
ಮಂಡ್ಯ (ಮಾ.11): ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿರುವ ಹಿನ್ನೆಲೆಯಲ್ಲಿ ನಾಳೆ ಮಂಡ್ಯದಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಿಕೆ ಮಾಡಲಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಅವರು ಶನಿವಾರ ಮಾರ್ಚ್ 11ರಂದು ಮುಂಜಾನೆ ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಒಂಟಿಕೊಪ್ಪಲಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೂ ಬದುಕುಳಿದಿಲ್ಲ. ಧ್ರುವನಾರಾಯಣ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಇದೀಗ ಧ್ರುವನಾರಾಯಣ ಹುಟ್ಟೂರು ಚಾಮರಾಜನಗರ ತಾಲ್ಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ಧ್ರುವನಾರಾಯಣ ಹುಟ್ಟೂರಲ್ಲಿ ಆವರಿಸಿದೆ. ಜೊತೆಗೆ ಇಡೀ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಬ್ರೇಕ್ ನೀಡಲಾಗಿದೆ. ಜೊತೆಗೆ, ಕಾಂಗ್ರೆಸ್ನಲ್ಲಿ ಶೋಕಾಚರಣೆ ರೀತಿಯ ವಾತಾವರಣ ಕಂಡುಬರುತ್ತಿದ್ದು, ನಾಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯಬೇಕಿದ್ದ ಮಂಡ್ಯ ಜಿಲ್ಲೆಯಲ್ಲಿನ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನು ರದ್ದುಗೊಳಿಸಲಾಗಿದೆ.
ಎಲ್ಲಾ ಸಮಾಜದವರು ಎಲ್ಲರನ್ನು ಪ್ರೀತಿಯಿಂದ ಕಾಣುತ್ತಿದ್ದ ವ್ಯಕ್ತಿ ಧ್ರುವನಾರಾಯಣ: ಡಿ.ಕೆ.ಶಿವಕುಮಾರ್
ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ರದ್ದು: ಈ ಕುರಿತು ಮಾತನಾಡಿದ ಮಂಡ್ಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್ ಅವರು, KPCC ಕಾರ್ಯಾಧ್ಯಕ್ಷ ಧ್ರುವನಾರಾಯಣ್ ವಿಧಿವಶ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಮುಂದೂಡಲಾಗಿದೆ. ನಾಳೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಹಾಗೂ ಮೇಲುಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಯಬೇಕಿತ್ತು. ಇನ್ನು ಇದೇ ದಿನದಂದು (ಅಂದರೆ ನಾಳೆ) ಪ್ರಧಾನಿ ನರೇಂದ್ರ ಮೋದಿ ಆಗಮನದಂದೇ ಮಂಡ್ಯ ಜಿಲ್ಲೆಯಲ್ಲಿ ಯಾತ್ರೆ ನಿಗದಿ ಮಾಡಲಾಗಿತ್ತು. ಆದರೆ, ಧ್ರವನಾರಾಯಣ ಅವರ ನಿಧನದ ಹಿನ್ನೆಲೆಯಲ್ಲಿ ಪ್ರಜಾಧ್ವನಿ ಯಾತ್ರೆ ಮುಂದೂಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ದರ್ಶನಕ್ಕೆ ಅವಕಾಶ: ಇಂದು ಸಂಜೆ 4 ಗಂಟೆವರಗೆ ಧ್ರುವನಾರಾಯಣ ಪಾರ್ಥಿವ ಶರೀರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದ್ದು, ಸದ್ಯ ಧ್ರುವ ನಾರಾಯಣ್ ಮೈಸೂರಿನ ವಿಜಯನಗರದ ನಿವಾಸದ ಬಳಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಳಿಕ ಮೈಸೂರು ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂಜನಗೂಡಿನ ಹುಲ್ಲಳ್ಳಿ ಸರ್ಕಲ್ ನಿಂದ ಆರ್ ಪಿ ರಸ್ತೆ ವರೆಗೆ ಮೆರವಣಿಗೆ ಮಾಡಿ ಸಂಜೆ 4 ಗಂಟೆಯ ನಂತರ ಧ್ರುವನಾರಾಯಣ್ ಸ್ವಗ್ರಾಮಕ್ಕೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಗುವುದು.
ಧ್ರುವನಾರಾಯಣ ಹುಟ್ಟೂರಲ್ಲಿ ನೀರವಮೌನ: ಮೈಸೂರಿನಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ
ಚಾಮರಾಜನಗರದ ಅಂತ್ಯಕ್ರಿಯೆ ಸ್ಥಳ ಸಿದ್ಧತೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ ಅವರ ಸ್ವಗ್ರಾಮ ಹೆಗ್ಗವಾಡಿಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೇಟಿ ನೀಡಿದ್ದಾರೆ. ಅಂತ್ಯಕ್ರಿಯೆ ಸ್ಥಳ ವೀಕ್ಷಣೆ ನಡೆಸಿದ ಎಸ್ಪಿ ಪದ್ಮಿನಿ ಸಾಹೋ ಅವರು ಇಲ್ಲಿ ಯಾವುದೇ ಲೋಪಗಳು ಆಗದಂತೆ ಹಾಗೂ ಗಣ್ಯರು, ಸಾರ್ವಜನಿಕರ ವೀಕ್ಷಣೆಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ. ಇನ್ನು ನಾಳೆ ಧ್ರುವನಾರಾಯಣ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮದಲ್ಲಿ ಅಂತಿಮ ದರ್ಶನಕ್ಕೆ ಇಡುವ ಸ್ಥಳ ನಿಗದಿ ಬಗ್ಗೆಯೂ ಕೂಡ ಪರಿಶೀಲನೆ ನಡೆಸಿದರು.
ಧೃವನಾರಾಯಣ ಕೇಳಿದ ಕ್ಷೇತರ ಕೊಡಬೇಕಿತ್ತು: ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ವಿಧಿವಶದ ಹಿನ್ನೆಲೆಯಲ್ಲಿ ಕೊಳ್ಳೇಗಾಲದ ಶಾಸಕ ಎನ್ ಮಹೇಶ್ ಬಂದು ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ಧೃವನಾರಾಯಣ್ ರಾಜ್ಯದ ಸಜ್ಜನ ರಾಜಕಾರಣಿ, ಅಭಿವೃದ್ಧಿ ಪರ ಇದ್ದ ರಾಜಕಾರಣಿ ಆಗಿದ್ದರು. ದಲಿತ ಸಮಾಜ ಪ್ರತಿಭಾನ್ವಿತ ರಾಜಕಾರಣಿ ಕಳೆದುಕೊಂಡಿದೆ. ಶಿಕ್ಷಣದ ಬಗ್ಗೆ ಅತ್ಯಂತ ಕಾಳಜಿ ಹೊಂದಿದ್ದರು. ಕಾಂಗ್ರೆಸ್ ಎಂಪಿ ಆದರೂ ಬಿಜೆಪಿ ಮಂತ್ರಿಗಳ ಒಡನಾಟ ಇಟ್ಟುಕೊಂಡು ಅನೇಕ ಯೋಜನೆ ತಂದಿದ್ದರು. ವಿಚಿತ್ರ ರಾಜಕೀಯ ಒತ್ತಡಕ್ಕೆ ಬಲಿಪಶು ಆಗಿದ್ದಾರೆ. ರಾಜಕಾರಣಿಗಳು ಮೇಲ್ನೋಟಕ್ಕೆ ಅಗ್ರೆಸ್ಸಿವ್ ಆಗಿ ಕಾಣಿಸಿದರೂ ಒತ್ತಡ ಬಹಳಷ್ಟು ಇರುತ್ತದೆ. ಧೃವನಾರಾಯಣ್ ಕೂಡ ಸೌಮ್ಯ ಸ್ವಭಾವದವರು. ಪ್ರೆಶರ್ ಪಾಲಿಟಿಕ್ಸ್ ನಿಲ್ಲಬೇಕು. ಅವರು ಕೇಳಿದ ಕ್ಷೇತ್ರ ಬಿಟ್ಟು ಕೊಡಬೇಕಿತ್ತು. ಟಿಕೆಟ್ ಸೇರಿದಂತೆ ಹಲವು ರೀತಿಯ ಪ್ರೆಶರ್ಗೆ ಧೃವನಾರಾಯಣ್ ಒಳಗಾಗಿದ್ದರು. ಧೃವನಾರಾಯಣ್ ಅಭಿಮಾನಿಗಳು, ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ