
ಬೆಂಗಳೂರು : ಕರ್ನಾಟಕ ಜಿಐ (ಜಿಯೋಗ್ರಾಫಿಕಲ್ ಇಂಡಿಕೇಷನ್) ಸ್ಥಾನಮಾನ ಹೊಂದಿರುವ ಕೊಲ್ಹಾಪುರಿ ಪಾದರಕ್ಷೆಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ನಕಲು ಮಾಡಿದ ಪ್ರಾಡಾ ಕಂಪನಿ ವಿರುದ್ಧ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ(ಲಿಡ್ಕರ್) 500 ಕೋಟಿ ರು.ಗಳ ಹಾನಿ ಭರ್ತಿ ಮಾಡುವಂತೆ ಮೊಕದ್ದಮೆ ದಾಖಲಿಸಿದೆ.
ಕರ್ನಾಟಕ ಲಿಡ್ಕರ್ ಹಾಗೂ ಮಹಾರಾಷ್ಟ್ರದ ಲಿಡ್ಕಾಂ ಸಂಸ್ಥೆಗಳು ಕೇಂದ್ರ ಸರ್ಕಾರದಿಂದ ಜಿಐ ಸ್ಥಾನಮಾನ ಹೊಂದಿರುವ ಕೊಲ್ಹಾಪುರಿ ಚಪ್ಪಲಿ ವಿನ್ಯಾಸವನ್ನು 2018 ಡಿಸೆಂಬರ್ 11ರಂದು ಜಂಟಿಯಾಗಿ ನೋಂದಾಯಿಸಿಕೊಂಡಿವೆ. ಆದರೆ, ಪ್ರಾಡಾ ಕಂಪನಿಯು ಕೊಲ್ಹಾಪುರಿ ಪಾದರಕ್ಷೆಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ನಕಲು ಮಾಡುವ ಮೂಲಕ ಸರಕುಗಳ ಭೌಗೋಳಿಕ ಸೂಚನೆ (ನೋಂದಣಿ ಮತ್ತು ರಕ್ಷಣೆ) ಕಾಯ್ದೆ 1999 ಸೆಕ್ಷನ್ 22ರ ಸ್ಪಷ್ಟ ಉಲ್ಲಂಘನೆ ಮಾಡಿದೆ.
ಅಲ್ಲದೆ, ಈ ಪ್ರಾಡಾ ಕಂಪನಿಯು ಕೊಲ್ಹಾಪುರಿ ಚಪ್ಪಲಿಗಳನ್ನು ‘ಲೆದರ್ ಫ್ಲಾಟ್ ಸ್ಯಾಂಡಲ್ಸ್’ ಎಂಬ ಹೆಸರಿನಲ್ಲಿ ಫ್ಯಾಷನ್ ಶೋ ಒಂದರಲ್ಲಿ ಅಂದಾಜು 1.2 ಲಕ್ಷ ರು.ಗಳಿಗೆ ಮಾರಾಟ ಮಾಡಲು ಯತ್ನಿಸಿದೆ. ಇದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದ್ದು, ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ಬೌದ್ಧಿಕ ಅಸ್ತಿತ್ವಕ್ಕೆ ಧಕ್ಕೆ ತಂದಿದೆ. ಈ ಹಿನ್ನೆಲೆಯಲ್ಲಿ ಪ್ರಾಡಾ ಕಂಪನಿ ವಿರುದ್ಧ 500 ಕೋಟಿ ರು. ಹಾನಿ ಭರ್ತಿಗೆ ಕೇಸು ದಾಖಲು ಮಾಡಲಾಗಿದೆ. ಈ ಕುರಿತು ಪ್ರಾಡಾ ಕಂಪನಿಗೆ ಕಾನೂನು ತಿಳಿವಳಿಕೆ ಪತ್ರ ಜಾರಿಗೊಳಿಸಲಾಗಿದೆ ಎಂದು ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ವಸುಂಧರಾ ಆರೋಪಿಸಿದ್ದಾರೆ.
ಹಾನಿಭರ್ತಿ ಮೊತ್ತವನ್ನು ಕೊಲ್ಹಾಪುರಿ ಪಾದರಕ್ಷೆ ತಯಾರಿಕೆಯ ನೈಜ ಕುಶಲ ಕುರ್ಮಿಗಳ ಶ್ರೇಯೋಭಿವೃದ್ಧಿಗಾಗಿ ಬಳಸಿಕೊಳ್ಳಲಾಗುವುದು. ಪ್ರಾಡಾ ಕಂಪನಿ ಮಾಡಿರುವ ವಂಚನೆಗೆ ಪ್ರತಿಯಾಗಿ ಲಿಡ್ಕರ್ ಮೂಲಕ ಕೊಲ್ಹಾಪುರಿ ಪಾದರಕ್ಷೆಗಳ ಖರೀದಿಗೆ ನಿಯಮಾನುಸಾರ ಒಪ್ಪಂದ ಮಾಡಿಕೊಂಡು ಕರ್ನಾಟಕದ ನೆಲಮೂಲದ ನೈಜ ಚರ್ಮ ಕುಶಲಕರ್ಮಿಗಳಿಗೆ ನಿರಂತರ ಉದ್ಯೋಗಾವಕಾಶ ಹಾಗೂ ಆರ್ಥಿಕ ಬಲ ಸಿಗುವಂತೆ ಮಾಡುವುದು ಲಿಡ್ಕರ್ನ ಈ ಕಾನೂನು ಹೋರಾಟದ ಮೂಲ ಉದ್ದೇಶ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ