'ರಾಮನವಮಿಗೆ ರಾಮಮಂದಿರ ಶಂಕುಸ್ಥಾಪನೆ ಕಷ್ಟ'

By Kannadaprabha NewsFirst Published Feb 22, 2020, 12:07 PM IST
Highlights

ರಾಮನವಮಿಗೆ ರಾಮಮಂದಿರ ಶಂಕುಸ್ಥಾಪನೆ ಕಷ್ಟ| ಟ್ರಸ್ಟ್‌ ಸಭೆಯಲ್ಲೂ ಇದೇ ಅಭಿಪ್ರಾಯ ಬಂದಿದೆ

ಮಂಗಳೂರು[ಫೆ.22]: ಅಯೋಧ್ಯೆಯಲ್ಲಿ ಈ ಹಿಂದಿನ ನೀಲನಕ್ಷೆ ಪ್ರಕಾರವೇ ಯೋಜನಾಬದ್ಧವಾಗಿ ರಾಮ ಮಂದಿರ ನಿರ್ಮಿಸಲಾಗುವುದು ಎಂದು ರಾಮಮಂದಿರ ನಿರ್ಮಾಣ ಟ್ರಸ್ಟ್‌ ಸದಸ್ಯರಾಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏಪ್ರಿಲ್‌ನಲ್ಲಿ ರಾಮನವಮಿಯಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಿಸುವುದು ಕಷ್ಟ. ಯಾಕೆಂದರೆ, ಆ ಸಂದರ್ಭ ಅಯೋಧ್ಯೆಯಲ್ಲಿ ರಾಮೋತ್ಸವಕ್ಕೆ 15ರಿಂದ 20 ಲಕ್ಷದಷ್ಟುಭಕ್ತರು ಸೇರುತ್ತಾರೆ. ಆಗ ಭಕ್ತರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭ ನಡೆಸಲು ಕಷ್ಟವಾಗಬಹುದು. ಆ ಬಳಿಕ ಮಂದಿರ ನಿರ್ಮಾಣ ಆರಂಭಿಸಿದರೆ ಉತ್ತಮ ಎಂಬ ಅಭಿಪ್ರಾಯ ಇತ್ತೀಚೆಗೆ ನಡೆದ ಅಯೋಧ್ಯೆ ಟ್ರಸ್ಟ್‌ ಸಭೆಯಲ್ಲಿ ವ್ಯಕ್ತಗೊಂಡಿದೆ. ಈ ಬಗ್ಗೆ ಮಂದಿರ ನಿರ್ಮಾಣ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು

ರಾಮಮಂದಿರ ವಿನ್ಯಾಸ ಬದಲು?, 2 ಅಂತಸ್ತಿನ ಬದಲು 3 ಅಂತಸ್ತಿನ ಕಟ್ಟಡ!

ಮಂದಿರ ನಿರ್ಮಾಣಕ್ಕೆ ಬೇಕಾದ ಶಿಲಾ ಕಲ್ಲುಗಳ ಕೆತ್ತನೆ ಕೆಲಸ ಹಲವು ವರ್ಷಗಳ ಹಿಂದೆಯೇ ಪೂರ್ಣಗೊಂಡಿದೆ. ಇವು ಶಿಲೆ ಕಲ್ಲುಗಳಾದ್ದರಿಂದ ಶಿಥಿಲಗೊಳ್ಳುವ ಸಂಭವ ಇಲ್ಲ. ಆದರೂ ಈ ಬಗ್ಗೆ ನಿಗಾ ವಹಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಸ್ಪಷ್ಟಪಡಿಸಿದರು.

ಅಯೋಧ್ಯೆಯ ಸುಮಾರು 67 ಎಕರೆ ಪ್ರದೇಶದಲ್ಲಿ ಮಂದಿರ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈಗಾಗಲೇ ತಯಾರಿಸಿರುವ ನೀಲ ನಕ್ಷೆಯಂತೆ ಯೋಜನಾಬದ್ಧವಾಗಿ ಮಂದಿರ ನಿರ್ಮಾಣವಾಗಲಿದೆ. ಅವಶ್ಯವಾದರೆ ಮಾತ್ರ ಈ ನೀಲ ನಕ್ಷೆ ಬದಲಿಸಲಾಗುವುದು ಎಂದು ಹೇಳಿದರು.

+++

ಈ ಮಂದಿರ ಶತಮಾನಗಳ ವರೆಗೆ ಚಿರಸ್ಥಾಯಿಯಾಗಿ ಉಳಿದುಕೊಳ್ಳಬೇಕು ಎಂಬ ಬಯಕೆ ಇದೆ. ಇದಕ್ಕಾಗಿ ಅಯೋಧ್ಯೆಯನ್ನೇ ಮಂದಿರ ನಿರ್ಮಾಣದ ಸುಸಜ್ಜಿತ ಜಾಗವಾಗಿ ಪರಿವರ್ತಿಸುವ ಇರಾದೆ ಹೊಂದಲಾಗಿದೆ. ನಾಲ್ಕು ಪಥದ ರಸ್ತೆ, ಯಾತ್ರಿ ನಿವಾಸ, ಪ್ರಾಚೀನ ಸಂಸ್ಕೃತಿಯ ಕಲಾಭವನ ಸೇರಿದಂತೆ ಪ್ರಪಂಚದಾದ್ಯಂತ ಎಲ್ಲ ಭಕ್ತರ ಪ್ರಸಿದ್ಧ ಯಾತ್ರಾ ಸ್ಥಳವಾಗಿ ಅಯೋಧ್ಯೆ ಮಾರ್ಪಡಲಿದೆ ಎಂದರು.

ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ವಿಶ್ವಸ್ಥ ಮಂಡಳಿ ರಚನೆ ಮಾಡಲಾಗಿದೆ. ಮಂದಿರ ನಿರ್ಮಾಣ ಸಮಿತಿಯನ್ನೂ ರಚಿಸಲಾಗಿದೆ. ಇದರ ಪ್ರಥಮ ಸಭೆಯೂ ನಡೆದಿದೆ. ಮುಂದಿನ ಸಭೆ ಯಾವಾಗ ಎನ್ನುವುದು ನಿರ್ಧಾರವಾಗಿಲ್ಲ. ಮಂದಿರ ನಿರ್ಮಾಣ ಸಮಿತಿಯಲ್ಲಿ ದಕ್ಷಿಣ ಭಾರತದ ಪ್ರತಿನಿಧಿಯಾಗಿರುವ ನನಗೆ ಎಲ್ಲರ ಸಹಕಾರ ಬೇಕು. ಸಮಿತಿಯಲ್ಲಿ ಗೌರವ ಸ್ಥಾನಕ್ಕಿಂತ ಜವಾಬ್ದಾರಿ ಹೆಚ್ಚಿದೆ. ಮಂದಿರ ನಿರ್ಮಾಣ ಟ್ರಸ್ಟ್‌ಗೆ ಗುರುಗಳಾದ ಶ್ರೀವಿಶ್ವೇಶತೀರ್ಥರ ಸ್ಮರಣಾರ್ಥ ಪ್ರಥಮ ದೇಣಿಗೆ .5 ಲಕ್ಷ ನೀಡಲಾಗಿದೆ ಎಂದರು.

-ಬಾಕ್ಸ್‌-

ಏಪ್ರಿಲ್‌ಗೆ ಮಂದಿರ ನಿರ್ಮಾಣ ಆರಂಭ ಕಷ್ಟ

ಏಪ್ರಿಲ್‌ನಲ್ಲಿ ರಾಮನವಮಿಯಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭಿಸುವುದು ಕಷ್ಟ. ಯಾಕೆಂದರೆ, ಆ ಸಂದರ್ಭ ಅಯೋಧ್ಯೆಯಲ್ಲಿ ರಾಮೋತ್ಸವಕ್ಕೆ 15ರಿಂದ 20 ಲಕ್ಷದಷ್ಟುಭಕ್ತರು ಸೇರುತ್ತಾರೆ. ಆಗ ಭಕ್ತರಿಗೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಸಮಾರಂಭ ನಡೆಸಲು ಕಷ್ಟವಾಗಬಹುದು. ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಮಂದಿರ ದೇಣಿಗೆಗೆ ಪ್ರತ್ಯೇಕ ಖಾತೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಲಾಗುವುದು. ಅಯೋಧ್ಯೆಯ ಎಸ್‌ಬಿಐ ಬ್ಯಾಂಕ್‌ನಲ್ಲಿ ಖಾತೆ ತೆರೆದು ಬಳಿಕ ಅದರ ಖಾತೆ ಸಂಖ್ಯೆ ನೀಡಲಾಗುವುದು. ಆ ಬಳಿಕ ಭಕ್ತರು ಮಂದಿರ ನಿರ್ಮಾಣಕ್ಕೆ ನೇರವಾಗಿ ದೇಣಿಗೆ ಪಾವತಿ ಮಾಡಬಹುದು. ನಾಗರಿಕರ ಸಹಭಾಗಿತ್ವಕ್ಕಾಗಿ ಖಾತೆ ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ. ಜನತೆ ಶಕ್ತ್ಯಾನುಸಾರ ಮಂದಿರ ನಿರ್ಮಾಣಕ್ಕೆ ನೆರವು ನೀಡಬಹುದು ಎಂದರು.

ಮಂದಿರಕ್ಕಾಗಿ ಭಜನೆ, ಪ್ರವಚನ: ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಸಾತ್ವಿಕ ಬಲ ಹಾಗೂ ದೈವಿಕ ಶಕ್ತಿಯ ಅನುಕೂಲತೆಗೆ ಪ್ರತಿ ಮನೆಗಳಲ್ಲಿ ರಾಮಭಜನೆ ಆರಂಭಗೊಳ್ಳಬೇಕು. ಇದರ ಉಪದೇಶವನ್ನು ನಾವೇ ಮಾಡುತ್ತೇವೆ. ನಾನು ಸಂಚಾರ ಕೈಗೊಳ್ಳುವ ಎಲ್ಲ ಕಡೆಗಳಲ್ಲಿ ಭಜನೆಗೆ ರಾಮ ಮಂತ್ರೋಪದೇಶ ನೀಡುತ್ತಿದ್ದೇನೆ. ಮಂದಿರ, ದೇವಸ್ಥಾನಗಳಲ್ಲಿ ರಾಮ ಜಪ, ಪ್ರವಚನ ನಡೆಯಬೇಕು. ಈ ಕುರಿತು ಸಭೆಯಲ್ಲಿ ಪ್ರಸ್ತಾಪಗೊಂಡಿದ್ದು, ಮುಂದಿನ ಸಭೆಯಲ್ಲಿ ದೇಶಾದ್ಯಂತ ನಡೆಸುವಂತೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಪೇಜಾವರಶ್ರೀ ಹೇಳಿದರು.

ರಾಮಮಂದಿರ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ದೇಣಿಗೆ

ವಿಶ್ವ ಹಿಂದು ಪರಿಷತ್‌ ಕೂಡ ಇದಕ್ಕೆ ಪೂರಕವಾಗಿ ಏ.4ರ ರಾಮ ನವಮಿಯಂದು ಪ್ರತಿ ಜಿಲ್ಲೆಯಲ್ಲಿ ಅಖಂಡ ರಾಮೋತ್ಸವವನ್ನು ವಿಶಿಷ್ಟರೀತಿಯಲ್ಲಿ ಹಮ್ಮಿಕೊಳ್ಳಲಿದೆ. 108 ಬಾರಿ ರಾಮನಾಮ ಜಪ ನಡೆಯಬೇಕು. ಉಡುಪಿಯಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿತ್ತು ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್‌ ಹೇಳಿದರು.

 ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!