ಶಾಲಾ ಮಕ್ಕಳಿಂದ ಮಸಾಜ್‌ ಮಾಡಿಸಿಕೊಳ್ತಿದ್ರು: ವಚನಾನಂದಶ್ರೀಗಳ ವಿರುದ್ಧ ಹರಿಹರ ಮಠದ ಟ್ರಸ್ಟಿ ಗಂಭೀರ ಆರೋಪ

Kannadaprabha News   | Kannada Prabha
Published : Apr 15, 2026, 06:54 AM IST
Davanagere Vachananda Swamiji Used School Kids for Massages Harihar Mutt Trustee Shocking Allegations rav

ಸಾರಾಂಶ

ಹರಿಹರ ಪಂಚಮಸಾಲಿ ಮಠದ ಟ್ರಸ್ಟಿಗಳು ವಚನಾನಂದ ಸ್ವಾಮೀಜಿಯವರನ್ನು ಪೀಠದಿಂದ ಉಚ್ಚಾಟಿಸಿದ್ದಾರೆ. ಮಕ್ಕಳೊಂದಿಗೆ ಅನುಚಿತ ವರ್ತನೆ, ವಿಕೃತ ನಡವಳಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಹೊರಿಸಿ, ತಕ್ಷಣವೇ ಮಠವನ್ನು ಖಾಲಿ ಮಾಡುವಂತೆ ಟ್ರಸ್ಟಿ ಚಂದ್ರಶೇಖರ ಪೂಜಾರ ಎಚ್ಚರಿಕೆ ನೀಡಿದ್ದಾರೆ.

ದಾವಣಗೆರೆ (ಏ.15) ವಚನಾನಂದ ಸ್ವಾಮೀಜಿಗೆ ನೈತಿಕತೆ ಇದ್ದರೆ ತಕ್ಷಣವೇ ಹರಿಹರ ಪಂಚಮಸಾಲಿ ಮಠವನ್ನು ತೊರೆಯಲಿ. ಇಲ್ಲದಿದ್ದರೆ ಮಠದಿಂದ ಹೇಗೆ ಖಾಲಿ ಮಾಡಿಸಬೇಕೆಂಬುದೂ ನಮಗೆ ಗೊತ್ತಿದೆ. ಕಾದು ನೋಡಿ ಎಂದು ಪೀಠದ ಟ್ರಸ್ಟಿ ಚಂದ್ರಶೇಖರ ಪೂಜಾರ ಹೇಳಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠಾಧ್ಯಕ್ಷರಾಗಿದ್ದ ವಚನಾನಂದ ಶ್ರೀಗಳ ಆಚಾರ, ವಿಚಾರ, ನಡೆ, ನುಡಿಗಳನ್ನು ತಿದ್ದಿಕೊಳ್ಳಲು ಹಲವಾರು ಸಲ ಹೇಳಿದ್ದರೂ ಕಿವಿಗೊಡದ ಹಿನ್ನೆಲೆಯಲ್ಲಿ ಪೀಠದಿಂದ ಉಚ್ಚಾಟಿಸಿದ್ದು, ತಕ್ಷಣವೇ ಮಠದಿಂದ ಜಾಗ ಖಾಲಿ ಮಾಡಬೇಕು ಎಂದರು.

ಟ್ರಸ್ಟ್‌ ವಿರುದ್ಧ ಸಮಾಜದ ಕೆಲವರನ್ನು ಎತ್ತಿಕಟ್ಟಿ, ನಮ್ಮ ವಿರುದ್ಧ ಲೆಕ್ಕ ಕೊಡಿ ಚಳವಳಿ ಮಾಡಿಸುವ ಮೂಲಕ ಸಮಾಜವನ್ನೇ ದಿಕ್ಕು ತಪ್ಪಿಸುವ ಕೆಲಸ ಸ್ವಾಮೀಜಿ ಮಾಡಿದ್ದಾರೆ. ಶ್ರೀಮಠದಿಂದ ವಚನಾನಂದ ಶ್ರೀಗಳನ್ನು ಉಚ್ಚಾಟಿಸಿದ ನಂತರ ಸೋಮವಾರ ಸಂಜೆ ಮಠದಲ್ಲಿ ಕೆಲವರ ಸಭೆ ಮಾಡಿ, ಪ್ರಧಾನ ಧರ್ಮದರ್ಶಿ ಬಿ.ಸಿ.ಉಮಾಪತಿ ವಿರುದ್ಧ ಮಾತನಾಡಿದ್ದು ಸರಿಯಲ್ಲ ಎಂದರು.

‘ಮಠದಲ್ಲಿ 60 ಮಕ್ಕಳು ವಸತಿಯುತ ಶಿಕ್ಷಣ ಪಡೆಯುತ್ತಿದ್ದರು. ಈಗ ಮಕ್ಕಳ ಸಂಖ್ಯೆ ಕೇವಲ 6ಕ್ಕೆ ಇಳಿದಿದೆ. ಅಲ್ಲಿದ್ದ ಬಡ, ಅನಾಥ ಮಕ್ಕಳಿಗೆ ಅವಾಚ್ಯವಾಗಿ ನಿಂದಿಸುವುದು, ಟ್ರಸ್ಟಿಗಳ ಬಗ್ಗೆ ಹಗುರವಾಗಿ ಮಾತನಾಡುವುದು. ನಿತ್ಯ 4 ಮಕ್ಕಳಿಂದ ನಿಮ್ಮ ಮೈ-ಕೈ-ಕಾಲಿಗೆ ಮಸಾಜ್ ಮಾಡಿಸಿಕೊಳ್ಳುತ್ತಿದ್ದು, ನಿಮ್ಮ ವಿಕೃತ ವರ್ತನೆ ಹೇಳುವುದು ಬೇಡ. ಕೆಲ ಪಾಲಕರು ಅಪ್ರಾಪ್ತ ಮಕ್ಕಳನ್ನು ಹೀಗೆ ನಡೆಸಿಕೊಂಡ ನಿಮ್ಮ ವಿರುದ್ಧ ಪೋಕ್ಸೋ ಕೇಸ್‌ ಮಾಡಲು ಮುಂದಾಗಿದ್ದರು. ಇದೇ ಟ್ರಸ್ಟಿಗಳು ಪೀಠ, ಸಮಾಜದ ಗೌರವ ಕಾಪಾಡುವಂತೆ ಮನವಿ ಮಾಡಿ, ಠಾಣೆ ಮೆಟ್ಟಿಲೇರುತ್ತಿದ್ದವರನ್ನು ತಡೆದಿದ್ದು, ಒಂದು ವೇಳೆ ದೂರು ದಾಖಲಾದರೆ ನಿಮ್ಮ ಗತಿ ಏನು ಯೋಚಿಸಿದ್ದೀರಾ’ ಎಂದು ಅವರು ಪ್ರಶ್ನಿಸಿದರು.

ಪೀಠದಲ್ಲಿ 50ಕ್ಕೂ ಹೆಚ್ಚು ಮಕ್ಕಳು ಶ್ರೀಗಳ ವರ್ತನೆಯಿಂದ ಮಠ ತೊರೆದಿದ್ದಾರೆ. ಮಕ್ಕಳಿಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಈ ಬಗ್ಗೆ ತಿಳಿ ಹೇಳಿದರೂ ಸ್ವಾಮೀಜಿ ಬದಲಾಗಲಿಲ್ಲ, ತಿದ್ದಿಕೊಳ್ಳಲಿಲ್ಲ ಎಂದು ಹೇಳಿದರು.

ಪೋರ್ಜರಿ ಸಾಬೀತಿಗೆ ಪೂಜಾರ ಸವಾಲು

ಹರಿಹರ ಪಂಚಮಸಾಲಿ ಪೀಠದ ಹಣದಲ್ಲಿ ನಾವೇನಾದರೂ ಫೋರ್ಜರಿ ಸಹಿ ಮಾಡಿ, ಹಣ ಪಡೆದ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಹೀಗೆ ಫೋರ್ಜರಿ ಮಾಡಿ, ಹಣವನ್ನು ಬಳಸಿಕೊಂಡಿದ್ದನ್ನ ಸಾಬೀತುಪಡಿಸಲು ಸ್ವಾಮೀಜಿಗೆ ಇನ್ನೂ ಒಂದು ವರ್ಷ ಕಾಲಾವಕಾಶ ಕೊಡುತ್ತೇವೆ. ಒಂದುವೇಳೆ ಪೋರ್ಜರಿ ಮಾಡಿ ಹಣ ಲಪಟಾಯಿಸಿದ್ದನ್ನು ಸಾಬೀತುಪಡಿಸಿದರೆ 1ಕ್ಕೆ ಹತ್ತರಷ್ಟು ಹಣ ಕಟ್ಟಲು ಸಿದ್ಧರಿದ್ದೇವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ವಚನಾಶ್ರೀ ನಿತ್ಯ ಮಕ್ಕಳಿಂದ ಮಸಾಜ್‌ ಮಾಡಿಸಿಕೊಳ್ತಿದ್ರು: ಹರಿಹರ ಮಠದ ಟ್ರಸ್ಟಿ
ಇಂದು ಸ್ವಯಂ ಗಣತಿ ಅಂತ್ಯ, ನಾಳೆಯಿಂದ ಮನೆಗಣತಿ ಆರಂಭ, ಗಣತಿದಾರರು ಕೇಳುವ 33 ಪ್ರಶ್ನೆಗಳೇನು?