ಆದಿಚುಂಚನಗಿರಿಯಲ್ಲಿ ಡಿಕೆಶಿ ಅಮಾವಾಸ್ಯೆ ಪೂಜೆ: ಸಾಮೂಹಿಕ ಭೋಜನ, ಶ್ರೀಗಳಿಂದ ಆಶೀರ್ವಾದ

By Kannadaprabha NewsFirst Published Mar 22, 2023, 6:41 AM IST
Highlights

ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಂಗಳವಾರ ನಡೆದ ಯುಗಾದಿ ಮುನ್ನಾದಿನದ ಅಮಾವಾಸ್ಯೆ ವಿಶೇಷ ಪೂಜೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪತ್ನಿ ಉಷಾ ಹಾಗೂ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ದಂಪತಿ ಪಾಲ್ಗೊಂಡು ಕ್ಷೇತ್ರಾಧಿದೇವತೆಗಳು ಹಾಗೂ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು.

ಮಂಡ್ಯ/ನಾಗಮಂಗಲ (ಮಾ.22): ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಂಗಳವಾರ ನಡೆದ ಯುಗಾದಿ ಮುನ್ನಾದಿನದ ಅಮಾವಾಸ್ಯೆ ವಿಶೇಷ ಪೂಜೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪತ್ನಿ ಉಷಾ ಹಾಗೂ ಮಾಗಡಿ ಕ್ಷೇತ್ರದ ಮಾಜಿ ಶಾಸಕ ಬಾಲಕೃಷ್ಣ ದಂಪತಿ ಪಾಲ್ಗೊಂಡು ಕ್ಷೇತ್ರಾಧಿದೇವತೆಗಳು ಹಾಗೂ ಪೀಠಾಧ್ಯಕ್ಷ ನಿರ್ಮಲಾನಂದನಾಥಶ್ರೀಗಳ ಆಶೀರ್ವಾದ ಪಡೆದುಕೊಂಡರು. ಕ್ಷೇತ್ರದ ಕಾಲಭೈರವೇಶ್ವರಸ್ವಾಮಿ, ಮಾಳಮ್ಮದೇವಿ, ಆದಿಶಕ್ತಿ ಸ್ಥಂಬಾಬಿಕ, ಮಹಾಗಣಪತಿ, ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಎಲ್ಲ ದೇವತೆಗಳಿಗೆ ಪೂಜೆ ಸಲ್ಲಿಸಿದರು. 

ನಂತರ, ಕಾಲಭೈರವೇಶ್ವರ ದೇವಸ್ಥಾನದಲ್ಲಿ ಉತ್ಸವ ಮೂರ್ತಿಗಳನ್ನು ಸ್ವತ: ಡಿಕೆಶಿ ದಂಪತಿ ಹಾಗೂ ಮಾಗಡಿ ಬಾಲಕೃಷ್ಣ ದಂಪತಿ ಎಳೆದು, ಈಡುಗಾಯಿ ಒಡೆಯುವ ಮೂಲಕ ಭಕ್ತಿಭಾವ ಸಮರ್ಪಿಸಿದರು. ಮೂರು ಗಂಟೆಗೂ ಹೆಚ್ಚು ಕಾಲ ನಡೆದ ಪೂಜಾ ಮಹೋತ್ಸವದಲ್ಲಿ ಡಿಕೆಶಿ ದಂಪತಿ ಶಾಂತ ಚಿತ್ತರಾಗಿ ಪಾಲ್ಗೊಂಡರು. ಕ್ಷೇತ್ರದಲ್ಲಿರುವ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳ ಮಹಾಸಮಾಧಿಗೂ ವಿಶೇಷ ಪೂಜೆ ಸಲ್ಲಿಸಿದರು. ನಂತರ, ಸಾಮೂಹಿಕ ಭೋಜನದಲ್ಲಿ ಜನಸಾಮಾನ್ಯರೊಂದಿಗೆ ಕುಳಿತು ಭೋಜನ ಸವಿದರು. ಬಳಿಕ, ನಿರ್ಮಲಾನಂದನಾಥಸ್ವಾಮೀಜಿ ಅವರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಗೌಪ್ಯವಾಗಿ ಸಮಾಲೋಚನೆ ನಡೆಸಿದರು. 

ಬಿಜೆಪಿ, ಕಾಂಗ್ರೆಸ್‌ಗೆ ಬೆಂಗಳೂರು ದುಡ್ಡು ಮಾಡುವ ಎಟಿಎಂ: ಎಚ್‌.ಡಿ.ಕುಮಾರಸ್ವಾಮಿ ಕಿಡಿ

ಡಿಕೆಶಿ ದಂಪತಿ ಹಾಗೂ ಮಾಗಡಿ ಬಾಲಕೃಷ್ಣ ದಂಪತಿಗೆ ನಿರ್ಮಲಾನಂದನಾಥಶ್ರೀಗಳು ಶಾಲು ಹೊದಿಸಿ, ಹಾರ ಹಾಕಿ, ಫಲ ತಾಂಬೂಲ ನೀಡಿ ಆಶೀರ್ವದಿಸಿದರು. ಕಾಲಭೈರವೇಶ್ವರಸ್ವಾಮಿಗೆ ಅಮಾವಾಸ್ಯೆಯಂದು ವಿಶೇಷ ಪೂಜೆ ಮಾಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದರು. ನೀವೂ ಸಿಎಂ ಮಾಡುವಂತೆ ಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ದೇವರನ್ನು ಕೇಳೋದು ನಾನು, ವರ ಕೊಡೋದು ದೇವರು. ಸಂಕಲ್ಪ ಮಾಡಿಕೊಳ್ಳುವುದು ನನಗೂ, ಭಗವಂತನಿಗೂ ಬಿಟ್ಟಿದ್ದು. ಅದಕ್ಕೆ ಪೂಜಾರಿಗಳು ಬೇಕಿಲ್ಲ ಎಂದರು. ಮತ್ತೆರಡು ಅಮಾವಾಸ್ಯೆ ಪೂಜೆಗೆ ಬರ್ತಿರಾ ಎಂಬ ಪ್ರಶ್ನೆಗೆ ಮುಂದಿನ ಅಮಾವಾಸ್ಯೆ ಪೂಜೆಗೆ ಬಂದರೆ ನಿಮಗೆ ತಿಳಿಸುತ್ತೇನೆ ಬಿಡಿ ಎಂದರು.

ಬೆಂಗಳೂರಿನಲ್ಲಿ ಯುಗಾದಿ ಹಬ್ಬದ ಖರೀದಿ ಬಲುಜೋರು: ಕೊಂಚ ಏರಿದ ಬೆಲೆ

ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಉರಿಗೌಡ ಮತ್ತು ನಂಜೇಗೌಡ ಅನ್ನೋರು ಯಾರೂ ಇಲ್ಲ. ಸಿ.ಟಿ.ರವಿಯೇ ಉರೀಗೌಡ, ಅಶ್ವತ್ಥನಾರಾಯಣನೇ ನಂಜೇಗೌಡ. ಮೊದಲು 40% ಫೈಲ್‌ ಹಾಗೂ ಕೊರೋನಾ ಸಂದರ್ಭದ ಭ್ರಷ್ಟಾಚಾರದ ಬಗ್ಗೆ ಸಿನಿಮಾ ತೆಗೆಯಲಿ. ಇದು ಇಡೀ ಒಕ್ಕಲಿಗ ಸಮುದಾಯಕ್ಕೆ ಮಸಿ ಬಳಿಯುವ ಕೆಲಸವಾಗಿದೆ. ನಾವ್ಯಾರು ಹೇಡಿಗಳಲ್ಲ. ಅವನ್ಯಾವನನ್ನೋ ಕರೆದು ಸಿನಿಮಾ ಮಾಡಬೇಡ ಎಂದು ಕೂರಿಸಿ ಶ್ರೀಗಳು ಮಾತನಾಡಬಾರದಿತ್ತು. ಇವರ ವಿರುದ್ಧ ಹೋರಾಟಕ್ಕೆ ನಿರ್ಮಲಾನಂದನಾಥಶ್ರೀಗಳು ನೇತೃತ್ವ ವಹಿಸಬೇಕು. ಹೋರಾಟದ ನೇತೃತ್ವ ವಹಿಸುವಂತೆ ಶ್ರೀಗಳಲ್ಲಿ ಕೇಳಿದ್ದೇನೆ. ಇಲ್ಲವಾದರೆ ಒಂದು ಪಕ್ಷದ ಅಧ್ಯಕ್ಷನಾಗಿ ನಾನೇ ಹೋರಾಟ ಹಮ್ಮಿಕೊಳ್ಳುತ್ತೇನೆ ಎಂದರು. ಉರಿಗೌಡ, ನಂಜೇಗೌಡ ವಿಚಾರವನ್ನು ಪಠ್ಯಕ್ಕೆ ಸೇರಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವ ಪಠ್ಯನೂ ಇಲ್ಲ. ಅಶ್ವತ್ಥನಾರಾಯಣ, ಸಿ.ಟಿ.ರವಿಗೆ ಪಾಠ ಹೇಳಿಕೊಟ್ಟಮೇಷ್ಟ್ರನ್ನ ಕೇಳಿ. ಅವರೆನಾದರೂ ಹೇಳಿಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

click me!