
ಬೆಂಗಳೂರು (ಆ.14): ಧರ್ಮಸ್ಥಳದಲ್ಲಿ ನಡೆದಿರುವ ಶವ ಹೂತುಹಾಕಿರುವ ಆರೋಪ ಪ್ರಕರಣ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ ಈ ಹಿನ್ನೆಲೆ ಪರಿಸ್ಥಿತಿ ಕೈಮೀರುವ ಮೊದಲೇ ಪ್ರಕರಣ ಸಂಬಂಧ ಗೃಹ ಸಚಿವ ಡಾ. ಜಿ. ಪರಮೇಶ್ವರ್ರನ್ನು ದಕ್ಷಿಣ ಕನ್ನಡದ ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆ, ಅಭಯ ಚಂದ್ರ ಜೈನ್, ಹರೀಶ್ ಕುಮಾರ್ ಮತ್ತು ರಮಾನಾಥ್ ರೈ ಅವರ ನಿಯೋಗ ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದೆ.
ಧರ್ಮಸ್ಥಳ ಪ್ರಕರಣದ ಸದ್ಯದ ಪರಿಸ್ಥಿತಿ, ಸಾಮಾಜಿಕ ತಾಣಗಳಲ್ಲಿ ತೆಗೆದುಕೊಳ್ಳುತ್ತಿರುವ ಸ್ವರೂಪ, ಮತ್ತು ಜಿಲ್ಲೆಯ ರಾಜಕೀಯ ವಸ್ತುಸ್ಥಿತಿಯ ಬಗ್ಗೆ ವಿವರವಾಗಿ ಮಾತುಕತೆ ನಡೆದಿದೆ. ನಿನ್ನೆ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನಾಯಕರು, ಇಂದು ಬೆಳಗ್ಗೆ ಗೃಹ ಸಚಿವರೊಂದಿಗೆ ಧರ್ಮಸ್ಥಳ ಪ್ರಕರಣದ ಬಗ್ಗೆ ಚರ್ಚಿಸಿದ್ದಾರೆ.
ಪ್ರಕರಣ ಹೀಗೆ ಮುಂದುವರಿದರೆ ಕಷ್ಟ: ನಿಯೋಗ
ಪ್ರಕರಣವು ಈ ರೀತಿಯಾಗಿ ಮುಂದುವರಿದರೆ ಉದ್ವಿಗ್ನ ಸ್ಥಿತಿಗೆ ತಿರುಗಬಹುದು. ಕಿಡಿಗೇಡಿಗಳ ಹಸ್ತಕ್ಷೇಪ ಹೆಚ್ಚಾಗುತ್ತಿದೆ, ಮತ್ತು ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ಗಿರಿಯ ಚಟುವಟಿಕೆ ಶುರುವಾಗಿದೆ ಎಂದು ನಾಯಕರು ಗೃಹ ಸಚಿವರಿಗೆ ತಿಳಿಸಿದ್ದಾರೆ. ಧರ್ಮಸ್ಥಳದಂತಹ ಧಾರ್ಮಿಕ ಕೇಂದ್ರದ ವಿಚಾರದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕು ಎಂದು ಮಾಜಿ ಶಾಸಕರು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ, ಎಸ್ಐಟಿ ತನಿಖೆಯ ಪ್ರಗತಿಯ ಬಗ್ಗೆ ಗೃಹ ಸಚಿವರು ಮಾಹಿತಿ ನೀಡಿದ್ದಾರೆ. 'ಬ್ರೈನ್ ಮಾರ್ಫಿಂಗ್ಗೆ ವಿಶೇಷ ಅನುಮತಿ ಪಡೆದಿಲ್ಲ, ಆದರೆ ಅಗತ್ಯವಿದ್ದರೆ ಎಸ್ಐಟಿಯೇ ಆ ನಿರ್ಧಾರ ಕೈಗೊಳ್ಳಲಿದೆ' ಎಂದು ಪರಮೇಶ್ವರ್ ತಿಳಿಸಿದ್ದಾರೆ.
ಬಿಜೆಪಿಯಿಂದ ಮಧ್ಯಂತರ ವರದಿ ನೀಡುವಂತೆ ಒತ್ತಡ ಬಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂಥ ಸೂಕ್ಷ್ಮ ಪ್ರಕರಣಗಳಲ್ಲಿ ಒತ್ತಡಕ್ಕೆ ಮಣಿಯಲು ಸಾಧ್ಯವಿಲ್ಲ. ಮಧ್ಯಂತರ ವರದಿ ನೀಡಬೇಕೇ ಬೇಡವೇ ಎಂಬುದನ್ನು ಎಸ್ಐಟಿ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳ ಕೇಸ್, ಮಧ್ಯಂತರ ವರದಿ ಕೇಳಿದ ಸರ್ಕಾರ:
ಧರ್ಮಸ್ಥಳ ಅಸ್ಥಿಪಂಜರ ಹುಡುಕಾಟ ಪ್ರಕರಣ ಸಂಬಂಧ ಸರ್ಕಾರ ಮಧ್ಯಂತರ ವರದಿ ಕೇಳಿದೆ. ಗೃಹ ಸಚಿವರಿಗೆ ಮಧ್ಯಂತರ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆ ನಿನ್ನೆ ಗೃಹ ಸಚಿವರನ್ನು ಭೇಟಿ ಮಾಡಿದ ಎಸ್ಐಟಿ ಅಧಿಕಾರಿಳು. ಪ್ರಣವ್ ಮೊಹಾಂತಿ, ಅನುಚೇತ್ ಬೇಟಿ ನೀಡಿದ ವೇಳೆ'ಇನ್ನೂ ಎಷ್ಟು ಅಗೆದು ನೋಡುತ್ತೀರಿ? ಇದುವರೆಗೆ ಏನಾದರೂ ಸಿಕ್ಕಿದೆಯಾ ಎಂಬ ಮಾಹಿತಿ ಕೇಳಿರುವ ಗೃಹ ಸಚಿವ ಪರಮೇಶ್ವರ್. ಈಗಾಗಲೇ ಒಂದು ಸ್ಥಳದಲ್ಲಿ ಪುರುಷನ ಅಸ್ಥಿಪಂಜರ ಮತ್ತು ಕೆಲವು ಮೂಳೆ ತುಣುಕುಗಳು ಪತ್ತೆಯಾಗಿವೆ, ಇವು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ. ಇಂದು ಸಂಜೆ 4 ಗಂಟೆ ವೇಳೆಗೆ ಮುಂದಿನ ನಡೆಯನ್ನು ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸುಳ್ಳು ಸುದ್ದಿಗಳು ಹರಡುತ್ತಿರುವ ಕುರಿತು ಗೃಹ ಸಚಿವರು ಕಳವಳ ವ್ಯಕ್ತಪಡಿಸಿದ್ದು, ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಪಾರದರ್ಶಕವಾಗಿ ನಡೆಸಲು ಎಸ್ಐಟಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ