ಪ್ರಾಧಿಕಾರಗಳಿಗೆ ಬಿಸಿ ಮುಟ್ಟಿಸಿದ ಬೊಮ್ಮಾಯಿ, 45 ಲಕ್ಷದಲ್ಲಿ ಕಿತ್ತೂರು ಅರಮನೆ-ಕೋಟೆ ಅಭಿವೃದ್ಧಿ

By Kannadaprabha NewsFirst Published Jul 8, 2022, 1:16 PM IST
Highlights
  •  ಕಿತ್ತೂರು ಅರಮನೆ, ಕೋಟೆ, ಜೀರ್ಣೋದ್ಧಾರ
  • ಸರ್ವಜ್ಞನ ಮನೆ ಸಮಾಧಿ ಅಭಿವೃದ್ಧಿಗೆ ಸೂಚನೆ
  • ಕೂಡಲ ಸಂಗಮವನ್ನು ಜನಾಕರ್ಷಣೆಯ ತಾಣವಾಗಿಸಲು ಸೂಚನೆ

 ಬೆಂಗಳೂರು (ಜು.8): 45.56 ಕೋಟಿ ರು. ವೆಚ್ಚದಲ್ಲಿ ಕಿತ್ತೂರು ಅರಮನೆ, ಕೋಟೆ ಸಂರಕ್ಷಣೆ, ಜೀರ್ಣೋದ್ಧಾರ ಮತ್ತು ವಸ್ತು ಸಂಗ್ರಹಾಲಯ ನವೀಕರಣ, ಕವಿ ಸರ್ವಜ್ಞನ ಹುಟ್ಟೂರಲ್ಲಿ ಮನೆ ಮತ್ತು ಸಮಾಧಿ ಸ್ಥಳ ಅಭಿವೃದ್ಧಿಗೆ ಅನುಮೋದನೆ, ಸೈನಿಕ ಶಾಲೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಒಪ್ಪಿಗೆ, ಕೂಡಲ ಸಂಗಮವನ್ನು ಜನಾಕರ್ಷಣೆಯ ತಾಣವಾಗಿಸಲು ಸೂಚನೆ ಹಾಗೂ ಕನಕದಾಸರ ಅರಮನೆಯಲ್ಲಿ ಧ್ವನಿ-ಬೆಳಕು ಪ್ರದರ್ಶನ ವ್ಯವಸ್ಥೆಗೆ ಕ್ರಮ. ಗುರುವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ವಿವಿಧ ಪ್ರಾಧಿಕಾರಗಳ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು ಇವು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ನಾಲ್ಕನೇ ಸಭೆ, ಸರ್ವಜ್ಞ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಲಾಯಿತು.

ಕಿತ್ತೂರಿನ ರಾಣಿ ಚೆನ್ನಮ್ಮನ ಅರಮನೆ ಮತ್ತು ಕೋಟೆಯನ್ನು 18.05 ಕೋಟಿ ರು. ವೆಚ್ಚದಲ್ಲಿ ಸಂರಕ್ಷಣೆ ಮತ್ತು ಪುನರ್‌ ಸ್ಥಾಪನೆಯನ್ನು ಹಾಗೂ ವಸ್ತು ಸಂಗ್ರಹಾಲಯದ ನವೀಕರಣ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು 27.51 ಕೋಟಿ ರು. ವೆಚ್ಚದಲ್ಲಿ ಕೈಗೊಳ್ಳಲು ಅನುಮೋದಿಸಿದರು.

ರಾಜ್ಯದಲ್ಲಿ ಮಳೆಯಾರ್ಭಟ: ಮಳೆ, ಪ್ರವಾಹ ಪೀಡಿತ ಜಿಲ್ಲೆಯ ಡೀಸಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ

ಕರ್ವಿ ಸರ್ವಜ್ಞ ಹುಟ್ಟೂರು ಅಭಿವೃದ್ಧಿಗೆ ಒಪ್ಪಿಗೆ: ಕವಿ ಸರ್ವಜ್ಞನ ಹುಟ್ಟೂರಾದ ಹಾವೇರಿ ಜಿಲ್ಲೆಯ ಅಬಲೂರಿನಲ್ಲಿ ಅವರ ತಂದೆ-ತಾಯಿಯ ಹೆಸರಲ್ಲಿ ಕಟ್ಟಡ ನಿರ್ಮಾಣ ಮತ್ತು ಮಾಸೂರಿನ ಸಮಾಧಿ ಸ್ಥಳ ಅಭಿವೃದ್ಧಿಗೆ ಅನುಮೋದನೆ ನೀಡಲಾಯಿತು. ಹಿರೇಕೆರೂರು ಪಟ್ಟಣದಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಯಿತು. ಅಬಲೂರಿನಲ್ಲಿ ಸರ್ವಜ್ಞ ನೆಲೆಸಿದ್ದ ಮನೆಯ ಸ್ಥಳ ಮತ್ತು ಮಾಸೂರಿನ ಸಮಾಧಿ ಸ್ಥಳ ಅಭಿವೃದ್ಧಿಗೆ ಅಗತ್ಯವಿರುವ ಖಾಸಗಿ ಜಮೀನು ಖರೀದಿಸಲು ಇದೇ ವೇಳೆ ಒಪ್ಪಿಗೆ ನೀಡಲಾಯಿತು. ಸರ್ವಜ್ಞ ಪ್ರಾಧಿಕಾರದಿಂದ 25 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಧ್ವನಿ-ಬೆಳಕು ಪ್ರದರ್ಶನ ವ್ಯವಸ್ಥೆ: ಸಂತ ಕನಕದಾಸರ ಜನ್ಮಸ್ಥಳ ಬಾಡದಲ್ಲಿ ನಿರ್ಮಿಸಲಾಗಿರುವ ಕನಕದಾಸರ ಅರಮನೆಯು ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಇದನ್ನು ಇನ್ನಷ್ಟುಉತ್ತಮ ಪಡಿಸುವ ನಿಟ್ಟಿನಲ್ಲಿ ಧ್ವನಿ-ಬೆಳಕು ಪ್ರದರ್ಶನ ಪ್ರಾರಂಭಿಸಬೇಕು. ಇದಕ್ಕೆ ಅತ್ಯುತ್ತಮ ಸಂಸ್ಥೆಗಳ ಮೂಲಕ, ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಬೇಕು. ಅರಮನೆಯಲ್ಲಿ ಕನಕದಾಸರ ಜೀವನ ಕುರಿತು ಅನಿಮೇಷನ್‌ ಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ತಂತ್ರಜ್ಞಾನವನ್ನು ಉನ್ನತೀಕರಿಸಿ, 3ಡಿ ಚಿತ್ರ ನಿರ್ಮಾಣ ಮಾಡಲು ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವನ್ನು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ವ್ಯಾಪ್ತಿಗೊಳಪಡಿಸುವ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ವರದಿ ಸಲ್ಲಿಸಬೇಕು ಎಂದು ಬೊಮ್ಮಾಯಿ ತಿಳಿಸಿದರು.

Karnataka Assembly Election 2023; ಬೊಮ್ಮಾಯಿಗೆ ಬ್ರಾಂಡ್ ಸೆಟ್ ಮಾಡಲು ರಾಜ್ಯ ಬಿಜೆಪಿ ತಂತ್ರ!

ಕೂಡಲಸಂಗಮ ಜನಾಕರ್ಷಣೆಯ ತಾಣವಾಗಬೇಕು: ಕೂಡಲ ಸಂಗಮವು ಜನಾಕರ್ಷಣೆಯ ತಾಣವಾಗಬೇಕು ಮತ್ತು ಬಸವ ತತ್ವದ ಅರಿವು ಮೂಡಿಸಬೇಕು. ಇದಕ್ಕೆ ಪೂರಕವಾಗಿ ಕೂಡಲಸಂಗಮವನ್ನು ಅಭಿವೃದ್ಧಿಪಡಿಸಬೇಕು. ಸಿವಿಲ್‌ ಕಾಮಗಾರಿಗಳ ಜತೆಗೆ ಕೂಡಲ ಸಂಗಮದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮ್ಯೂಸಿಯಂನಲ್ಲಿ ಬಸವಣ್ಣನವರ ಜೀವನ ಚರಿತ್ರೆ, ಅವರ ವಿಚಾರಧಾರೆ ಮತ್ತು ಅವರ ಸಮಕಾಲೀನ ಶರಣರ ಕುರಿತ ಮಾಹಿತಿಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಳವಡಿಸಬೇಕು ಎಂದು ಸೂಚಿಸಿದರು.

ಸೈನಿಕ ಶಾಲೆಗೆ ಮೂಲಸೌಕರ್ಯ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಬೆಳಗಾವಿ ಜಿಲ್ಲೆಯ ಸೈನಿಕ ಶಾಲೆಯ ಕಾಮಗಾರಿಯು ಆಗಸ್ಟ್‌ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ಈ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸಬೇಕು. ಕೇಂದ್ರ ರಕ್ಷಣಾ ಸಚಿವಾಲಯ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ 2022-23ನೇ ಸಾಲಿಗೆ 6ನೇ ತರಗತಿಯಿಂದ ಶಾಲೆಯನ್ನು ಪ್ರಾರಂಭಿಸಲು ಅನುಮತಿ ದೊರೆತಿದೆ. ಪ್ರಸ್ತುತ 82 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಒದಗಿಸಲಾಗಿದೆ. ಸೆಪ್ಟೆಂಬರ್‌ನಲ್ಲಿ ಶಾಲೆ ಪ್ರಾರಂಭವಾಗಲಿದೆ ಎಂದರು.

click me!