
ಮಂಗಳೂರು (ಜ.26): ಮಂಗಳೂರು ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಆದರೆ, ರೈಲ್ವೇ ನಿಲ್ದಾಣದ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡದ ಕಾರಣ ಆರೋಪಿ ಪತ್ತೆ ಕಾರ್ಯ ವಿಳಂಬಕ್ಕೆ ಕಾರಣವಾಗಿದೆ.
ತಲೆಮರೆಸಿಕೊಂಡಿರುವ ರಾಜೀವ್ ಗೌಡ ಮಂಗಳೂರು ರೈಲ್ವೇ ನಿಲ್ದಾಣದವರೆಗೆ ಬಂದು ಅಲ್ಲಿಂದ ಪರಾರಿಯಾಗಿರುವುದು ಖಚಿತವಾಗಿದೆ. ರೈಲ್ವೇ ನಿಲ್ದಾಣದ ಮುಂಭಾಗ ಆತ ಬಳಸಿದ್ದ ಕಾರು ಪತ್ತೆಯಾಗಿದ್ದು, ಕಾರನ್ನು ಅಲ್ಲಿಯೇ ಬಿಟ್ಟು ಆತ ನಿಲ್ದಾಣದ ಒಳಗೆ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಜೀವ್ ಗೌಡ ಎಲ್ಲಿ ವಾಸವಿದ್ದ ಮತ್ತು ಯಾರ ಜೊತೆಗಿದ್ದ ಎನ್ನುವ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪೊಲೀಸರು ರಾಜೀವ್ ಗೌಡನ ಜಾಡು ಹಿಡಿದು ಬೆನ್ನಟ್ಟಿದ್ದರೂ, ಆತ ರೈಲ್ವೇ ನಿಲ್ದಾಣದ ಒಳಭಾಗಕ್ಕೆ ಹೋಗುತ್ತಿದ್ದಂತೆ ಕಣ್ಮರೆಯಾಗಿದ್ದಾನೆ. ದುರದೃಷ್ಟವಶಾತ್, ಮಂಗಳೂರು ರೈಲ್ವೇ ನಿಲ್ದಾಣದ ಒಳಗಿರುವ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದಾಗಿ ಆರೋಪಿ ನಿಲ್ದಾಣಕ್ಕೆ ಬಂದ ಸುಳಿವು ಸಿಕ್ಕಿದರೂ, ಮುಂದೆ ಎಲ್ಲಿಗೆ ಹೋದ ಎಂಬುದು ನಿಗೂಢವಾಗಿದೆ.
ಕೇರಳ ಅಥವಾ ಗೋವಾಕ್ಕೆ ಪಲಾಯನ ಶಂಕೆ?
ರೈಲ್ವೇ ನಿಲ್ದಾಣದ ಒಳಗೆ ಹೋದ ರಾಜೀವ್ ಗೌಡ ಯಾವ ರೈಲು ಹತ್ತಿದ್ದಾನೆ ಎನ್ನುವ ದೃಶ್ಯಗಳು ಸಿಸಿಟಿವಿ ಅಲಭ್ಯತೆಯಿಂದಾಗಿ ಪೊಲೀಸರಿಗೆ ಸಿಗುತ್ತಿಲ್ಲ. ಆತ ಕೇರಳ ಅಥವಾ ಗೋವಾ ಕಡೆಗೆ ತೆರಳುವ ರೈಲು ಹತ್ತಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಗಳ ಕೊರತೆಯಿಂದಾಗಿ ಆರೋಪಿಯ ಚಲನವಲನ ಪತ್ತೆ ಹಚ್ಚುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ