ಮಂಗ್ಳೂರು ಗಲಭೆ: ಎರಡು ರೀತಿಯ ತನಿಖೆಗೆ ಸಿಎಂ ಘೋಷಣೆ

By Kannadaprabha NewsFirst Published Dec 24, 2019, 7:38 AM IST
Highlights

ಮಂಗಳೂರಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆಯನ್ನು ನ್ಯಾಯಾಂಗ (ಮ್ಯಾಜಿಸ್ಪ್ರೇಟ್‌) ಮತ್ತು ಸಿಐಡಿಗೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ. 

ಶಿವಮೊಗ್ಗ [ಡಿ.24]:  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಮಂಗಳೂರಲ್ಲಿ ನಡೆದ ಹಿಂಸಾಚಾರ ಪ್ರಕರಣದ ತನಿಖೆಯನ್ನು ನ್ಯಾಯಾಂಗ (ಮ್ಯಾಜಿಸ್ಪ್ರೇಟ್‌) ಮತ್ತು ಸಿಐಡಿಗೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಘೋಷಿಸಿದ್ದಾರೆ. ಈ ಮೂಲಕ ಪ್ರಕರಣದ ತನಿಖೆಯನ್ನು ಎರಡು ರೀತಿಯಲ್ಲಿ ನಡೆಸಲು ಸರ್ಕಾರ ನಿರ್ಧರಿಸಿದಂತಾಗಿದೆ.

ಇಲ್ಲಿನ ಹೆಲಿಪ್ಯಾಡ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಐಡಿ ಮತ್ತು ನ್ಯಾಯಾಂಗ ತನಿಖೆ ನಡೆಸಬೇಕು ಎಂಬ ತೀರ್ಮಾನವನ್ನು ನಾನು ಮತ್ತು ಗೃಹ ಸಚಿವರು ಸೇರಿಕೊಂಡು ತೀರ್ಮಾನ ಮಾಡಿದ್ದೇವೆ. ಈ ಮೂಲಕ ಘಟನೆಗೆ ಸಂಬಂಧಿಸಿ ಸಮಗ್ರ ತನಿಖೆ ನಡೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದರು.

ಕೇರಳದಿಂದ ಬಂದವರ ಕೃತ್ಯ: ಮಂಗಳೂರು ಹಿಂಸಾಚಾರದ ಹಿಂದೆ ಕೇರಳದವರ ಕೈವಾಡ ಇದೆ ಎಂಬುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಪುನರುಚ್ಚರಿಸಿದ್ದಾರೆ. ಕೇರಳದಿಂದ ಬಂದವರು ಪ್ರತಿಭಟನೆ ನೆಪದಲ್ಲಿ ಹಿಂಸಾಚಾರ ನಡೆಸಿ ಗಲಭೆಗೆ ಕಾರಣರಾಗಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡದೆ ಹಿಂಸಾಚಾರ ನಡೆಸಲಾಗಿದೆ. ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಲು ಹೋದವರು, ಅಲ್ಲಿದ್ದ ಶಸ್ತ್ರಾಸ್ತ್ರ ಹೊತ್ತೊಯ್ಯಲು ಯತ್ನಿಸಿದವರು ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದಾರೆನ್ನುವ ಖಚಿತ ಮಾಹಿತಿ ಇದೆ ಎಂದು ಯಡಿಯೂರಪ್ಪ ಇದೇ ವೇಳೆ ತಿಳಿಸಿದರು.

ಶಾಂತಿಯುತ ಪ್ರತಿಭಟನೆ ನಡೆಸಲು ಯಾವುದೇ ಅಭ್ಯಂತರವಿಲ್ಲ. ಅನ್ಯಾಯವಾಗಿದ್ದರೆ ಅದನ್ನು ಹೇಳಿಕೊಳ್ಳಬೇಕು. ಆದರೆ ಶಾಂತಿ ಕದಡಲು ಪ್ರಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಇದೇ ವೇಳೆ ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

ಮಂಗಳೂರು ಗಲಭೆ: ವಿಡಿಯೋ ಇದ್ರೆ ಕಳಿಸಿ ಎಂದ ಕಮಿಷನರ್ ಹರ್ಷ...

ವಿಪಕ್ಷಗಳಿಗೆ ಟೀಕೆ: ಪೌರತ್ವ ಕಾಯ್ದೆ ಕುರಿತು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರಲ್ಲಿ ಗೊಂದಲ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಪ್ರತಿಭಟನೆ ನಡೆಸುತ್ತಿರುವವರು ಯಾರೂ ಕಾಯ್ದೆಯಿಂದ ನಮಗೆ ಅನ್ಯಾಯವಾಗಿದೆ ಎಂದು ಒಂದೇ ಒಂದು ಶಬ್ದವನ್ನಾಡಿಲ್ಲ. ಎಲ್ಲಾ ರೀತಿಯಲ್ಲಿ ಹಿನ್ನಡೆ, ಸೋಲು ಅನುಭವಿಸಿದವರು ಸಮಾಜದಲ್ಲಿ ಈ ರೀತಿ ಗೊಂದಲ ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಪರೋಕ್ಷವಾಗಿ ವಿಪಕ್ಷಗಳನ್ನು ಗುರಿಯಾಗಿಸಿ ಟೀಕಿಸಿದರು.

ಏತನ್ಮಧ್ಯೆ ಮಂಗಳೂರು ಘಟನೆಗೆ ಸಂಬಂಧಿಸಿ ಗೃಹ ಸಚಿವರು ರಾಜೀನಾಮೆ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಯಡಿಯೂರಪ್ಪ, ತಲೆಕೆಟ್ಟವರಷ್ಟೆಹಾಗೆ ಹೇಳ್ತಾರೆ ಎಂದು ತಿರುಗೇಟು ನೀಡಿದರು.

ಹೈಕೋರ್ಟ್‌ ಹಾಲಿ ಜಡ್ಜ್‌ರಿಂದ ತನಿಖೆ ನಡೆಸಿ: ಸಿದ್ದು

ಮಂಗಳೂರು: ಮಂಗಳೂರಿನಲ್ಲಿ ನಡೆದದ್ದು ಉದ್ದೇಶಪೂರ್ವಕ ಗೋಲಿಬಾರ್‌. ಪೊಲೀಸರು ಹಸೀ ಸುಳ್ಳುಗಳು, ಕಟ್ಟುಕತೆಗಳನ್ನು ಕಟ್ಟಿದ್ದಾರೆ. ಸತ್ಯ ಹೊರಬರಬೇಕಾದರೆ ಹಾಲಿ ಹೈಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲೇ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ. ವಿವರ ಪುಟ 7

click me!