
ಬೆಂಗಳೂರು (ಮೇ.29): ಪರಿಶಿಷ್ಟ ವರ್ಗದ ಮೀಸಲಾತಿ ಹೆಚ್ಚಳಕ್ಕಾಗಿ ಹೋರಾಟ ನಡೆಸುತ್ತಿರುವ ವಾಲ್ಮೀಕಿ ಸಮಾಜದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿಯಾಗಿ, ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ವಿವರಿಸಿದರು. ಶನಿವಾರ ನಗರದ ಫ್ರೀಡಂ ಪಾರ್ಕ್ನಲ್ಲಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳು ವಾಸ್ತವ ಸ್ಥಿತಿಯ ಮಾಹಿತಿ ನೀಡಿದರು. ಕೇಂದ್ರ ಸರ್ಕಾರದ ಮಾದರಿಯಲ್ಲಿ ಪರಿಶಿಷ್ಟಪಂಗಡದವರಿಗೆ ಶೇ.7.5ರಷ್ಟುಮೀಸಲಾತಿ ನೀಡಲು ಇರುವ ತೊಡಕುಗಳು ಮತ್ತು ಇವುಗಳನ್ನು ಬಗೆಹರಿಸಲು ಸರ್ಕಾರ ಮಾಡುತ್ತಿರುವ ಪ್ರಯತ್ನಗಳನ್ನು ವಿವರಿಸಿದರು.
ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸುಪ್ರೀಂಕೋರ್ಚ್ನ ಆದೇಶದಂತೆ ಶೇ.50ಕ್ಕಿಂತ ಹೆಚ್ಚಿನ ಮೀಸಲಾತಿ ನೀಡಲು ಸಾಧ್ಯವಿಲ್ಲ. ಇದಕ್ಕೆ ಸಂಬಂಧಿಸಿದಂತೆ ಇಂದ್ರಾ ಸಹಾನಿ ಪ್ರಕರಣ ಪ್ರಮುಖವಾದುದಾಗಿದ್ದು, ಇದರ ಸಾಧಕ-ಬಾಧಕಗಳ ಅಧ್ಯಯನ ನಡೆಸಿ ಈಗಾಗಲೇ ಪ್ರತಿಪಕ್ಷಗಳ ಮುಖಂಡರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಕೇಂದ್ರ ಸರ್ಕಾರದಂತೆ ಶೇ.7.5ರಷ್ಟುಮೀಸಲಾತಿ ನಿಗದಿ ಪಡಿಸಲು ಇರುವ ಸಾಧ್ಯತೆ ಕುರಿತು ಅಧ್ಯಯನ ನಡೆಸಲು ರಚಿಸಿರುವ ಸಮಿತಿಯು ವರದಿ ಸಲ್ಲಿಸಿದ ನಂತರ ಸರ್ಕಾರ ಕಾನೂನಾತ್ಮಕವಾಗಿ ಎಲ್ಲವನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
Davos 2022: ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಸಿಎಂ ಬೊಮ್ಮಾಯಿ ಆಹ್ವಾನ
ಮೀಸಲಾತಿಗಾಗಿ ಕಳೆದ ಕೆಲವು ವರ್ಷಗಳಿಂದ ಹೋರಾಟ ನಡೆಯುತ್ತಾ ಬಂದಿದೆ. ಈ ನಿಟ್ಟಿನಲ್ಲಿ ರಚಿಸಲಾದ ನ್ಯಾ.ನಾಗಮೋಹನದಾಸ್ ಸಮಿತಿಯೂ ವರದಿ ಸಲ್ಲಿಸಿದೆ. ಇದಲ್ಲದೇ, ಪರಿಶಿಷ್ಟಪಂಗಡಗಳ ಸ್ಥಿತಿ-ಗತಿ, ಶಿಕ್ಷಣ, ಉದ್ಯೋಗ, ಸ್ವಾತಂತ್ರ್ಯದ ಸಮಯದಲ್ಲಿ ಮತ್ತು ಈಗಿನ ಜನಸಂಖ್ಯೆ ಸೇರಿದಂತೆ ಎಲ್ಲಾ ಅಂಶಗಳ ಮಾಹಿತಿ ಮತ್ತು ಅರಿವು ನನಗಿದೆ. ಪರಿಶಿಷ್ಟಪಂಗಡಗಳ ಸಮುದಾಯಕ್ಕೆ ಒಳ್ಳೆಯದು ಮಾಡುವ ಸದುದ್ದೇಶ ನಮಗೂ ಇದೆ. ಈ ಸಮುದಾಯಗಳ ಉತ್ತಮ ಭವಿಷ್ಯ ರೂಪಿಸಲು ಎಲ್ಲಾ ರೀತಿಯ ಸಹಾಯ ಮಾಡಲಾಗುವುದು ಎಂದರು. ಪ್ರಸನ್ನಾನಂದಪುರಿ ಸ್ವಾಮೀಜಿಯವರು ಸಾತ್ವಿಕ ಹೋರಾಟದ ಮೂಲಕ ಸದುದ್ದೇಶದ ಸಾಧನೆಗೆ ಮುಂದಾಗಿರುವುದು ಮಾದರಿಯಾಗಿದೆ. ಗುರುಗಳೊಂದಿಗೆ ಮೀಸಲಾತಿ ಕುರಿತು ಎಲ್ಲಾ ಅಂಶಗಳ ಕುರಿತು ಚರ್ಚೆ ನಡೆಸಿರುವೆ. ಗುರುಗಳ ಆಶೀರ್ವಾದದಿಂದ ಸಮಾಜಕ್ಕೆ ಒಳ್ಳೆಯದು ಮಾಡುವ ಸದಿಚ್ಛೆ ನಮ್ಮದು ಎಂದು ಹೇಳಿದರು.
ಮತಾಂತರ ನಿಷೇಧ ಕಾಯ್ದೆಯಿಂದ ಅಭಿವೃದ್ಧಿಗೆ ಅಡ್ಡಿಯಲ್ಲ: ಸಿಎಂ ಬೊಮ್ಮಾಯಿ
ಮಂತ್ರಿ ಸ್ಥಾನಕ್ಕಾಗಿ 10 ಕೋಟಿ ಪಡೆದ ಸ್ವಾಮೀಜಿ: ಮಂತ್ರಿ ಸ್ಥಾನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ ಸ್ವಾಮೀಜಿಯೊಬ್ಬರು ಆಕಾಂಕ್ಷಿಯಿಂದ 10 ಕೋಟಿ ಪಡೆದುಕೊಂಡು ಸುಮ್ಮನೆ ಕುಳಿತುಕೊಂಡಿದ್ದಾರೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು. ಬಳೂಟಗಿ ಗ್ರಾಮದಲ್ಲಿ ಪಂಚಮಸಾಲಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಕೂಡಲಸಂಗಮದ ಶ್ರೀಗಳಿಗೆ ನೀವು ಹಣ ತೆಗೆದುಕೊಂಡಿದ್ದೇ ಆದರೆ ನಿಮ್ಮ ಜತೆಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದರು. ಅಲ್ಲದೇ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಪಿಎಸ್ಐ ಹುದ್ದೆಯ ನೇಮಕಾತಿಯಲ್ಲಿ ಆರೋಪಿಗಳೆಲ್ಲರೂ ಸಿಕ್ಕಿಬಿದ್ದಿದ್ದಾರೆ. ಇನ್ನು ಒಂದು ತಿಂಗಳ ಒಳಗಾಗಿ ಪ್ರಕರಣವನ್ನು ಸಂಪೂರ್ಣವಾಗಿ ಮುಚ್ಚಿ ಹಾಕುತ್ತಾರೆ ಎಂದೂ ಯತ್ನಾಳ್ ಆರೋಪಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ