ಚಿಕ್ಕಮಗಳೂರು: ದತ್ತಪೀಠ ವ್ಯವಸ್ಥಾಪನಾ ಸಮಿತಿ ಎತ್ತಿ ಹಿಡಿದ ಕೋರ್ಟ್

Published : Mar 07, 2023, 01:00 PM IST
ಚಿಕ್ಕಮಗಳೂರು: ದತ್ತಪೀಠ ವ್ಯವಸ್ಥಾಪನಾ ಸಮಿತಿ ಎತ್ತಿ ಹಿಡಿದ ಕೋರ್ಟ್

ಸಾರಾಂಶ

ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿ ದತ್ತ ಪೀಠದಲ್ಲಿ ಪೂಜಾ ವಿಧಿ-ವಿಧಾನ ನೆರವೇರಿಸಲು ಮುಸ್ಲಿಂ ಸಮುದಾಯದ ಸೈಯದ್‌ ಗೌಸ್‌ ಮೊಹಿಯುದ್ದೀನ್‌ ಶಾ ಖಾದ್ರಿ ಅವರನ್ನು ನೇಮಕ ಮಾಡಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಏಕ ಸದಸ್ಯ ನ್ಯಾಯಪೀಠದ ತೀರ್ಪನ್ನು ಹೈಕೋರ್ಟ್ವಿ ಭಾಗೀಯ ಪೀಠ ಎತ್ತಿಹಿಡಿದಿದೆ.

ಬೆಂಗಳೂರು (ಮಾ.7) :ಚಿಕ್ಕಮಗಳೂರಿನ ಬಾಬಾ ಬುಡನ್‌ಗಿರಿ ದತ್ತ ಪೀಠದಲ್ಲಿ ಪೂಜಾ ವಿಧಿ-ವಿಧಾನ ನೆರವೇರಿಸಲು ಮುಸ್ಲಿಂ ಸಮುದಾಯದ ಸೈಯದ್‌ ಗೌಸ್‌ ಮೊಹಿಯುದ್ದೀನ್‌ ಶಾ ಖಾದ್ರಿ ಅವರನ್ನು ನೇಮಕ ಮಾಡಿ 2018ರಲ್ಲಿ ಅಂದಿನ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ್ದ ಏಕ ಸದಸ್ಯ ನ್ಯಾಯಪೀಠದ ತೀರ್ಪನ್ನು ಹೈಕೋರ್ಟ್(Karnataka Highcourt) ವಿಭಾಗೀಯ ಪೀಠ ಎತ್ತಿಹಿಡಿದಿದೆ.

ಏಕಸದಸ್ಯ ನ್ಯಾಯಪೀಠ 2021ರ ಸೆ.28ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸೈಯದ್‌ ಗೌಸ್‌ ಮೊಹಿಯುದ್ದೀನ್‌ ಶಾ ಖಾದ್ರಿ(Syed Ghaus Mohiuddin Shah) ಅವರು ಅದೇ ವರ್ಷ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ, ನ್ಯಾಯಮೂರ್ತಿ ಅಲೋಕ್‌ ಅರಾಧೆ ಮತ್ತು ನ್ಯಾಯಮೂರ್ತಿ ವಿಜಯಕುಮಾರ್‌ ಎ. ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಸೋಮವಾರ ತೀರ್ಪು ನೀಡಿದೆ.

ಚಿಕ್ಕಮಗಳೂರು: ದತ್ತಪೀಠ ಸಮಿತಿ ರದ್ದತಿಗೆ ಮುಸ್ಲಿಂ ಮುಖಂಡರ ಆಗ್ರಹ

ಪ್ರಕರಣ ಸಂಬಂಧ 2022ರ ಜು.1ರಂದು ಸಚಿವ ಸಂಪುಟ ಕೈಗೊಂಡಿದ್ದ ನಿರ್ಣಯದ ಅನ್ವಯ, ದತ್ತಾತ್ರೇಯ ಪೀಠದಲ್ಲಿ ಹಿಂದೂ ಹಾಗೂ ಮುಸ್ಲಿಂ ಎರಡೂ ಧರ್ಮಗಳ ಸಂಪ್ರದಾಯಗಳ ಪ್ರಕಾರ ಪೂಜೆ ನೆರವೇರಿಸಲು ಮುಜಾವರ್‌ ಮತ್ತು ಅರ್ಚಕರನ್ನು ನೇಮಿಸಿ ರಾಜ್ಯ ಸರ್ಕಾರ 2022ರ ಜು.19ರಂದು ಆದೇಶಿಸಿದೆ. ಆ ಪೂಜಾ ಕೈಂಕರ್ಯಗಳ ಮೇಲೆ ನಿಗಾ ವಹಿಸಲು ಎಲ್ಲ ಧರ್ಮದವರನ್ನು ಒಳಗೊಂಡ 8 ಮಂದಿ ಸದಸ್ಯರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಚಿಸಲಾಗಿದೆ. ಸಮಿತಿಯ ಕಾರ್ಯ ನಿರ್ವಹಣೆಗೆ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಸದ್ಯ ಚಾಲ್ತಿಯಲ್ಲಿದೆ. ಹಾಗಾಗಿ, ಏಕ ಸದಸ್ಯ ನ್ಯಾಯಪೀಠದ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯತೆ ಕಂಡುಬರುತ್ತಿಲ್ಲ ಎಂದು ತಿಳಿಸಿದ ವಿಭಾಗೀಯ ಪೀಠ, ವ್ಯವಸ್ಥಾಪನಾ ಸಮಿತಿ ಮುಂದುವರಿಕೆಗೆ ಸಮ್ಮತಿಸಿ ಮೇಲ್ಮನವಿ ವಜಾ ಮಾಡಿದೆ.

ಧರ್ಮ, ಲಿಂಗ, ಜಾತಿ, ಮೇಲು, ಕೀಳುಗಳನ್ನೆಲ್ಲಾ ತೊಡೆದುಹಾಕಿ ಸಮಾನ ಸಮಾಜ ನಿರ್ಮಿಸುವುದೇ ನಮ್ಮ ಸಂವಿಧಾನದ ಹೆಗ್ಗುರುತು. ಸಾರ್ವಜನಿಕ ವ್ಯವಸ್ಥೆ, ನೈತಿಕತೆಗೆ ಒಳಪಟ್ಟು ಯಾವುದೇ ವ್ಯಕ್ತಿ ತನಗಿಷ್ಟಬಂದ ಧರ್ಮವನ್ನು ಪಾಲಿಸಬಹುದು ಮತ್ತು ಪ್ರಚಾರ ಮಾಡಬಹುದು. ಸರ್ಕಾರಗಳು ಧಾರ್ಮಿಕ ಕೇಂದ್ರಗಳನ್ನು ರಕ್ಷಿಸಬೇಕಾಗಿದೆ ಎಂದು ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ರಾಜ್ಯ ಸರ್ಕಾರ ಪ್ರಕರಣದ ಸೂಕ್ಷ್ಮತೆ ಅರಿತು ಮುಸ್ಲಿಂ ಮತ್ತು ಹಿಂದೂ ಧರ್ಮದವರ ಪ್ರತಿನಿಧಿಗಳ ಜತೆ ಸಮಾಲೋಚಿಸಿ ದತ್ತ ಪೀಠದಲ್ಲಿ ಪೂಜಾ ವಿಧಿವಿಧಾನದ ನಿರ್ವಹಣೆಗೆ ಕ್ರಮ ಕೈಗೊಂಡಿದೆ. ಸರ್ಕಾರ ರಚಿಸಿರುವ ವ್ಯವಸ್ಥಾಪನಾ ಸಮಿತಿ ಬಗ್ಗೆ ಯಾವುದೇ ಧರ್ಮದವರಿಂದಲೂ ಆಕ್ಷೇಪ ವ್ಯಕ್ತವಾಗಿಲ್ಲ. ಸಮಿತಿಯು ಸಹ ಯಾವುದೇ ದೂರುಗಳಿಲ್ಲದ ರೀತಿಯಲ್ಲಿ ದತ್ತ ಪೀಠ ಧಾರ್ಮಿಕ ಕೇಂದ್ರದ ವ್ಯವಹಾರಗಳನ್ನು ನಿರ್ವಹಿಸಿಕೊಂಡು ಬರುತ್ತಿದೆ. ವ್ಯವಸ್ಥಾಪನಾ ಸಮಿತಿ ಮತ್ತು ಇಬ್ಬರು ಅರ್ಚಕರ ನೇಮಕಾತಿ ಆದೇಶವು ಏಕಪಕ್ಷೀಯ, ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಯಾವುದೇ ಸಮಾಜದವರು ಆಕ್ಷೇಪ ಎತ್ತಿಲ್ಲ ಎಂದು ತೀರ್ಪಿನಲ್ಲಿ ವಿಭಾಗೀಯ ಪೀಠ ತಿಳಿಸಿದೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯದ(Hindu muslim community)ವರು ತಮ್ಮ ನಡವಳಿಕೆಯಿಂದ ನಿಜವಾದ ಜಾತ್ಯತೀತೆಗೆ ತಾಜಾ ಉದಾಹರಣೆಯಾಗಿದ್ದಾರೆ. ಅಲ್ಲದೆ, ಧಾರ್ಮಿಕ ಕೇಂದ್ರಗಳ ಸಂಪ್ರದಾಯ ಮತ್ತು ವಿಧಿ ವಿಧಾನಗಳ ಬಗ್ಗೆ ನ್ಯಾಯಾಲಯಗಳು ಜಾಗರೂಕವಾಗಿರುತ್ತವೆ. ಸಾಮಾನ್ಯವಾಗಿ ನ್ಯಾಯಾಲಯಗಳು ಇಂತಹ ಅದರಲ್ಲೂ ಭಕ್ತಾದಿಗಳ ನಡುವಿನ ಮೂಲಭೂತ ಹಕ್ಕುಗಳ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಸದ್ಯ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರ ನಡುವೆ ಯಾವುದೇ ವಿವಾದ ಇಲ್ಲ. ಆದ್ದರಿಂದ ಐದು ದಶಕಗಳ ಹಿಂದೆ ಹುಟ್ಟಿದ ವಿವಾದಕ್ಕೆ ಅಂತ್ಯ ಹಾಡುವುದೇ ಸೂಕ್ತವಾಗಿದೆ ಎಂದು ವಿಭಾಗೀಯ ಪೀಠ ತನ್ನ 51 ಪುಟಗಳ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಪ್ರತಿವಾದಿಯಾಗಿದ್ದ ದತ್ತಾತ್ರೇಯ ಪೀಠ ದೇವಸ್ಥಾನಂ ಸಂವರ್ಧನಾ ಸಮಿತಿಯ ಪರ ವಕೀಲ ಜಗದೀಶ್‌ ಬಾಳಿಗಾ ವಾದ ಮಂಡಿಸಿದ್ದರು.

ದತ್ತಪೀಠದ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೊನೆಗೂ ಕ್ಷಮೆಯಾಚಿಸಿದ ಶಾಸಕ ಟಿ.ಡಿ.ರಾಜೇಗೌಡ

ಪ್ರಕರಣದ ಹಿನ್ನೆಲೆ:

ದತ್ತಾತ್ರೇಯ ಪೀಠ(Dattapeetha)ದಲ್ಲಿ ಪೂಜಾ ವಿಧಿ-ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್‌ ಗೌಸ್‌ ಮೊಹಿದ್ದೀನ್‌ ಅವರನ್ನು ನೇಮಿಸಿ 2018ರಲ್ಲಿ ಅಂದಿನ ರಾಜ್ಯ ಸರಕಾರ ಆದೇಶಿಸಿತ್ತು. ಅದನ್ನು ರದ್ದುಪಡಿಸಿದ್ದ ಹೈಕೋರ್ಚ್‌ ಏಕ ಸದಸ್ಯ ನ್ಯಾಯಪೀಠ, ಪ್ರಕರಣವನ್ನು ಸರಕಾರಕ್ಕೆ ಹಿಂದಿರುಗಿಸಿ, ಪ್ರಕರಣದ ಕುರಿತು ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿ ನೀಡಿರುವ ವರದಿ ಗಣನೆಗೆ ತೆಗೆದುಕೊಳ್ಳದೇ ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕು ಎಂದು 2021ರ ಸೆ.28ರಂದು ನಿರ್ದೇಶಿಸಿತ್ತು. ಈ ತೀರ್ಪು ಪ್ರಶ್ನಿಸಿ ಗೌಸ್‌ ಮೊಹಿದ್ದೀನ್‌ ಮೇಲ್ಮನವಿ ಸಲ್ಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
ದತ್ತಪೀಠ ವಿಚಾರದಲ್ಲಿ ರಾಜ್ಯ ಸರ್ಕಾರ ನ್ಯಾಯ ಒದಗಿಸಲಿ: ಸಿ.ಟಿ.ರವಿ ಆಗ್ರಹ