4 ವಿದ್ಯುತ್‌ ಕಂಪನಿಗಳಿಗೆ 2,500 ಕೋಟಿ ರುಪಾಯಿ ಸಾಲ

By Kannadaprabha NewsFirst Published Jul 10, 2020, 8:59 AM IST
Highlights

ರಾಜ್ಯದ ನಾಲ್ಕು ವಿದ್ಯುತ್‌ ಕಂಪನಿಗಳು ಬೇರೆ ಬೇರೆ ಕಡೆಯಿಂದ ವಿದ್ಯುತ್‌ ಖರೀದಿಸಿದ್ದರಿಂದ ನಷ್ಟ ಅನುಭವಿಸಿ ಆರ್ಥಿಕ ಸಮಸ್ಯೆ ಎದುರಿಸುವಂತಾಯಿತು. ಅದನ್ನು ಸರಿದೂಗಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಜು.10): ಸಂಕಷ್ಟದಲ್ಲಿರುವ ಬೆಸ್ಕಾಂ, ಚೆಸ್ಕಾಂ ಸೇರಿದಂತೆ ರಾಜ್ಯದ ನಾಲ್ಕು ವಿದ್ಯುತ್‌ ಕಂಪನಿಗಳಿಗೆ 2,500 ಕೋಟಿ ರು. ಬಡ್ಡಿ ರಹಿತ ಸಾಲ ನೀಡಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ. ವಿಧಾನಸೌಧದಲ್ಲಿ ಗುರುವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ರಾಜ್ಯದ ನಾಲ್ಕು ವಿದ್ಯುತ್‌ ಕಂಪನಿಗಳು ಬೇರೆ ಬೇರೆ ಕಡೆಯಿಂದ ವಿದ್ಯುತ್‌ ಖರೀದಿಸಿದ್ದರಿಂದ ನಷ್ಟ ಅನುಭವಿಸಿ ಆರ್ಥಿಕ ಸಮಸ್ಯೆ ಎದುರಿಸುವಂತಾಯಿತು. ಅದನ್ನು ಸರಿದೂಗಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಶಾಲೆ ದತ್ತು: ದೊರೆಸ್ವಾಮಿ ಕರೆಗೆ ಶಾಸಕರ ಸ್ಪಂದನೆ

ಬೆಂಗಳೂರು ವಿದ್ಯುತ್‌ ಕಂಪನಿಗೆ 500 ಕೋಟಿ ರು., ಹುಬಳ್ಳಿ ವಿದ್ಯುತ್‌ ಕಂಪನಿಗೆ 400 ಕೋಟಿ ರು. ಗುಲ್ಬರ್ಗ ವಿದ್ಯುತ್‌ ಕಂಪನಿಗೆ 1,000 ಕೋಟಿ ರು. ಮತ್ತು ಚಾಮುಂಡೇಶ್ವರಿ ವಿದ್ಯುತ್‌ ಸರಬರಾಜು ನಿಗಮ 600 ಕೋಟಿ ರು. ಮಂಜೂರು ಮಾಡಿದೆ. ಬೇರೆ ಬೇರೆ ಭಾಗಗಳಿಂದ ವಿದ್ಯುತ್‌ ಖರೀದಿಸಿರುವುದರ ಮೊತ್ತವನ್ನು ಪಾವತಿಸದಿದ್ದರೆ ಎನ್‌ಪಿಎ ಮಾಡುವ ಸಾಧ್ಯತೆ ಇದೆ. ಹೀಗಾಗಿ ವಿದ್ಯುತ್‌ ಕಂಪನಿಗಳಿಗೆ 2500 ಕೋಟಿ ರು. ಆರ್ಥಿಕ ನೆರವು ನೀಡಲು ತೀರ್ಮಾನಿಸಲಾಗಿದೆ ಎಂದರು.

ಕವಿಕಾ, ಎಂಇಇ ಇಂಧನ ಇಲಾಖೆ ವ್ಯಾಪ್ತಿಗೆ:

ಮೈಸೂರು ಎಲೆಕ್ಟ್ರಿಕ್‌ ಇಂಡಸ್ಟ್ರಿಸ್‌ (ಎಂಇಐ) ಮತ್ತು ಕರ್ನಾಟಕ ವಿದ್ಯುತ್‌ ಕಾರ್ಖಾನೆ (ಕವಿಕಾ) ಎಲೆಕ್ಟ್ರಿಕಲ್‌ ಕಂಪನಿಗಳನ್ನು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ ಇಂಧನ ಇಲಾಖೆ ವ್ಯಾಪ್ತಿಗೆ ಆಡಳಿತ ವಹಿಸಲು ನಿರ್ಧರಿಸಲಾಗಿದೆ. ಈ ಎರಡು ಕಂಪನಿಗಳ ಉತ್ಪಾದನಾ ವಸ್ತುಗಳನ್ನು ಬೆಸ್ಕಾಂ, ಕೆಪಿಟಿಸಿಎಲ್‌ ಖರೀದಿ ಮಾಡುತ್ತಿದ್ದವು. ಹೀಗಾಗಿ ಇಂಧನ ಇಲಾಖೆ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

ಇ-ಆಡಳಿತ ಮತ್ತು ಇ-ಸಂಗ್ರಹಣೆ ಯೋಜನೆಯನ್ನು ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಇ-ಸರ್ವಿಸ್ ಕಂಪನಿಗೆ 184 ಕೋಟಿ ರು. ಮೊತ್ತದಲ್ಲಿ ನೀಡಲಾಗಿದೆ. ಏಳು ವರ್ಷಗಳ ಕಾಲ ಸೇವೆಯನ್ನು ಮುಂದುವರಿಸಲಾಗುವುದು. ಈಗಾಗಲೇ ಅದೇ ಕಂಪನಿಯು ಸೇವೆಯನ್ನು ಒದಗಿಸುತ್ತಿರುವ ಹಿನ್ನೆಲೆಯಲ್ಲಿ ನೀಡಲಾಗಿದೆ ಎಂದು ಹೇಳಿದರು.
 

click me!