ದಾವಣಗೆರೆ 'ದಕ್ಷಿಣ' ಸಮರದಲ್ಲಿ ಜಮೀರ್ ಮಾತಿಗೆ ಮಲ್ಲಿಕಾರ್ಜುನ ಕೌಂಟರ್: 'ಅವನೊಬ್ಬನಿಂದ ಊರು ಹಾಳಾಗೋದು ಬೇಡ'!

Published : Mar 09, 2026, 08:59 PM IST
Davanagere South by election Congress ticket row SS Mallikarjun lashes out at Minister Zameer

ಸಾರಾಂಶ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹಸ್ತಕ್ಷೇಪಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಮೀರ್ ಅವರ ಹೇಳಿಕೆಗಳು ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರ ನಡೆಗಳಿಂದ ಗೊಂದಲ ಸೃಷ್ಟಿಯಾಗಿದೆ ಎಂದರು.

ದಾವಣಗೆರೆ (ಮಾ.09): ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರ ಈಗ ಕಾಂಗ್ರೆಸ್‌ನ ಇಬ್ಬರು ಸಚಿವರ ನಡುವಿನ ಬಹಿರಂಗ ಸಮರಕ್ಕೆ ಸಾಕ್ಷಿಯಾಗಿದೆ. ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಒತ್ತಾಯಕ್ಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಇಂದು ದಾವಣಗೆರೆಯಲ್ಲಿ ಅತ್ಯಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜಮೀರ್ ಅವರ ಹಸ್ತಕ್ಷೇಪ ಮತ್ತು ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರ ನಡೆಗಳ ವಿರುದ್ಧ ಮಲ್ಲಿಕಾರ್ಜುನ ಕಿಡಿಕಾರಿದ್ದಾರೆ.

ನಮ್ಮ ತಂದೆ ಇವರಿಗೊಬ್ಬರಿಗೇ ಮಾತು ಕೊಟ್ಟಿದ್ದಾರಾ?

ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆಯನ್ನು ಪ್ರಶ್ನಿಸಿದ ಮಲ್ಲಿಕಾರ್ಜುನ, 'ಮುಸ್ಲಿಮರಿಗೆ ಟಿಕೆಟ್ ಕೊಡಬೇಕು ಎಂದು ನಮ್ಮ ತಂದೆಯವರು (ಶಾಮನೂರು ಶಿವಶಂಕರಪ್ಪ) ಯಾರ ಬಳಿ ಹೇಳಿದ್ದಾರೆ? ಬರಿ ಅಬ್ದುಲ್ ಜಬ್ಬಾರ್‌ಗೆ ಅಷ್ಟೇ ನಮ್ಮ ತಂದೆಯವರು ಈ ಮಾತು ಹೇಳಿದ್ದಾರಾ? ನಾವೆಲ್ಲಾ ಒಂದೇ ಕುಟುಂಬದವರಂತೆ ಇದ್ದೇವೆ, ಏನಿದ್ದರೂ ಕೂತು ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಬಹಿರಂಗವಾಗಿ ಮಾತನಾಡುವುದು ಸರಿಯಲ್ಲ' ಎಂದು ಗುಡುಗಿದ್ದಾರೆ.

ಜಮೀರ್ ವಿರುದ್ಧ ವಾಗ್ದಾಳಿ:

ಬೆಂಗಳೂರಿನಿಂದ ಬಂದು ದಾವಣಗೆರೆ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಜಮೀರ್ ಅಹಮದ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮಲ್ಲಿಕಾರ್ಜುನ, 'ಜಮೀರ್ ಅಲ್ಲಿಂದ ಇಲ್ಲಿಗೆ ಬಂದು ಮಾತನಾಡುವ ಅವಶ್ಯಕತೆ ಏನಿದೆ? ಅವನ ಮಾತುಗಳಿಂದಲೇ ಈ ಎಲ್ಲಾ ಗೊಂದಲಗಳು ಸೃಷ್ಟಿಯಾಗಿವೆ. ಅವನಿಗೆ ಏನಾದರೂ ಹೇಳುವುದಿದ್ದರೆ ನೇರವಾಗಿ ನನ್ನ ಬಳಿ ಬಂದು ಮಾತನಾಡಬೇಕಿತ್ತು. ನಾನೇ ಎಲ್ಲವನ್ನೂ ಸ್ಪಷ್ಟಪಡಿಸುತ್ತಿದ್ದೆ. ಅದನ್ನು ಬಿಟ್ಟು ಸಾರ್ವಜನಿಕವಾಗಿ ಗೊಂದಲ ಮೂಡಿಸುವುದು ಸರಿಯಲ್ಲ' ಎಂದರು.

ಅಬ್ದುಲ್ ಜಬ್ಬಾರ್ ವಿರುದ್ಧ ಆಕ್ರೋಶ:

ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರು ಮುಸ್ಲಿಂ ಮುಖಂಡರ ಸಭೆ ನಡೆಸುತ್ತಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಸಚಿವರು, 'ಅಬ್ದುಲ್ ಜಬ್ಬಾರ್ ಮಾಡುತ್ತಿರುವುದು ಇಂದಿನ ಕೆಲಸವಲ್ಲ. 1991-94 ರಿಂದಲೂ ಅವನು ಇದನ್ನೇ ಮಾಡಿಕೊಂಡು ಬಂದಿದ್ದಾನೆ. ಅವನೊಬ್ಬನ ಚೇಷ್ಟೆಯಿಂದ ಇಡೀ ಊರು ಹಾಳಾಗುವುದು ನಮಗೆ ಇಷ್ಟವಿಲ್ಲ. ಊರು ಹಾಳಾಗೋದು ಬೇಡ' ಎಂದು ಅತ್ಯಂತ ಕಠಿಣವಾಗಿ ಟೀಕಿಸಿದರು. ಅಲ್ಲದೆ, ಪಕ್ಷದಿಂದ ಸಸ್ಪೆಂಡ್ ಆದವರನ್ನು ಇಟ್ಟುಕೊಂಡು ಸಭೆ ಮಾಡುವುದನ್ನು ನಾವು ಒಪ್ಪುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾರ್ಯಕರ್ತರೇ ಹೈಕಮಾಂಡ್:

ಟಿಕೆಟ್ ವಿಚಾರದಲ್ಲಿ ಕಾರ್ಯಕರ್ತರ ಅಭಿಪ್ರಾಯವೇ ಅಂತಿಮ ಎಂದು ಮಲ್ಲಿಕಾರ್ಜುನ ಸ್ಪಷ್ಟಪಡಿಸಿದರು. 'ಇದು ಕಾರ್ಯಕರ್ತರ ಪಕ್ಷ. ಕಾರ್ಯಕರ್ತರಿಲ್ಲದೆ ಇಲ್ಲಿ ಏನೂ ನಡೆಯಲ್ಲ. ಅವರ ಅಭಿಪ್ರಾಯವನ್ನು ನಾವು ಪಡೆಯುತ್ತೇವೆ. ಅಂತಿಮವಾಗಿ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿ ಯಾರು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಆಕಾಂಕ್ಷಿಗಳು ಯಾರಿದ್ದಾರೆ ಅವರೆಲ್ಲರನ್ನೂ ಕರೆದು ಮಾತನಾಡುತ್ತೇವೆ. ನಮ್ಮ ಗುರಿ ದಾವಣಗೆರೆ ದಕ್ಷಿಣ ಕ್ಷೇತ್ರವನ್ನು ಗೆಲ್ಲುವುದು ಮಾತ್ರ' ಎಂದು ಹೇಳಿದರು.

ಒಟ್ಟಾರೆಯಾಗಿ ದಾವಣಗೆರೆ ಕಾಂಗ್ರೆಸ್‌ನಲ್ಲಿ ಶಾಮನೂರು ಕುಟುಂಬದ ಹಿಡಿತ ಮತ್ತು ಜಮೀರ್ ಅಹಮದ್ ಖಾನ್ ಅವರ ಅಲ್ಪಸಂಖ್ಯಾತ ರಾಜಕೀಯದ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಮಲ್ಲಿಕಾರ್ಜುನ ಅವರ ಈ 'ನ್ಯಾಯ, ನೀತಿ, ಧರ್ಮ'ದ ವಾದವು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅನೇಕಲ್ ಕಿಡ್ನಾಪ್ & ಹತ್ಯೆ ಕೇಸ್‌, ನಮ್ಮ ಕಮ್ಯೂನಿಟಿ ಕೊಲೆ ಮಾಡಿಲ್ಲ ಎಂದ ಪ್ರದೀಪ್ ಈಶ್ವರ್
ದಾವಣಗೆರೆ ಟಿಕೆಟ್ ಕೇಳಲು ಹೋಗಿ, ಚಾಮರಾಜಪೇಟೆ ಕ್ಷೇತ್ರವನ್ನೇ ಬಿಟ್ಟುಕೊಡುವುದಾಗಿ ಹೇಳಿದ ಸಚಿವ ಜಮೀರ್ ಅಹಮದ್!