Chitra sante 2023: ಚನ್ನೈನಿಂದ ಆಗಮಿಸಿದ್ದ ಕಿವುಡರ ‘ಡೆಫ್‌ ಕಲೆಕ್ಟಿವ್‌’ ತಂಡ ಕಲಾಕೃತಿ ರಚನೆಯಲ್ಲಿ ಅದ್ಭುತ!

By Kannadaprabha NewsFirst Published Jan 9, 2023, 7:22 AM IST
Highlights

ಪದಗಳಿಗೆ ನಿಲುಕದ ತಾಕಲಾಟದ ಭಾವನೆಗಳು ಬಣ್ಣದ ರೂಪ ಪಡೆದು ಕ್ಯಾನ್ವಾಸ್‌ ಮೇಲೆ ಹರಡಿಕೊಂಡಂತೆ ತೋರುವ ಕಲಾಕೃತಿ, ಕುಂಚದಲ್ಲಿ ಅರಳಿದ ಸ್ನಿಗ್ಧ ಸೌಂದರ್ಯ, ಜೀವನ ಪ್ರೀತಿ ಮೂಡಿಸುವ ಪಟಗಳು, ಪ್ರಕೃತಿಯ ರುದ್ರ ರಮಣೀಯತೆ, ಗೂಢಾರ್ಥದ ಕಲಾಕೃತಿಗಳು, ಸಾಂಪ್ರದಾಯಿದ ಕಲಾ ಶ್ರೀಮಂತಿಕೆ.

ಬೆಂಗಳೂರು (ಜ.9) : ಪದಗಳಿಗೆ ನಿಲುಕದ ತಾಕಲಾಟದ ಭಾವನೆಗಳು ಬಣ್ಣದ ರೂಪ ಪಡೆದು ಕ್ಯಾನ್ವಾಸ್‌ ಮೇಲೆ ಹರಡಿಕೊಂಡಂತೆ ತೋರುವ ಕಲಾಕೃತಿ, ಕುಂಚದಲ್ಲಿ ಅರಳಿದ ಸ್ನಿಗ್ಧ ಸೌಂದರ್ಯ, ಜೀವನ ಪ್ರೀತಿ ಮೂಡಿಸುವ ಪಟಗಳು, ಪ್ರಕೃತಿಯ ರುದ್ರ ರಮಣೀಯತೆ, ಗೂಢಾರ್ಥದ ಕಲಾಕೃತಿಗಳು, ಸಾಂಪ್ರದಾಯಿದ ಕಲಾ ಶ್ರೀಮಂತಿಕೆ. ಹೀಗೆ ಭಾನುವಾರ ನಡೆದ ಚಿತ್ರಸಂತೆ ಕುಮಾರಕೃಪಾ ರಸ್ತೆಯನ್ನು ಅಕ್ಷರಶಃ ಚಿತ್ರ ಕಲಾವಿದರ ಕುಂಬಮೇಳದಂತೆ ಪರಿವರ್ತಿಸಿತ್ತು. ನಸುಕಿನಿಂದ ರಾತ್ರಿವರೆಗೆ ಭೇಟಿ ನೀಡಿದ ಲಕ್ಷಾಂತರ ಜನ ಕಲಾವಿದರ ಕೈಚಳಕಕ್ಕೆ ಮಾರು ಹೋದರು. 

ಲ್ಯಾಂಡ್‌ಸ್ಕೇಪ್‌, ಪೋಟ್ರೈರ್‍(Landscape, portrait)ಟ್‌, ಕಾಫಿ ಆರ್ಟ್, ಲೆದರ್‌ ಆರ್ಟ್, ಫೆದರ್‌ ಆರ್ಟ್, ಬರ್ನಿಂಗ್‌ ವುಡ್‌, ಆ್ಯಂಟಿಕ್‌, ಪಟಚಿತ್ರ, ವುಡ್‌ ಕೊಲಾಜ್‌, ಮೆಟಲ್‌ ಎಂಪೊಸಿಯಮ್‌, ಫೆದರ್‌ ಆಟ್ಸ್‌ರ್‍, ಫೆಬಲ್‌ ಆರ್ಚ್‌ ಸೇರಿ ನೂರಾರು ಬಗೆಯ ಕಲಾಕೃತಿಗಳು ಪ್ರದರ್ಶನಗೊಂಡವು.

Chitra Santhe 2023: ಕಲಾಪ್ರೇಮಿಗಳಿಂದ ತುಂಬಿ ತುಳುಕಿದ ‘ಚಿತ್ರಸಂತೆ’

ಅನ್ಯ ರಾಜ್ಯಗಳ ಕಲೆ ಅನಾವರಣ

ಕರ್ನಾಟಕ, ಕೇರಳ, ತಮಿಳುನಾಡು, ಓಡಿಸ್ಸಾ, ಗುಜರಾತ್‌, ರಾಜಸ್ಥಾನ ಸೇರಿ 19 ರಾಜ್ಯಗಳ ಕಲಾವಿದರು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ರಾಜಸ್ಥಾನದ ಸುರೇಶ್‌ ಹಾಗೂ ರೇಣು ಅಗಾರಿಯಾ ದಂಪತಿಯ 5-6ಸಾವಿರ ರು. ಮೌಲ್ಯದ ಸಿಲ್‌್ಕ ಪೇಂಟಿಂಗ್‌ ಅತ್ಯಾಕರ್ಷಕವಾಗಿತ್ತು. ನಾವು ಕೋವಿಡ್‌ ಪೂರ್ವದ ಹಿಂದಿನ ಮೂರು ವರ್ಷದಿಂದ ಇಲ್ಲಿ ಪ್ರದರ್ಶನಕ್ಕೆ ಪ್ರಯತ್ನಿಸಿದ್ದೆವು, ಆಗಿರಲಿಲ್ಲ. ಈ ಬಾರಿ ಅವಕಾಶ ಸಿಕ್ಕಿದೆ ಎಂದು ಅವರು ಹೇಳಿದರು.

ಇನ್ನು, ಓಡಿಸ್ಸಾದ ಚಂದನ್‌ ಅವರ ಸಾಂಪ್ರದಾಯಿಕ ತಾಳೆ ಎಲೆಯ ಮೇಲಿನ ಕಲಾಕೃತಿ, ಪಟಚಿತ್ರಗಳು ಗ್ರಾಹಕರ ನೆಚ್ಚಿನ ಖರೀದಿಯ ಭಾಗವಾಗಿತ್ತು. ಬೆಂಗಾಲ್‌ನಿಂದ ಬಂದಿದ್ದ ಲಾಥು ಚಿತ್ರಕಾರ್‌ ಅವರ ಬೀಸಣಿಕೆ, ಚಹಾ ಕಿತ್ತಳಿ ಮೇಲಿನ ಚಿತ್ರಕಲೆ ವಿಶೇಷವಾಗಿತ್ತು. ಮುಂಬೈನ ಮಹ್ಮದ್‌ ಆಮೀನ್‌ ಅವರ ಕುಟುಂಬದವರು ಬರೆದ ಹಳೆ ಪೋಸ್ಟ್‌ಕಾರ್ಡ್‌, ಸ್ಟಾಂಪ್‌ ಪೇಪರ್‌ ಆರ್ಟ್ ಚಿತ್ರಕಲಾ ರಸಿಕರ ಮೆಚ್ಚುಗೆ ಗಳಿಸಿತು. ತಮಿಳುನಾಡು ಕೊಯಿಮತ್ತೂರಿನ ವಿಜಯ್‌ಕುಮಾರ್‌ ಪ್ರದರ್ಶಿಸಿದ ಲೋಹಗಳಲ್ಲಿ ರೂಪಿಸಿದ ಚಿತ್ರ ಗಮನಸೆಳೆಯಿತು.

ಕಿವುಡರ ‘ಡೆಫ್‌ ಕಲೆಕ್ಟಿವ್‌’ ತಂಡ

ಚೆನ್ನೈನಿಂದ ಆಗಮಿಸಿದ್ದ ಎಸ್‌.ಶ್ರೀನಿವಾಸನ್‌, ಕೆ.ಎಸ್‌.ಸಿಮ್ರೋನ್‌, ಸೀತಾರಾಮಾಚಾರ್ಯಲು ವಂಗಲಾ, ಎಲ್‌.ಲೋಕೇಶ್‌, ಎನ್‌.ಕವಿತಾ, ಆರ್‌.ರವಿಕುಮಾರ್‌ ಅವರ ‘ಡೆಫ್‌ ಕಲೆಕ್ಟಿವ್‌’ ತಂಡ ಚಿತ್ರಸಂತೆಯಲ್ಲಿ ಹಿರಿಯ ಕಲಾವಿದರಿಂದ ಮೆಚ್ಚುಗೆ ಗಳಿಸಿತು. ಕಿವಿ ಕೇಳದ ಇವರು ಆನೆಗಳು ನೀರು ಕುಡಿಯುವ, ಮೀನುಗಾರರ, ಪಕ್ಷಿ, ಚಿಟ್ಟೆಗಳಂಹ ಲ್ಯಾಂಡ್‌ಸ್ಕೇಪ್‌ ಹಾಗೂ ಪೂಜಾರಿ, ಕಲಾವಿದರಂತಹ ಪೋಟ್ರೈರ್‍ಟ್‌ ಕಲಾಕೃತಿಗಳು ಆಕರ್ಷಕವಾಗಿದ್ದವು.

ವಿಭಿನ್ನ ಮಾದರಿಗಳು

ಚಿತ್ರಸಂತೆಯಲ್ಲಿ ಸಾಕಷ್ಟುವಿಭಿನ್ನವಾದ ಚಿತ್ರ ಕಲಾಕೃತಿಗಳು ಹೊಸತನದಿಂದ ಕೂಡಿದ್ದವು. ಚಿತ್ರಕಲಾ ಪರಿಷತ್‌ನ ಹಿಂದಿನ ವಿದ್ಯಾರ್ಥಿ ನವೀನ್‌ ತಂಡದ ‘ಮಿಕ್ಸ್‌ ಮೀಡಿಯಾ’ ಎಂಬ ವಿನೂತನ ಮಾದರಿಯ ಕಲಾಕೃತಿಗಳು ಹೆಚ್ಚು ಗಮನ ಸೆಳೆದವು. ಮತ್ಸ್ಯ ಕನ್ಯೆ, ಪ್ರಕೃತಿಯೊಂದಿಗೆ ಬೆರೆತ ಸಂಗೀತ ಕಲಾವಿದ, ಒಳಾರ್ಥವುಳ್ಳ ಚಿತ್ರ ಕಲಾಕೃತಿಗಳನ್ನು ಪ್ರತಿಯೊಬ್ಬರೂ ಶ್ಲಾಘಿಸಿದರು. ಮಂಗಳೂರಿನ ಆಶ್ಮಿಕಾ ರೂಪಿಸಿದ್ದ ಫೆದರ್‌ ಆರ್ಚ್‌ ಅವುಗಳಲ್ಲಿ ಒಂದು. ಪಕ್ಷಿಗಳ ರೆಕ್ಕೆ ಪುಕ್ಕಗಳನ್ನು ಸಂಗ್ರಹಿಸಿ ಅವುಗಳ ಮೇಲೆ ಚಿತ್ರ ಬರೆವ ವಿನೂತನ ಮಾದರಿ ಇದಾಗಿತ್ತು.

ಇನ್ನು, ಜಯಂತ್‌ ಹುಬ್ಬಳ್ಳಿ ಅವರ ಮರಮುಟ್ಟುಗಳಿಂದ ರೂಪಿಸಿದ ಕಲಾಕೃತಿ, ಶೀನಾ ಅವರು ತಯಾರಿಸಿದ ಕಾಫಿ ಆರ್ಚ್‌, ರಚಿತಾ ರೂಪಿಸಿದ್ದ ಕಲ್ಲುಗಳ ಮೇಲೆ ಚಿತ್ರ ಬರೆವ ಫೆಬಲ್‌ ಆರ್ಚ್‌, ಕೆ.ಜೆ.ದೀಪ್ತಿ ಅವರ ಚುಕ್ಕಿ ಮಂಡಲ, ದಾವಣಗೆರೆಯ ಮಹ್ಮದ ರೆಹಮಾನ್‌ ಅವರ ವುಡ್‌್ಸ ಬರ್ನಿಂಗ್‌ (ಕಟ್ಟಿಗೆಯನ್ನು ಸುಡುತ್ತ ಚಿತ್ರ ಬಿಡಿಸುವ ಕಲೆ) ವಿಶೇಷ ಮಾದರಿ ಎನಿಸಿತು.

ಪ್ರಥಮ ಪ್ರದರ್ಶನ

ಬೆಂಗಳೂರಿನ ಯುವ ಚಿತ್ರಕಲಾವಿದ ಇ.ಎಸ್‌.ದೈವಿಕ್‌ ‘ನನ್ನ ಕಲಾಕೃತಿಗಳು ಯುರೋಪ್‌, ಬಲ್ಗೇರಿಯಾ, ಇಂಡೋನೇಷ್ಯಾ, ಬೊಲಿವಿಯಾದಲ್ಲಿ ಪ್ರದರ್ಶನ ಕಾಣುತ್ತಿವೆ. ಆದರೆ ಇಲ್ಲಿ ಪ್ರದರ್ಶನಕ್ಕೆ ಬಂದಿದ್ದು ಇದೇ ಮೊದಲು. ತುಂಬಾ ಖುಷಿಯಾಗಿದೆ’ ಎಂದರು. ಮಕ್ಕಳ ವೈದ್ಯೆ ಎಲ್‌.ಶೋಭಾ, ‘ಹವ್ಯಾಸಿ ಕಲಾವಿದೆಯಾಗಿದ್ದ ನಾನು ಕೋವಿಡ್‌ ಬಳಿಕ ಚಿತ್ರಕಲೆಯನ್ನೇ ವೃತ್ತಿಯಾಗಿಸಿಕೊಂಡೆ. ದೇಶ ವಿದೇಶ ಸುತ್ತಿ ಅಲ್ಲಿನ ಫೋಟೋ ತೆಗೆದುಕೊಂಡು ಚಿತ್ರ ಬರೆದು ಪ್ರದರ್ಶನ ಮಾಡುತ್ತಿದ್ದೇನೆ. ಚಿತ್ರಸಂತೆಯಲ್ಲಿ ಮೊದಲ ಬಾರಿ ಪ್ರದರ್ಶನಕ್ಕೆ ಬಂದಿದ್ದೇನೆ’ ಎಂದರು. ಅದೇ ರೀತಿ ಕುಮಟಾದ ಅಗ್ನಿಹೋತ್ರಿ ಅವರು ಇಲ್ಲಿ ಮೊದಲ ಬಾರಿ ಪ್ರದರ್ಶಿಸಿದ ಕಲಾಕೃತಿಗಳು ಆಕರ್ಷಕವಾಗಿದ್ದವು.

Chitra Santhe 2023: ನವಿಲು ಚಿತ್ರ ಬಿಡಿಸುವ ಮೂಲಕ 'ಚಿತ್ರಸಂತೆ'ಗೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ

ಚಿತ್ರಕಲಾ ಕೇಂದ್ರಗಳು

ಮೈಸೂರಿನ ಕಲಾನಿಕೇತನ ಸ್ಕೂಲ… ಆಫ್‌ ಆಟ್ಸ್‌ರ್‍ನ ಕೆ.ಸಿ.ಮಹಾದೇವ ಶೆಟ್ಟಿಅವರ ಹಂಪಿ, ಸೋಮನಾಥಪುರ, ಪುರಾತನ ದೇಗುಲಗಳ ದ್ವಾರ ಬಾಗಿಲುಗಳ ಕಲಾಕೃತಿಗಳು ಅತ್ಯಾಕರ್ಷಕವಾಗಿದ್ದವು. ಬರೋಬ್ಬರಿ 2​​​-3 ಲಕ್ಷ ಬೆಲೆಯ ಇವು ನೋಡುಗರ ಹುಬ್ಬೇರಿಸುವಂತಿದ್ದವು. ಸರ್ಕಾರಿ ಶಾಲೆಗೆ ಉಚಿತವಾಗಿ ಬಣ್ಣ ಬಳಿವ ‘ಯುವಕರ ಸಂಘ’ದ ಆಟ್ಸ್‌ರ್‍ ಮ್ಯಾಟರ್‌ನಿಂದ ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿತ್ತು. ಬೆಂಗಳೂರು ವಿಶ್ವವಿದ್ಯಾಲಯದ ದೃಶ್ಯಕಲಾ ವಿಭಾಗ, ವಿಕಾಸಸೌಧದ ಉದ್ಯೋಗಿ ಸಿ.ಅಶೋಕ್‌ ಅವರ ಚಿತ್ರಕಲಾ ಕೇಂದ್ರದ ವಿದ್ಯಾರ್ಥಿಗಳು ಬರೆದ ಚಿತ್ರಗಳು ಪ್ರದರ್ಶನಗೊಂಡವು.

click me!