
ಕಲಬುರಗಿ (ಅ.21): ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರವಾಗಿರುವ ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ನವೆಂಬರ್ 2 ರಂದು ಹಮ್ಮಿಕೊಳ್ಳಲು ಉದ್ದೇಶಿಸಿರುವ ಪಥಸಂಚಲನಕ್ಕೆ ಸಂಬಂಧಿಸಿದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಹೈಕೋರ್ಟ್ನ ನಿರ್ದೇಶನದ ನಂತರ ಆರ್ಎಸ್ಎಸ್ ಮುಖಂಡರು ಶುಕ್ರವಾರ (ಅ.21) ಜಿಲ್ಲಾಧಿಕಾರಿಗಳಿಗೆ (ಡಿಸಿ) ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. ಈ ಹಿಂದಿನ ವಿವಾದಗಳು, ಭೀಮ್ ಆರ್ಮಿಯ ವಿರೋಧ ಮತ್ತು ನ್ಯಾಯಾಲಯದ ಆದೇಶಗಳ ಹಿನ್ನೆಲೆಯಲ್ಲಿ, ಈ ಬಾರಿಯಾದರೂ ಜಿಲ್ಲಾಡಳಿತ ಅನುಮತಿ ನೀಡುತ್ತದೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಕಳೆದ ವಾರ ಚಿತ್ತಾಪುರ ತಹಸೀಲ್ದಾರ್ ಅವರು ಕಾನೂನು ಮತ್ತು ಸುವ್ಯವಸ್ಥೆಯ ಕಾರಣ ನೀಡಿ ಆರ್ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆರ್ಎಸ್ಎಸ್ ಮುಖಂಡರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 24ಕ್ಕೆ ಮುಂದೂಡಿದೆ. ಅಲ್ಲದೆ, ನ್ಯಾಯಾಲಯವು, 'ನವೆಂಬರ್ 2 ರಂದು ಪಥಸಂಚಲನ ನಡೆಸಲು ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಮತ್ತು 'ಅರ್ಜಿದಾರರ ಮನವಿಯನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಿ' ಎಂದು ಜಿಲ್ಲಾಡಳಿತಕ್ಕೆ ಸ್ಪಷ್ಟ ನಿರ್ದೇಶನ ನೀಡಿದೆ.
ಈ ನಿರ್ದೇಶನದ ಬೆನ್ನಲ್ಲೇ, ಆರ್ಎಸ್ಎಸ್ ಮುಖಂಡ ಕೃಷ್ಣ ಜೋಶಿ ಅವರು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರನ್ನು ಮೌಖಿಕವಾಗಿ ಭೇಟಿ ಮಾಡಿ, ಪಥಸಂಚಲನ ನಡೆಸಲು ಅನುಮತಿ ಕೋರಿ ಅಧಿಕೃತ ಮನವಿ ಪತ್ರವನ್ನು ಸಲ್ಲಿಸಿದರು. ಆರ್ಎಸ್ಎಸ್ ಮುಖಂಡರು, ಈ ಹಿಂದೆಯೂ ತಾವು ನಿರ್ಧರಿಸಿದ್ದ ಸ್ಥಳದಿಂದಲೇ ಹಾಗೂ ಇದೇ ನವೆಂಬರ್ 2 ರಂದೇ ಮೆರವಣಿಗೆ ನಡೆಸಲು ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದ್ದಾರೆ.
ಭೀಮ್ ಆರ್ಮಿ ಅಧ್ಯಕ್ಷ ಎಸ್.ಎಸ್. ತವಡೆ ಅವರು ಆರ್ಎಸ್ಎಸ್ ಸಂಘಟನೆಯ ನೋಂದಣಿ ಪ್ರಶ್ನಿಸಿ, ತಮ್ಮ ಸಂಘಟನೆಗೂ ಅದೇ ದಿನ ಅವಕಾಶ ನೀಡದಿದ್ದರೆ ತಾವೂ ಪ್ರತಿರೋಧ ನಡೆಸುವುದಾಗಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಈ ರಾಜಕೀಯ ಮತ್ತು ಸಾಂಸ್ಕೃತಿಕ ಸಂಘಟನೆಗಳ ನಡುವಿನ ತಿಕ್ಕಾಟವು ಚಿತ್ತಾಪುರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸಿದೆ.
ಹೈಕೋರ್ಟ್ ವಿಚಾರಣೆ ಅಕ್ಟೋಬರ್ 24ಕ್ಕೆ ನಿಗದಿಯಾಗಿರುವ ಈ ಸಂದರ್ಭದಲ್ಲಿ, ಜಿಲ್ಲಾಧಿಕಾರಿಗಳು ಕೈಗೊಳ್ಳುವ ನಿರ್ಧಾರ ಮಹತ್ವದ ತಿರುವು ನೀಡಲಿದೆ. ನ್ಯಾಯಾಲಯವು ಅನುಮತಿ ನೀಡುವ ಕುರಿತು ವರದಿ ಸಲ್ಲಿಸಲು ಸೂಚಿಸಿರುವುದರಿಂದ, ಡಿಸಿ ಫೌಜಿಯಾ ತರನ್ನುಮ್ ಅವರು ಕಾನೂನು ತಜ್ಞರ ಸಲಹೆ ಪಡೆದು, ಭೀಮ್ ಆರ್ಮಿ ವಿರೋಧ ಮತ್ತು ಹೈಕೋರ್ಟ್ ನಿರ್ದೇಶನಗಳ ಸಮತೋಲನ ಕಾಯ್ದುಕೊಂಡು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನವೆಂಬರ್ 2 ರಂದು ಚಿತ್ತಾಪುರದಲ್ಲಿ ಶಾಂತಿ ಕಾಪಾಡುವುದು ಜಿಲ್ಲಾಡಳಿತದ ಮುಂದಿನ ದೊಡ್ಡ ಸವಾಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ