
ಬೆಂಗಳೂರು (ಜು.20): ಧರ್ಮಸ್ಥಳದಲ್ಲಿ ಶವಗಳನ್ನು ಸಾಮೂಹಿಕವಾಗಿ ಹೂತು ಹಾಕಿದ್ದೇನೆ. ಅಪರಾಧಿ ಮನಸ್ಥಿತಿ ತನ್ನನ್ನು ಕಾಡುತ್ತಿದೆ. ನೂರಾರು ಬಾಲಕಿಯರು ಹಾಗೂ ಮಹಿಳೆಯ ಅತ್ಯಾಚಾ*ರ ಮತ್ತು ಕೊಲೆ ಮಾಡಲಾಗಿದ್ದು, ಅಂತಹ ಶವಗಳನ್ನು ಧರ್ಮಸ್ಥಳದ ವಿವಿಧೆಡೆ ಹೂತು ಹಾಕಿದ್ದೇನೆ. ಎಲ್ಲ ಶವಗಳನ್ನು ನಾನು ತೋರಿಸುತ್ತೇನೆ ಎಂದು ಧರ್ಮಸ್ಥಳ ಸಂಸ್ಥೆಯ ಮಾಜಿ ಕಾರ್ಮಿಕನೊಬ್ಬ ಪೊಲೀಸ್ ಇಲಾಖೆ ಮುಂದೆ ಶರಣಾಗಿದ್ದನು. ಇದೀಗ ಈ ಪ್ರಕರಣವನ್ನು ತನಿಖೆ ನಡೆಸುವುದಕ್ಕೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಆದೇಶ ಹೊರಡಿಸಿದೆ. ಡಿಜಿಪಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಐಜಿ ಎಂ.ಎನ್. ಅನುಚೇತ್, ಡಿಸಿಪಿ ಸೌಮ್ಯಲತಾ ಮತ್ತು ಎಸ್ಪಿ ಜಿತೇಂದ್ರಕುಮಾರ್ ದಯಾಮ್ ತಂಡವನ್ನು ರಚಿಸಲಾಗಿದೆ.
ಧರ್ಮಸ್ಥಳದಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಮತ್ತು ಬಾಲಕಿಯರ ಶವಗಳನ್ನು ಹೂಳಲಾಗಿದೆ ಎಂದು ಮಾಜಿ ನೈರ್ಮಲ್ಯ ಕೆಲಸಗಾರನೊಬ್ಬ ಬಹಿರಂಗಪಡಿಸಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸಾಕ್ಷಿ ಹೇಳಿರುವ 3 ಪ್ರಮುಖ ಸ್ಥಳಗಳನ್ನು ಪೊಲೀಸರು ಇನ್ನೂ ಸೀಲ್ ಮಾಡಿಲ್ಲ ಅಥವಾ ಅಂತಹ ಸ್ಥಳಗಳನ್ನು ಕೂಡ ಸುರಕ್ಷಿತಗೊಳಿಸಿಲ್ಲ. ಧರ್ಮಸ್ಥಳ ಸಂಸ್ಥೆಯ ಪ್ರಭಾವಿಗಳಿಗೆ ಪೊಲೀಸರು ಹೆದರುತ್ತಿದ್ದಾರೆ ಮತ್ತು ಸಾಕ್ಷ್ಯಗಳನ್ನು ನಾಶಮಾಡಲು ಶವಗಳನ್ನು ಸ್ಥಳಾಂತರಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯ ಹಿಂದೂ ಸಂಘಟನೆಯ ನಾಯಕರು ಏಷ್ಯಾನೆಟ್ ನ್ಯೂಸ್ಗೆ ತಿಳಿಸಿದ್ದಾರೆ.
ಮಾಜಿ ನೈರ್ಮಲ್ಯ ಕೆಲಸಗಾರ ಹೇಳಿದ್ದೇನು?
'ನಾನು 1994 ರಿಂದ 2014 ರವರೆಗೆ ಧರ್ಮಸ್ಥಳ ಮಂಜುನಾಥ ದೇವಸ್ಥಾನದಲ್ಲಿ ನೈರ್ಮಲ್ಯ ಕೆಲಸಗಾರನಾಗಿ ಕೆಲಸ ಮಾಡಿದ್ದೆ. ತೀವ್ರ ಅಪರಾಧಿ ಭಾವನೆಯಿಂದ ನಾನು ಇಲ್ಲಿಗೆ ಬಂದಿದ್ದೇನೆ. ನಾನು ಹೂತಿಟ್ಟ ನೂರಾರು ಮಹಿಳೆಯರು ಮತ್ತು ಮಕ್ಕಳ ಶವಗಳು ನನ್ನನ್ನು ಕಾಡುತ್ತಿವೆ. ಹೇಳಿದಂತೆ ಕೇಳದಿದ್ದರೆ ನಾನೂ ಅವರಂತೆ ಹೂಳಲ್ಪಡುತ್ತಿದ್ದೆ, ಆದ್ದರಿಂದ ನಾನು ಅದನ್ನು ಮಾಡಿದೆ. ನೇತ್ರಾವತಿ ನದಿಯ ದಡದಲ್ಲಿ ಸೇರಿದಂತೆ ಹಲವುಡೆ ಕಂಡುಬಂದ ಶವಗಳು ಆತ್ಮಹತ್ಯೆ ಅಥವಾ ಮುಳುಗಿ ಸಾವು ಎಂದು ನಾನು ಭಾವಿಸಿದ್ದೆ. ಆದರೆ ನಂತರ ಅವುಗಳಲ್ಲಿ ಹಲವು ಲೈಂಗಿಕ ದೌರ್ಜನ್ಯದ ಗುರುತುಗಳು ಮತ್ತು ಗಾಯಗಳನ್ನು ಹೊಂದಿದ್ದವು ಎಂದು ನಾನು ಕಂಡುಕೊಂಡೆ. ಇವುಗಳನ್ನು ಪೊಲೀಸರಿಗೆ ವರದಿ ಮಾಡಿರಲಿಲ್ಲ.
2010ರಲ್ಲಿ ಕಲ್ಲೇರಿಯ ಪೆಟ್ರೋಲ್ ಬಂಕ್ ಬಳಿ ನಾನು ನೋಡಿದ 12 ವರ್ಷದ ಬಾಲಕಿಯ ಶವ ನೆನಪಿದೆ. ಶಾಲಾ ಯೂನಿಫಾರ್ಮ್ ಧರಿಸಿದ್ದ ಆ ಶವಕ್ಕೆ ಒಳ ಉಡುಪುಗಳು ಇರಲಿಲ್ಲ. ಅದನ್ನು ಹೂಳಬೇಕಾದ ಪರಿಸ್ಥಿತಿಯನ್ನು ನಾನು ಅನುಭವಿಸಿದ ಮಾನಸಿಕ ಯಾತನೆ, ನೋವು, ಪಾಪದ ಪಶ್ಚಾತ್ತಾಮ ನನ್ನನ್ನು ಸುಮ್ಮನೆ ಬಿಡುತ್ತಿಲ್ಲ. ಮತ್ತೊಂದೆಡೆ 20 ವರ್ಷದ ಯುವತಿಯ ಮುಖಕ್ಕೆ ಆಸಿಡ್ ಸುರಿದು, ಡೀಸೆಲ್ ಸುರಿದು ಸುಡಬೇಕಾಯಿತು. ನನ್ನ ಕುಟುಂಬದ ಓರ್ವ ಬಾಲಕಿಗೆ ಧರ್ಮಸ್ಥಳದ ಪ್ರಭಾವಿ ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯ ಎಸಗಿದಾಗ ನಾನು ಮತ್ತು ನನ್ನ ಕುಟುಂಬ ಇಲ್ಲಿಂದ ತಪ್ಪಿಸಿಕೊಂಡೆವು. ಈಗ ಅಪರಾಧಿ ಭಾವನೆಯಿಂದ ಹಿಂತಿರುಗಿದ್ದೇನೆ. ನನಗೆ ರಕ್ಷಣೆ ಬೇಕು. ಶವಗಳನ್ನು ಹೂತಿಟ್ಟ ಎಲ್ಲ ಸ್ಥಳಗಳನ್ನು ನಾನು ತೋರಿಸುತ್ತೇನೆ. ಇದರ ಸಂಪೂರ್ಣ ತನಿಖೆ ನಡೆಯಬೇಕು.
ಧರ್ಮಸ್ಥಳದ ಕಲ್ಲೇರಿ, ಸ್ನಾನ ಘಟ್ಟ ಸೇರಿದಂತೆ ನೇತ್ರಾವತಿ ನದಿಯ ದಡದಲ್ಲಿರುವ ಮೂರು ಸ್ಥಳಗಳನ್ನು ಮಾಜಿ ನೈರ್ಮಲ್ಯ ಕೆಲಸಗಾರ ಸೂಚಿಸಿದ್ದಾನೆ. ಈ ಮೂರು ಸ್ಥಳಗಳನ್ನು ಪೊಲೀಸರು ಇನ್ನೂ ಸುರಕ್ಷಿತಗೊಳಿಸಿಲ್ಲ ಅಥವಾ ಸೀಲ್ ಮಾಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ