ಆಪರೇಷನ್ ಕಮಲಕ್ಕೆ ಒಳಗಾಗೋ ಕೈ ನಾಯಕರಿಗೆ ಹೊಸ ಆತಂಕ ಸೃಷ್ಟಿ

By Web DeskFirst Published Jan 21, 2019, 8:02 AM IST
Highlights

ಕಾಂಗ್ರೆಸ್ ನಾಯಕರ ರೆಸಾರ್ಟ್ ಪಾಲಿಟಿಕ್ಸ್ ಮುಂದುವರಿದಿದೆ. ಹತ್ತು ಹಲವು ವಿಚಾರಗಳು ಚರ್ಚೆಯಾಗದೇ ಬಾಕಿ ಉಳಿದ ಹಿನ್ನೆಲೆಯಲ್ಲಿ ಸೋಮವಾರಕ್ಕೂ ರೆಸಾರ್ಟ್ ವಾಸ್ತವ್ಯ ಮುಂದುವರಿಸಲಾಗಿದೆ. 

ಬೆಂಗಳೂರು : ಶಾಸಕರಿಬ್ಬರ ಮಾರಾಮಾರಿ ಪ್ರಕರಣದ ಹೊರತಾಗಿಯೂ ಕಾಂಗ್ರೆಸ್ ಶಾಸಕರ ರೆಸಾರ್ಟ್ ವಾಸ್ತವ್ಯ ಸೋಮವಾರವೂ ಮುಂದುವರೆಯಲಿದೆ. ಲೋಕಸಭೆ ಚುನಾವಣೆಗೆ ಜೆಡಿಎಸ್ ಜತೆಗಿನ ಮೈತ್ರಿಯ ವಿಚಾರವೂ ಸೇರಿದಂತೆ ತಮ್ಮ ಎಲ್ಲಾ ಸಮಸ್ಯೆಗಳನ್ನು ಶಾಸಕರು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಬಳಿ ಚರ್ಚಿಸಲು ಭಾನುವಾರ ಪರಿಪೂರ್ಣವಾಗಿ ಸಾಧ್ಯವಾಗದ ಹಿನ್ನೆಲೆಯಲ್ಲಿ ಶಾಸಕರ ರೆಸಾರ್ಟ್ ವಾಸ್ತವ್ಯವನ್ನು ಒಂದು ದಿನ ಮುಂದೂಡಲು ತೀರ್ಮಾ ನಿಸಲಾಗಿದೆ. 

ಭಾನುವಾರ ಬೆಳಗ್ಗೆ 11 ಕ್ಕೆ ಆರಂಭವಾಗಬೇಕಿದ್ದ ವೇಣುಗೋಪಾಲ್ ಹಾಗೂ ಶಾಸಕರ ನೇರಾನೇರ ಸಭೆಯು ವೇಣುಗೋಪಾಲ್ ತಡವಾಗಿ ಆಗಮಿಸಿದ್ದರಿಂದ ಸಂಜೆ 6 ರ ನಂತರ ಆರಂಭವಾಯಿತು. ಚರ್ಚೆಗೂ ಮುನ್ನ ಎಲ್ಲಾ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ವೇಣುಗೋಪಾಲ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೊದಲಾದವರು ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲಕ್ಕೆ ಬಲಿಯಾದರೆ ಭವಿಷ್ಯದ ಪರಿಣಾಮ ಏನಾಗುತ್ತದೆ ಎಂಬ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು ಎಂದು ಮೂಲಗಳು ತಿಳಿಸಿವೆ. 

ಈ ಹಿಂದೆ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ ಶಾಸಕರು ಅನಂತರ ಚುನಾವಣೆ ಯಲ್ಲಿ ಗೆಲ್ಲಲು ಸಾಧ್ಯವೇ ಅಗಲಿಲ್ಲ. ಗೆದ್ದ ಕೆಲವರನ್ನು ಬಿಜೆಪಿ ವ್ಯವಸ್ಥೆಯು ಮೂಲೆಗುಂಪು ಮಾಡಿದೆ. ಬಿಜೆಪಿಯ ವ್ಯವಸ್ಥೆಯಲ್ಲಿ ಆರ್‌ಎಸ್‌ಎಸ್ ಮೂಲದಿಂದ ಬಂದವರಷ್ಟೇ ಬೆಳೆ ಯಲು ಸಾಧ್ಯ. ಹೊರಗಿನಿಂದ ಬಂದವರು ಯಾವ ಕಾರಣಕ್ಕೂ ಭವಿಷ್ಯದಲ್ಲಿ ನಾಯಕರಾಗಿ ಬೆಳೆಯಲು ಸಾಧ್ಯವಿಲ್ಲ. ಈಗ ಅಗತ್ಯವಿದೆ ಎಂದು ಹಣದ ಆಮಿಷವೊಡ್ಡಿ ಸಚಿವ ಸ್ಥಾನ ನೀಡುವ ಭರವಸೆ ನೀಡಬಹುದು. ಆದರೆ, ಒಂದು ಬಾರಿ ಬಿಜೆಪಿ ತನ್ನ ಉದ್ದೇಶ ಸಾಧಿಸಿದ ಬಳಿಕ ಆರ್‌ಎಸ್‌ಎಸ್ ಅಲ್ಲದ ಮೂಲದಿಂದ ಬಂದವರನ್ನು ನಾಮಾವಶೇಷ ಮಾಡುತ್ತದೆ. ಈ ಸತ್ಯ ಅರ್ಥ ಮಾಡಿಕೊಳ್ಳಿ. ಇಷ್ಟಕ್ಕೂ ದೇಶದಲ್ಲಿ ರಾಜಕೀಯ ಬೆಳವಣಿಗೆಗಳು ಹೇಗೆ ನಡೆಯುತ್ತಿವೆ ಎಂಬುದನ್ನು ಗಮ ನಿಸಿ. ಇಡೀ ರಾಷ್ಟ್ರದಲ್ಲಿ ಬಿಜೆಪಿ ತನ್ನ ಅಸ್ತಿತ್ವ ಕಳೆ ದುಕೊಳ್ಳುತ್ತಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತನ್ನ ಹಳೆಯ ಸಾಧನೆ ತೋರಲು ಸಾಧ್ಯವಿಲ್ಲ. ಇಲ್ಲಿಯವರೆಗೂ ಕಾಂಗ್ರೆಸ್‌ನಲ್ಲಿ ಇದ್ದು, ಈಗ ಮುಳುಗುತ್ತಿರುವ ದೋಣಿಯೇರುವುದು ಬುದ್ಧಿವಂತಿಕೆಯಲ್ಲ. ಹಣ ಬರುತ್ತದೆ, ಹೋಗುತ್ತದೆ. ಆದರೆ, ರಾಜಕೀಯ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವುದು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಮನದಟ್ಟು ಮಾಡಿ ಕೊಡಲು ಯತ್ನಿಸಿದರು ಎಂದು ಮೂಲಗಳು ಹೇಳಿವೆ. ಅನಂತರ ಶಾಸಕರೊಂದಿಗೆ ವೇಣುಗೋಪಾಲ್ ನೇರಾನೇರ ಚರ್ಚೆ ಆರಂಭಿಸಿದ್ದಾರೆ. ಈ ಚರ್ಚೆ ತಡರಾತ್ರಿಯವರೆಗೂ ನಡೆಯಿತು. ಎಲ್ಲಾ ಶಾಸಕರ ಅಭಿಪ್ರಾಯ ಕೇಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸೋಮವಾರವೂ ರೆಸಾರ್ಟ್ ವಾಸ್ತವ್ಯ ಮುಂದುವರೆಸಲು ತೀರ್ಮಾನಿಸಲಾಯಿತು ಎಂದು ಮೂಲಗಳು ಹೇಳಿವೆ.

click me!