
ಬೆಳ್ತಂಗಡಿ (ಆ.24) ಧರ್ಮಸ್ಥಳ ವಿರುದ್ದ ಷಡ್ಯಂತ್ರ ನಡೆಸಿದ ಗ್ಯಾಂಗ್ನ ಒಬ್ಬೊಬ್ಬ ಸದಸ್ಯರ ಮುಖವಾಡ ಬಯಲಾಗುತ್ತಿದೆ. ಮುಸುಕುದಾರಿ ಚಿನ್ನಯ್ಯ ಅರೆಸ್ಟ್ ಆಗಿದ್ದಾನೆ. ಇತ್ತ ಧರ್ಮಸ್ಥಳ ವಿರುದ್ಧ ಎಐ ವಿಡಿಯೋ ಮೂಲಕ ಸುಳ್ಳು ಕತೆಗಳನ್ನು ಹೇಳಿ ಅಪಪ್ರಚಾರ ಮಾಡಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಸಮೀರ್ ಎಂಡಿ ಬೆಳ್ತಂಗಡಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ. ಸಮೀರ್ ಎಂಡಿ ವಿರುದ್ದ ಬೆಳ್ತಗಂಡಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಆದರೆ ಬಂಧನಕ್ಕೂ ಮೊದಲು ನಿರೀಕ್ಷಣಾ ಜಾಮೀನು ಪಡೆದಿದ್ದ ಸಮೀರ್ ಎಂಡಿಗೆ ಎರಡು ದಿನದಲ್ಲಿ ವಿಚಾರಣೆಗೆ ಹಾಜರಾಗಲು ಕೋರ್ಟ್ ಸೂಚಿಸಿತ್ತು. ಹೀಗಾಗಿ ಇದೀಗ ಸಮೀರ್ ಎಂಡಿ ಇದೀಗ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾನೆ.
ಮೂವರು ವಕೀಲರ ಜೊತೆ ಸಮೀರ್ ಎಂಡಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಬೆಳ್ತಗಂಡಿ ಪೊಲೀಸರು ಸಮೀರ್ ಎಂಡಿಗೆ ಮೂರು ಬಾರಿ ನೋಟಿಸ್ ನೀಡಲಾಗಿತ್ತು. ಬಂಧನ ಭೀತಿಯಲ್ಲಿದ್ದ ಸಮೀರ್ ಎಂಡಿ ಮಂಗಳೂರು ಕೋರ್ಟ್ ಮೂಲಕ ನಿರೀಕ್ಷಣಾ ಜಾಮೀನು ಪಡೆದಿದ್ದರು. ಹೀಗಾಗಿ ಪೊಲೀಸರು ಬಂಧನ ಕಾರ್ಯಾಚರಣೆ ನಿಲ್ಲಿಸಿದ್ದರು. ಇಂದು ಕೋರ್ಟ್ ನೀಡಿದ ಗಡುಗು ಅಂತ್ಯಗೊಳ್ಳುತ್ತಿದ್ದಂತೆ ಸಮೀರ್ ಎಂಡಿ ಬೆಳ್ತಂಗಡಿ ಪೊಲೀಸರ ಮುಂದೆ ಹಾಜರಾಗಿದ್ದಾರೆ.
ತನಿಖಾಧಿಕಾರಿ ನಾಗೇಶ್ ಕೆ ವಿಚಾರಣೆ ನಡೆಸಲಿದ್ದಾರೆ. ಸಮೀರ್ ಎಂಡಿ ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ಎದುರಿಸಲಿದ್ದಾರೆ. ಮೂರು ಬಾರಿ ನೊಟೀಸ್ ಕೊಟ್ಟರೂ ಹಾಜರಾಗದೇ ತಪ್ಪಿಸಿಕೊಂಡಿದ್ದ ಸಮೀರ್, ಇದೀಗ ಬಂಧನ ತಪ್ಪಿಸಿಕೊಳ್ಳಲು ಸಮೀರ್ ವಿಚಾರಣೆಗೆ ಹಾಜರಾಗಿದ್ದಾನೆ.
ಕೆಲ ದಾಖಲೆ ಪತ್ರಗಳನ್ನು ಹಿಡಿದು ಸಮೀರ್ ಎಂಡಿ ಬೆಳ್ತಗಂಡಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಧರ್ಮಸ್ಥಳದಲ್ಲಿ ಭದ್ರತೆ ಸಮಸ್ಯೆ ಕಾಡಲಿದೆ ಎಂದು ಸಮೀರ್ ಎಂಡಿ ನಿರೀಕ್ಷಾ ಜಾಮೀನು ಅರ್ಜಿಯಲ್ಲಿ ಉಲ್ಲೇಖಿಸಿದ್ದ. ಹೀಗಾಗಿ ಧರ್ಮಸ್ಥಳ ಠಾಣೆ ಬದಲು ಬೆಳ್ತಂಗಡಿ ಠಾಣೆಯಲ್ಲಿ ವಿಚಾರಣೆ ನಡೆಯಲಿದೆ.
ಧರ್ಮಸ್ಥಳ ಪೊಲೀಸ್ ಅಧಿಕಾರಿ ಸ್ವಯಂಪ್ರೇರಿತವಾಗಿ ಸಮೀರ್ ಎಂಡಿ ವಿರುದ್ದ ದೂರು ದಾಖಲಿಸಿದ್ದಾರೆ. ತನಿಖೆಯ ಹಾದಿ ದಿಕ್ಕು ತಪ್ಪಿಸುವ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ, ಜನರನ್ನು ಪ್ರಚೋದಿಸುವ ರೀತಿಯ ಮಾತುಗಳು, ಸುಳ್ಳು ಆರೋಪಗಳು, ಎಐ ನಕಲಿ ವಿಡಿಯೋಗಳನ್ನು ಸೃಷ್ಟಿಸಿದ ಆರೋಪ ಹೊರಿಸಿ ದೂರು ದಾಖಲಾಗಿತ್ತು. ಸಮೀರ್ಗೆ ಹಲವು ಪ್ರಶ್ನೆಗಳನ್ನು ತನಿಖಾಧಿಕಾರಿ ಕೇಳಲಿದ್ದಾರೆ. ಒಂದೆಡೆ ತನಿಖಾಧಿಕಾರಿ ಎಲ್ಲಾ ಪೂರ್ವ ತಯಾರಿಯೊಂದಿಗೆ ಸಿದ್ದರಾಗಿದ್ದರೆ, ಇತ್ತ ಸಮೀರ್ ಎಂಡಿ ಕಳೆದೆರಡು ದಿನಗಳಿಂದ ವಕೀಲರ ತಂಡದ ಜೊತೆ ಚರ್ಚಿಸಿ ಸಿದ್ಧರಾಗಿದ್ದಾರೆ. ತನ್ನ ಯೂಟ್ಯೂಬ್ ವಿಡಿಯೋ, ಅದಕ್ಕೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಹಿಡಿದು ಸಮೀರ್ ಎಂಡಿ ಹಾಜರಾಗಿದ್ದಾನೆ.
ಧರ್ಮಸ್ಥಳದಲ್ಲಿ ಶವ ಹೂತಿಟ್ಟ ಪ್ರಕರಣ, ಸೌಜನ್ಯ ಪ್ರಕರಣಣ, ಸುಜಾತ್ ಭತ್-ಅನನ್ಯಾ ಭಟ್ ನಾಪತ್ತೆ ಪ್ರಕರಣಗಳ ಕುರಿತು ಸಮೀರ್ ಎಂಡಿ ತನ್ನ ಯೂಟ್ಯೂಬ್ ಚಾನೆಲ್ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದ. ಎಐ ಮೂಲಕ ವಿಡಿಯೋ ಸೃಷ್ಟಿಸಿ ವಿಡಿಯೋ ಮಾಡಿದ್ದ. ಈ ಮೂಲಕ ಆಧಾರವಿಲ್ಲದೆ, ಸೋಶಿಯಲ್ ಮೀಡಿಯಾ ಹಾಗೂ ಚಿನ್ನಯ್ಯ, ಸುಜಾತಾ ಭಟ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮಾಡಿದ ಆರೋಪಗಳನ್ನೇ ಆಧಾರವಾಗಿಟ್ಟುಕೊಂಡು ವಿಡಿಯೋ ಮಾಡಿದ್ದ. ಈ ವಿಡಿಯೋದಲ್ಲಿ ನಿಮ್ಮ ರಕ್ತ ಕುದಿಯುತ್ತಿಲ್ಲವೇ, ಇದರ ವಿರುದ್ಧ ಪ್ರತಿಭಟನೆ ಮಾಡಿ ಎಂದು ಜನರನ್ನು ಪ್ರಚೋದಿಸಿದ್ದ. ಸಮೀರ್ ಎಂಡಿ ವಿಡಿಯೋ ನೋಡಿ ಹಲವರು ಇದೇ ಸತ್ಯ ಎಂದು ಧರ್ಮಸ್ಥಳ ವಿರುದ್ದ ಹೋರಾಟಕ್ಕಿಳಿದರು. ಮತ್ತೆ ಕೆಲವರು ಸಮೀರ ಎಂಡಿಗೆ ಮಿಲಿಯನ್ ಲೈಕ್ಸ್,ವೀಕ್ಷಣೆ ಕಂಡಿದೆ ಎಂದು ಹಲವರು ಧರ್ಮಸ್ಥಳ ವಿರುದ್ದ ಇಲ್ಲ ಸಲ್ಲದ ಆರೋಪ ಮಾಡುತ್ತಾ ವಿಡಿಯೋ ಮಾಡಲು ಆರಂಭಿಸಿದ್ದರು. ಈ ಮೂಲಕ ಸಮಾಜದ ಶಾಂತಿ. ಹಿಂದೂ ಹಾಗೂ ಜೈನ ಸಮುದಾಯದ ನಡುವೆ ದ್ವೇಷ ಬಿತ್ತುವ, ಹಿಂದೂ ಧಾರ್ಮಿಕ ಕ್ಷೇತ್ರವನ್ನು ಅಪನಂಬಿಕೆಯಿಂದ ನೋಡುವಂತಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ