ಸೋಂಕು ಗುಣ: ಕರ್ನಾಟಕ ದೇಶದಲ್ಲೇ ನಂ. 2ನೇ ಸ್ಥಾನ!

By Kannadaprabha NewsFirst Published May 3, 2020, 7:46 AM IST
Highlights

ಸೋಂಕು ಗುಣವಾಗುವುದರಲ್ಲಿ ರಾಜ್ಯ ನಂ.2| ಕೊರೋನಾ ಪೀಡಿತರಲ್ಲಿ ಹೆಚ್ಚುಕಮ್ಮಿ ಅರ್ಧಕ್ಕರ್ಧ ಮಂದಿ ಗುಣಮುಖ| ದಿನಕ್ಕೆ ಸರಾಸರಿ 14 ಜನಕ್ಕೆ ಸೋಂಕು, 16 ಮಂದಿ ಡಿಸ್ಚಾಜ್‌ರ್‍

ಬೆಂಗಳೂರು(ಮೇ.03): ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 600 ದಾಟಿದ್ದರೂ ಶೇ.45.09ರಷ್ಟುಮಂದಿ ಗುಣಮುಖರಾಗಿರುವುದು ಹಾಗೂ ಸೋಂಕಿನ ವೇಗ ಕಡಿಮೆಯಾಗಿರುವುದು ರಾಜ್ಯದ ಆತಂಕವನ್ನು ಕಡಿಮೆ ಮಾಡಿದೆ.

ಸೋಂಕಿತರಲ್ಲಿ ಶೇ.45.09ರಷ್ಟುಮಂದಿ ಗುಣಮುಖರಾಗುವ ಮೂಲಕ ದೇಶದಲ್ಲೇ ತಮಿಳುನಾಡು ಬಳಿಕ ಕರ್ನಾಟಕ ಅತಿ ಹೆಚ್ಚು ಚೇತರಿಕೆ ಹೊಂದಿರುವ ರಾಜ್ಯವಾಗಿದೆ. ಇದೇ ವೇಳೆ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುವ ಅವಧಿಯೂ ಹೆಚ್ಚಾಗುತ್ತಿದ್ದು, ಪ್ರತಿ ನೂರು ಪ್ರಕರಣಗಳಿಗೆ ತೆಗೆದುಕೊಳ್ಳುತ್ತಿರುವ ಸಮಯ ಕೂಡ ಹೆಚ್ಚುತ್ತಿದೆ.

ಹಸಿರು, ಕಿತ್ತಳೆ ವಲಯಗಳಲ್ಲಿ ಸೆಲೂನ್‌ ಪುನಾರಂಭಕ್ಕೆ ಅಸ್ತು!

ಏ.26ರಿಂದ ಮೇ 2 ರವರೆಗೆ 101 ಸೋಂಕು ಪ್ರಕರಣ ದೃಢಪಟ್ಟಿದ್ದು, ಇದೇ ವೇಳೆ 113 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರ ಪ್ರಕಾರ ಪ್ರತಿ ದಿನ ಸರಾಸರಿ 14 ಮಂದಿಗೆ ಸೋಂಕು ಉಂಟಾಗುತ್ತಿದ್ದರೆ, 16 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಾರೆ. ಇದು ರಾಜ್ಯದ ಮಟ್ಟಿಗೆ ಆಶಾದಾಯಕ ಬೆಳವಣಿಗೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಟ್ಟು 601 ಮಂದಿ ಸೋಂಕಿತರಾಗಿದ್ದು, ಈ ಪೈಕಿ ಶೇ.68.39ರಷ್ಟುಮಂದಿ ಪುರುಷರು, ಶೇ.31.61 ರಷ್ಟುಮಂದಿ ಮಹಿಳೆಯರಿದ್ದಾರೆ. ಇದರಲ್ಲಿ ಶೇ.14.14 ರಷ್ಟುಹಿರಿಯ ನಾಗರಿಕರಿದ್ದಾರೆ. ಇವರಲ್ಲಿ ಒಟ್ಟು 25 ಮಂದಿ ಮೃತಪಟ್ಟಿದ್ದು, 271 ಮಂದಿ ಚೇತರಿಸಿಕೊಂಡಿದ್ದಾರೆ.

ಲಾಕ್‌ಡೌನ್‌ 3.0 ದೊಡ್ಡ ಸವಾಲು: ಆದರೆ, ಸವಾಲು ಎದುರಿಸಲು ರಾಜ್ಯ ಸರ್ಕಾರ ಸಿದ್ಧ!

ಇನ್ನು ರಾಜ್ಯವನ್ನು ತೀವ್ರವಾಗಿ ಕಾಡುತ್ತಿರುವ ನಂಜನಗೂಡು ಔಷಧ ಕಾರ್ಖಾನೆ ಸೋಂಕು ಪ್ರಕರಣದಲ್ಲಿ 76 ಮಂದಿಗೆ ಸೋಂಕು ಉಂಟಾಗಿದ್ದರೆ, 53 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೆ, ಪ್ರತಿ 100 ಸೋಂಕಿನ ಪ್ರಕರಣಗಳು ದಾಖಲಾದ ದಿನಗಳ ಅವಧಿ ಹೆಚ್ಚುತ್ತಾ ಬಂದಿದೆ. 300 ರಿಂದ 400ನೇ ಪ್ರಕರಣಗಳು ಕೇವಲ 4 ದಿನದಲ್ಲಿ ವರದಿಯಾಗಿತ್ತು. 400ರಿಂದ 500ನೇ ಪ್ರಕರಣಕ್ಕೆ 5 ದಿನ, 500ನೇ ಪ್ರಕರಣದಿಂದ 600ನೇ ಪ್ರಕರಣಕ್ಕೆ 7 ದಿನ ಸಮಯ ತೆಗೆದುಕೊಂಡಿದೆ. ಇದು ರಾಜ್ಯದ ಮಟ್ಟಿಗೆ ತಕ್ಕಮಟ್ಟಿಗೆ ಆತಂಕ ದೂರ ಮಾಡಿದೆ. ಆದರೆ, ಮೇ 4ರ ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಸಾರ್ವಜನಿಕರು ಮತ್ತಷ್ಟುಎಚ್ಚರಿಕೆಯಿಂದ ಇರಬೇಕಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸಲಹೆ ನೀಡಿದರು.

 

click me!