Latest Videos

ಮೊಬೈಲ್‌ ಪಾಸ್‌ವರ್ಡ್‌ಗೆ ಬಲವಂತ ಮಾಡದಂತೆ ಕೋರ್ಟ್‌ ಹೇಳಿದೆ: ದರ್ಶನ್‌ ವಕೀಲ

By Kannadaprabha NewsFirst Published Jun 16, 2024, 6:05 AM IST
Highlights

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೊಬೈಲ್‌ ಡೇಟಾ ರಿಟ್ರೀವ್ ಹಾಗೂ ಮೊಬೈಲ್‌ ತಪಾಸಣೆಗೆ ಪಾಸ್‌ವರ್ಡ್‌ ಕೊಡುವಂತೆ ಪೊಲೀಸರು ಆರೋಪಿಗಳನ್ನು ಬಲವಂತ ಮಾಡದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೂಚಿಸಿದೆ ಎಂದು ಆರೋಪಿ ದರ್ಶನ್‌ ಪರ ವಕೀಲ ರಘುನಾಥ ರೆಡ್ಡಿ ಹೇಳಿದರು. 
 

ಬೆಂಗಳೂರು (ಜೂ.16): ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮೊಬೈಲ್‌ ಡೇಟಾ ರಿಟ್ರೀವ್ ಹಾಗೂ ಮೊಬೈಲ್‌ ತಪಾಸಣೆಗೆ ಪಾಸ್‌ವರ್ಡ್‌ ಕೊಡುವಂತೆ ಪೊಲೀಸರು ಆರೋಪಿಗಳನ್ನು ಬಲವಂತ ಮಾಡದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ಸೂಚಿಸಿದೆ ಎಂದು ಆರೋಪಿ ದರ್ಶನ್‌ ಪರ ವಕೀಲ ರಘುನಾಥ ರೆಡ್ಡಿ ಹೇಳಿದರು. ಶನಿವಾರ 42ನೇ ಎಸಿಎಂಎಂ ನ್ಯಾಯಾಲಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿಗಳ ಮೊಬೈಲ್‌ ಡೇಟಾ ರಿಟ್ರೀವ್‌ ಹಾಗೂ ಮೊಬೈಲ್‌ ತಪಾಸಣೆಗೆ ಪಾಸ್‌ವರ್ಡ್‌ ಕೊಡುವಂತೆ ಬಲವಂತ ಮಾಡುವುದು ಹೈಕೋರ್ಟ್‌ ಆದೇಶ ಮತ್ತು ಕಾನೂನಿಗೆ ವಿರುದ್ಧವಾಗಿದೆ. 

ಈ ಸಂಬಂಧ ಸಾಕಷ್ಟು ಹೈಕೋರ್ಟ್‌ ಆದೇಶಗಳಿವೆ ಎಂದರು. ಈ ಮೊಬೈಲ್‌ ಫೋನ್‌ ಸಂಬಂಧ ಇತ್ತೀಚಿನ ಹೈಕೋರ್ಟ್‌ ಆದೇಶದ ಬಗ್ಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಗಮನಕ್ಕೆ ತಂದೆವು. ಈ ನಿಟ್ಟಿನಲ್ಲಿ ನ್ಯಾಯಾಲಯವು ಹೈಕೋರ್ಟ್‌ ಆದೇಶಾನುಸಾರ ಮುಂದಿನ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶದಲ್ಲಿ ಸೂಚಿಸಿದೆ ಎಂದರು. ಸರ್ಕಾರಿ ಅಭಿಯೋಜಕರು ಕೆಲ ನಿಯಮಗಳನ್ನು ಉಲ್ಲೇಖಿಸಿ ಆರೋಪಿಗಳ ಮೊಬೈಲ್‌ ಡೇಟಾ ರಿಟ್ರೀವ್ ಮಾಡುವ ಮತ್ತು ಮೈಸೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸುವ ಸಲುವಾಗಿ ಆರೋಪಿಗಳನ್ನು 9 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ನಾವು ತಕರಾರು ಸಲ್ಲಿಸಿ, ಹೈಕೋರ್ಟ್‌ನ ಕೆಲ ಆದೇಶಗಳನ್ನು ಉಲ್ಲೇಖಿಸಿದೆವು. ಹೈಕೋರ್ಟ್‌ ಆದೇಶದ ಮಾರ್ಗದರ್ಶನದಲ್ಲೇ ಮೊಬೈಲ್‌ ಡೇಟಾ ರಿಟ್ರೈವ್‌ ನಡೆಸಬೇಕು ಎಂದು ವಾದಿಸಿದೆವು. ಆರೋಪಿಗಳ ಪೈಕಿ ಯಾವ ಆರೋಪಿ ಯಾವ ಕಾರಣಕ್ಕೆ ಪೊಲೀಸ್‌ ವಶಕ್ಕೆ ಬೇಕು ಎಂಬುದನ್ನು ಸರ್ಕಾರಿ ಅಭಿಯೋಜಕರು ಸ್ಪಷ್ಟವಾಗಿ ಹೇಳಲಿಲ್ಲ.

ಏನೋ ಆಗಿಹೋಯ್ತು ಸಾರ್‌... ತನಿಖೆ ವೇಳೆ ಪೊಲೀಸರೆದುರು ದರ್ಶನ್‌ ಕಣ್ಣೀರು: ನಖರಾ ಬಿಡದ ಪವಿತ್ರಾಗೌಡ

ಈ ವೇಳೆ ಸರ್ಕಾರಿ ಅಭಿಯೋಜಕರು ಯಾವ ಆರೋಪಿಯನ್ನು ಯಾವ ಕಾರಣಕ್ಕೆ ಪೊಲೀಸ್‌ ವಶಕ್ಕೆ ಕೇಳುತ್ತಿದ್ದಾರೆ ಎಂದು ನಾವು ಪ್ರಶ್ನಿಸಿದೆವು. ನಮ್ಮ ವಾದ ಮತ್ತು ತಕರಾರು ಪರಿಗಣಿಸಿದ ನ್ಯಾಯಾಲಯವು ಆರೋಪಿಗಳನ್ನು 9 ದಿನಗಳ ಬದಲು 5 ದಿನಗಳ ಕಾಲ ಮಾತ್ರ ಪೊಲೀಸರ ವಶಕ್ಕೆ ನೀಡಿದೆ. ಅಂದರೆ, ಜೂ.20ರ ಸಂಜೆ 5 ಗಂಟೆಯೊಳಗೆ ಎಲ್ಲಾ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶದಲ್ಲಿ ಸೂಚಿಸಿದೆ ಎಂದು ಹೇಳಿದರು.

click me!