ರಾಜ್ಯದ ಅಂಸಘಟಿತ ವಲಯದ 1.3 ಕೋಟಿ ಕಾರ್ಮಿಕರ ಅನುಕೂಲಕ್ಕಾಗಿ ಪೆಟ್ರೋಲ್, ಡೀಸೆಲ್ ಮೇಲೆ 1 ರು. ಸೆಸ್ ವಿಧಿಸುವ ಪ್ರಸ್ತಾವನೆ ನಮ್ಮ ಇಲಾಖೆಯಿಂದ ಇದೆ. ಸರ್ಕಾರದಿಂದ ಅನುಮೋದನೆ ಮಾಡಿಸಿಕೊಡಬೇಕು. ಆ ಹಣದಿಂದ ಕಾರ್ಮಿಕರ ಕುಟುಂಬಕ್ಕೆ ಅನುಕೂಲ ಆಗುತ್ತದೆ ಎಂದು ಸಚಿವ ಸಂತೋಷ್ ಲಾಡ್ ಅವರು ವೇದಿಕೆಯಲ್ಲೇ ಉಪಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ