ಸೋಂಕು, ಸಾವಲ್ಲಿ ಬೆಂಗ್ಳೂರು ಮೀರಿಸಿದ ದಕ್ಷಿಣ ಕನ್ನಡ ಜಿಲ್ಲೆ

By Kannadaprabha NewsFirst Published Aug 11, 2021, 7:57 AM IST
Highlights

*  ಬೆಂಗಳೂರಲ್ಲಿ ನಿನ್ನೆ 315, ದ.ಕ.ದಲ್ಲಿ 378 ಕೇಸ್‌
*  ರಾಜ್ಯದಲ್ಲಿ 1338 ಹೊಸ ಕೇಸ್‌, 31 ಜನರ ಸಾವು
*  ಯಾದಗಿರಿ ಮತ್ತು ಗದಗದಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ 
 

ಬೆಂಗಳೂರು(ಆ.11): ಕೋವಿಡ್‌ ಹೊಸ ಪ್ರಕರಣ ಮತ್ತು ಸಾವಿನ ಪ್ರಮಾಣದಲ್ಲಿ ಬೆಂಗಳೂರು ನಗರವನ್ನು ಮೀರಿಸಿದೆ. ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ರಾಜ್ಯದಲ್ಲೇ ಅತಿ ಹೆಚ್ಚು 378 ಪ್ರಕರಣ ಮತ್ತು 8 ಸಾವು ದಾಖಲಾಗಿದೆ. ರಾಜ್ಯದಲ್ಲಿ ಒಟ್ಟು 1,338 ಮಂದಿಯಲ್ಲಿ ಸೋಂಕು ದೃಢ ಪಟ್ಟಿದ್ದು 31 ಮಂದಿ ಮರಣವನ್ನಪ್ಪಿದ್ದಾರೆ. 1947 ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 22,676ಕ್ಕೆ ಕುಸಿದಿದೆ.

ಬೆಂಗಳೂರು ನಗರದಲ್ಲಿ 315 ಹೊಸ ಪ್ರಕರಣ ದಾಖಲಾಗಿದೆ. ಯಾದಗಿರಿ ಮತ್ತು ಗದಗದಲ್ಲಿ ಹೊಸ ಪ್ರಕರಣ ಪತ್ತೆಯಾಗಿಲ್ಲ. 11 ಜಿಲ್ಲೆಯಲ್ಲಿ ಒಂದಂಕಿಯಲ್ಲಿ ಪ್ರಕರಣವಿದ್ದು ಉಳಿದ ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣ ವರದಿಯಾಗಿದೆ.
4 ಕೋಟಿ ದಾಟಿದ ಪರೀಕ್ಷೆ: ರಾಜ್ಯದಲ್ಲಿ ಮಂಗಳವಾರ 1.26 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಈವರೆಗೆ ಒಟ್ಟು 4.01 ಕೋಟಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಸದ್ಯ ದೈನಂದಿನ ಪಾಸಿಟಿವಿಟಿ ದರ ಶೇ. 1ರ ಅಸುಪಾಸಿನಲ್ಲಿದ್ದರೂ ಕೂಡ ಒಟ್ಟು ಪಾಸಿಟಿವಿಟಿ ದರ ಶೇ. 7.28ರಷ್ಟಿದೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಮಂಗಳವಾರ 93,090 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದು, ಯಾರಲ್ಲಿಯೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ. ಈವರೆಗೆ 74.36 ಲಕ್ಷ ರಾಪಿಡ್‌ ಅಂಟಿಜೆನ್‌ ಪರೀಕ್ಷೆ ನಡೆದಿದ್ದು 3.26 ಕೋಟಿ ಆರ್‌ಟಿಪಿಸಿಆರ್‌ ಪರೀಕ್ಷೆ ನಡೆದಿದೆ.

ದೇಶದಲ್ಲಿ ಕೊರೋನಾ ಇಳಿಮುಖ: 147 ದಿನಗಳ ಬಳಿಕ ಅತೀ ಕಡಿಮೆ ಕೇಸ್

56,855 ಮಂದಿ ಮೊದಲ ಡೋಸ್‌ ಮತ್ತು 36,235 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 2.59 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದು 74.76 ಲಕ್ಷ ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ. ಒಟ್ಟು 3.34 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.

ಉತ್ತರ ಕನ್ನಡದಲ್ಲಿ ನಾಲ್ಕು, ಬೆಂಗಳೂರು ನಗರದಲ್ಲಿ ಮೂರು, ಮೈಸೂರು, ಕೋಲಾರದಲ್ಲಿ ಎರಡು, ಉಡುಪಿ, ತುಮಕೂರು, ಮಂಡ್ಯ, ಕೊಪ್ಪಳ, ಕೊಡಗು, ಧಾರವಾಡ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಬ್ಬರು ಮರಣವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ 29.21 ಲಕ್ಷ ಮಂದಿಯಲ್ಲಿ ಕೋವಿಡ್‌ ಸೋಂಕು ಧೃಢ ಪಟ್ಟಿದ್ದು 28.61 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 36,848 ಮಂದಿ ಮರಣವನ್ನಪ್ಪಿದ್ದಾರೆ.
 

click me!