
ವಿಧಾನಸಭೆ (ಮಾ.27): ಐಪಿಎಲ್ ಕ್ರಿಕೆಟ್ ಪಂದ್ಯಾವಳಿ ಟಿಕೆಟ್ ವಿಚಾರ ವಿಧಾನಸಭೆಯಲ್ಲಿ ಪ್ರಸ್ತಾಪವಾಗಿ ಪ್ರತಿ ಶಾಸಕರಿಗೆ ಕನಿಷ್ಠ 5 ಟಿಕೆಟ್ ನೀಡುವಂತೆ ಪಕ್ಷಾತೀತವಾಗಿ ಶಾಸಕರು ಆಗ್ರಹಿಸಿದ ಪ್ರಸಂಗ ನಡೆಯಿತು.
ಗುರುವಾರ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಈ ವಿಚಾರ ಪ್ರಸ್ತಾಪಿಸಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ನಡೆದಾಗ ಶಾಸಕರಿಗೆ ಒಂದು ಪಾಸ್ ಕೊಡಲ್ಲ. ಕ್ರೀಡಾಂಗಣಕ್ಕೆ ರಾಜ್ಯ ಸರ್ಕಾರ ಮಾಸಿಕ 1,600 ರು. ಬಾಡಿಗೆಯಂತೆ 16.32 ಎಕರೆ ಜಾಗ ನೀಡಿದೆ. ಕೊಡುವ ಒಂದು ಟಿಕೆಟ್ ಮೇಲೂ ನಮ್ಮ ಹೆಸರು ಇರುತ್ತದೆ. ಆ ಟಿಕೆಟ್ ಕೊಟ್ಟು ನಮ್ಮ ಕುಟುಂಬದವರನ್ನೂ ಕಳುಹಿಸಲು ಆಗಲ್ಲ. ಪ್ರತಿ ಶಾಸಕರಿಗೆ ಕನಿಷ್ಠ 5 ಟಿಕೆಟ್ ಕೊಡಬೇಕು. ಅವರು ಉಚಿತವಾಗಿ ಕೊಡುವುದು ಬೇಡ. ನಾವು ಹಣ ಕೊಡುತ್ತೇವೆ ಎಂದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್ನ ವಿಜಯಾನಂದ ಕಾಶಪ್ಪನವರ್, ಶಾಸಕರಿಗೆ ಮರ್ಯಾದೆ ಇಲ್ಲವೇ? ಜನಸಾಮಾನ್ಯರ ಜತೆಗೆ ನಾವು ಸರತಿ ಸಾಲಲ್ಲಿ ನಿಲ್ಲಬೇಕಾ? ಪ್ರತಿ ಶಾಸಕರಿಗೆ ಕನಿಷ್ಠ 5 ಟಿಕೆಟ್ ಕೊಡಿಸಿ ಎಂದು ಆಗ್ರಹಿಸಿದರು.
ಇದಕ್ಕೆ ಬಿಜೆಪಿಯ ದುರ್ಯೊಧನ ಐಹೊಳೆ, ಕಾಂಗ್ರೆಸ್ನ ಕೋನರೆಡ್ಡಿ ಸೇರಿ ಕೆಲವರು ದನಿಗೂಡಿಸಿದರು. ಸ್ಪೀಕರ್ ಖಾದರ್ ಪ್ರತಿಕ್ರಿಯಿಸಿ, ಟಿಕೆಟ್ ಬಗ್ಗೆ ಸಂಬಂಧಿತರನ್ನು ಕರೆಸಿ ಮಾತನಾಡಿ. ಶಾಸಕರ ಕುಟುಂಬದ ಕನಿಷ್ಠ 4 ವಿಐಪಿ ಸ್ಟ್ಯಾಂಡ್ ಟಿಕೆಟ್ ಕೊಡುವಂತಾಗಲಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನಾನು ಕೆಎಸ್ಸಿಎ ಸದಸ್ಯ. ಅಧ್ಯಕ್ಷರನ್ನು ಕರೆಸಿ ಮಾತನಾಡುವೆ ಎಂದರು.
ಸಾಮ್ರಾಟ್ ಅಶೋಕ್, ಸ್ಪೀಕರ್ ಖಾದರ್ ಆದೇಶವನ್ನು ಅವರಿಗೆ ಹೇಳುತ್ತೇನೆ ಎಂದು ಹೇಳಿದರು. ಮನೆಯವರನ್ನು ಕರೆದುಕೊಂಡು ಹೋಗುವುದು ಹೇಗೆ? ಒಂದು ಟಿಕೆಟ್ಗೆ 5 ಸಾವಿರ ರು.ನಿಂದ 20 ಸಾವಿರ ರು. ವೆಚ್ಚವಾಗುತ್ತದೆ. ಕಾಳ ಸಂತೆಯಲ್ಲಿ ಟಿಕೆಟ್ಗಳ ಮಾರಾಟ ನಡೆಯುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ