ರಸಗೊಬ್ಬರ ಹಂಚಿಕೆಯಲ್ಲಿ ತಾರತಮ್ಯ: ಸಚಿವೆ ಶೋಭಾ ಕರಂದ್ಲಾಜೆ ಎಚ್ಚರಿಕೆ

By Kannadaprabha NewsFirst Published Jul 16, 2023, 5:23 AM IST
Highlights

ರಸಗೊಬ್ಬರ ವಿತರಣೆಯಲ್ಲಿ ತಾರತಮ್ಯ ಮಾಡಿದರೆ ಸರಿ ಇರೋದಿಲ್ಲ. ಇವೆಲ್ಲಾ ನಡೆಯೋದಿಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

 ಚಿಕ್ಕಮಗಳೂರು (ಜು.16) :  ರಸಗೊಬ್ಬರ ವಿತರಣೆಯಲ್ಲಿ ತಾರತಮ್ಯ ಮಾಡಿದರೆ ಸರಿ ಇರೋದಿಲ್ಲ. ಇವೆಲ್ಲಾ ನಡೆಯೋದಿಲ್ಲ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಳೆ, ಬಿತ್ತನೆ ಕುರಿತು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಂದ ಮಾಹಿತಿ ಪಡೆದ ಸಚಿವರು, ರಸಗೊಬ್ಬರವನ್ನು ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹಂಚಿಕೆ ಮಾಡುವ ಸಂದರ್ಭದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ದೂರುಗಳು ರೈತರಿಂದ ಬರುತ್ತಿವೆ ಎಂದರು.

ಕಾಂಗ್ರೆಸ್‌ ಕೃಪಾಕಟಾಕ್ಷದಲ್ಲಿ ರಾಜ್ಯಾದ್ಯಂತ ಕೊಲೆಗಳು ನಿರ್ಭೀತ: ಸಚಿವೆ ಶೋಭಾ ಕರಂದ್ಲಾಜೆ ಆರೋಪ

ಕೆಲವು ರೈತರಿಗೆ ಅಗತ್ಯಕ್ಕಿಂತ ಹೆಚ್ಚು. ಇನ್ನು ಕೆಲವು ರೈತರಿಗೆ ಅಗತ್ಯವಿರುವಷ್ಟುರಸಗೊಬ್ಬರ ನೀಡುತ್ತಿಲ್ಲ ಎಂಬ ದೂರುಗಳು ಬರುತ್ತಿವೆ. ತಾರತಮ್ಯ ಮಾಡಿದರೆ ಸರಿ ಇರೋದಿಲ್ಲ, ಈ ಸಮಸ್ಯೆ ಕೂಡಲೇ ಬಗೆಹರಿಸಬೇಕು ಎಂದು ಸೂಚನೆ ನೀಡಿದರು. ಈ ಬಾರಿ ಮಳೆ, ಬೆಳೆ ಕುರಿತು ಮಾಹಿತಿ ನೀಡಿದ ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್‌, ಕಳೆದ ವರ್ಷ ಈ ಅವಧಿ ವರೆಗೆ ಸರಾಸರಿ 727 ಮಿಮೀ ಮಳೆ ಬಂದಿತ್ತು. ಆದರೆ, ಈ ಬಾರಿ 377 ಮಿಮೀ ಮಳೆ ಬಂದಿದೆ. ಅಂದರೆ, ಶೇ. 48 ರಷ್ಟುಮಳೆ ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ. 40 ರಷ್ಟುಬಿತ್ತನೆಯಾಗಿತ್ತು. ಈ ವರ್ಷ ಶೇ. 20 ರಷ್ಟುಮಾತ್ರ ಬಿತ್ತನೆಯಾಗಿದೆ ಎಂದರು.

ಸಚಿವೆ ಶೋಭಾ ಕರಂದ್ಲಾಜೆ(Minister shobha karandlaje) ಮಾತನಾಡಿ, ಹೆಣ್ಣು ಮಕ್ಕಳ ವಸತಿ ಶಾಲೆಗಳಲ್ಲಿ ಕಾಂಪೌಂಡ್‌ ನಿರ್ಮಾಣ, ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಹೇಳಿದರು.ಶಿ ಕ್ಷಣ ಇಲಾಖೆ ವಿಷಯ ಚರ್ಚೆಗೆ ಬಂದಾಗ, ಜಿಲ್ಲೆಯಲ್ಲಿ ಕಳೆದ 2 ವರ್ಷಗಳ ಹಿಂದೆ ಶಾಲೆಯಿಂದ ಹೊರಗುಳಿದ ಮಕ್ಕಳ ಗಣತಿ ಕಾರ್ಯನಡೆಸಿದಾಗ 195 ಮಕ್ಕಳ ಪತ್ತೆ ಹಚ್ಚಲಾಗಿದ್ದು, ಈ ಪೈಕಿ ಬೀರೂರು ವಲಯದಲ್ಲಿ 16, ಚಿಕ್ಕಮಗಳೂರು 84, ಕೊಪ್ಪ 32, ಮೂಡಿಗೆರೆ 28, ಎನ್‌ಆರ್‌ ಪುರ 9, ಶೃಂಗೇರಿ 2 ಹಾಗೂ ತರೀಕೆರೆ ತಾಲೂಕಿನಲ್ಲಿ 24 ವಿದ್ಯಾರ್ಥಿಗಳು ಶಿಕ್ಷಣದಿಂದ ಹೊರಗೆ ಉಳಿದಿ ದ್ದಾರೆ. ಇದಕ್ಕೆ ಕಾರಣ, ಕಲಿಕೆಯಲ್ಲಿ ಹಿಂದುಳಿದಿರುವುದು, ತಂದೆ ತಾಯಿಯೊಂದಿಗೆ ಮಕ್ಕಳು ದುಡಿಯಲು ಹೋಗುತ್ತಿರುವುದು ಎಂದರು.

ಕಡೂರು ಶಾಸಕ ಆನಂದ್‌ ಮಾತನಾಡಿ, ಶಾಲೆ ಕಾಲೇಜುಗಳಲ್ಲಿ ಶೌಚಾಲಯಗಳಿವೆ. ಆದರೆ, ನಿರ್ವಹಣ ವ್ಯವಸ್ಥೆ ಸರಿ ಇಲ್ಲ. ಇದರಿಂದಾಗಿ ಸುತ್ತಮುತ್ತಲಿನ ವಾತಾವರಣ ಹಾಳಾಗುತ್ತಿದೆ. ಅದ್ದರಿಂದ ಶಾಲಾ ಕಟ್ಟಡದಿಂದ ಹೊರ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ ಪರಿಗಣಿಸಬೇಕು ಎಂದು ಹೇಳಿದರು.

ಶಾಸಕ ಎಚ್‌.ಡಿ. ತಮ್ಮಯ್ಯ(MLA HD Tammaiah) ಮಾತನಾಡಿ, ಸಾಮಾಜಿಕ ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ಸಸಿಗಳನ್ನು ಮಾಡಿ ಗಿಡಗಳನ್ನು ನೆಡಲಾಗುತ್ತಿದೆ. ಆದರೆ, ನಿರ್ವಹಣಾ ವ್ಯವಸ್ಥೆ ಸರಿ ಇಲ್ಲ. ಕಳೆದ ಎರಡು ವರ್ಷಗಳಲ್ಲಿ ಎಷ್ಟುಗಿಡಗಳನ್ನು ನೆಡಲಾಗಿದೆ. ಅವುಗಳ ಸ್ಥಿತಿ ಗತಿ ಏನಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಅಧಿಕಾರಿಗಳು ಕಳೆದ ಎರಡು ವರ್ಷಗಳಲ್ಲಿ ನೆಟ್ಟಿರುವ ಗಿಡಗಳಲ್ಲಿ ಶೇ. 65 ರಷ್ಟುಉಳಿದುಕೊಂಡಿವೆ ಎಂದರು.

ಶಾಸಕ ಜಿ.ಎಚ್‌. ಶ್ರೀನಿವಾಸ್‌ ಮಾತನಾಡಿ, ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್‌ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಸರಿಯಾಗಿ ವೇತನ ಸಿಗುತ್ತಿಲ್ಲ, ಕೆಲವೆಡೆ ಡಯಾ ಲಿಸಿಸ್‌ ಕೇಂದ್ರಗಳು ಹಾಳಾಗಿವೆ. ದುರಸ್ತಿ ಪಡಿಸುವ ಕೆಲಸ ಆಗುತ್ತಿಲ್ಲ ಎಂದಾಗ ಡಿಎಚ್‌ಒ ಡಾ. ಅಶ್ವತ್‌ಬಾಬು ಮಾತನಾಡಿ, ಡಯಾಲಿಸಿಸ್‌ ಯಂತ್ರಗಳು ಹಾಳಾದರೆ ಅವುಗಳನ್ನು ರಿಪೇರಿ ಮಾಡುವ ವ್ಯವಸ್ಥೆ ಸ್ಥಳೀಯವಾಗಿ ಇಲ್ಲ. ಹೊರ ರಾಜ್ಯದವರನ್ನು ಅವಲಂಬಿಸಲಾಗಿದೆ. ಈ ರೀತಿ ಸಮಸ್ಯೆ ನಮ್ಮಲ್ಲಿ ಮಾತ್ರ ಅಲ್ಲ. ರಾಜ್ಯದ ಎಲ್ಲಾ ಕಡೆಯಲ್ಲೂ ಇದೆ. ಡಯಾಲಿಸಿಸ್‌ ಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿರುವ ಸಂಸ್ಥೆಯೇ ಅಲ್ಲಿನ ಸಿಬ್ಬಂದಿಗೆ ವೇತನ ನೀಡಬೇಕು ಎಂದು ಹೇಳಿದರು.

ವೇಣುಗೋಪಾಲ್‌ ಸಾವು ಯುವ ಬ್ರಿಗೇಡ್‌ಗೆ ದೊಡ್ಡ ನಷ್ಟ: ಶೋಭಾ ಕರಂದ್ಲಾಜೆ

64 ಕೋಟಿ ರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಜಿಲ್ಲೆಯಲ್ಲಿ ಸುಮಾರು 64 ಕೋಟಿ ರು. ರಾಯಲ್ಟಿಹಣ ಬರಬೇಕಾಗಿದೆ. ಇದರ ವಸೂಲಿಗೆ ಯಾವುದೇ ಕ್ರಮವಾಗಿಲ್ಲ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದಾಗ, ದ್ರೋಣ್‌ ಕ್ಯಾಮರಾದಿಂದ ತಮ್ಮ ಘಟಕಗಳನ್ನು ಸರ್ವೆ ಮಾಡಿ ರಾಯಲ್ಟಿನಿಗದಿಪಡಿಸಿಲ್ಲ ಎಂದು ಕೆಲವು ವ್ಯಕ್ತಿಗಳು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆಂದು ಹಿರಿಯ ಭೂ ವಿಜ್ಞಾನಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ವಿಧಾನಪರಿಷತ್‌ ಉಪ ಸಭಾಪತಿ ಎಂ.ಕೆ. ಪ್ರಾಣೇಶ್‌, ಜಿಲ್ಲಾಧಿಕಾರಿ ಮೀನಾ ನಾಗರಾಜ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.

click me!