
ವರದಿ: ಕಿರಣ್.ಎಲ್.ತೊಡರನಾಳ್, ಚಿತ್ರದುರ್ಗ
ಚಿತ್ರದುರ್ಗ (ಜ.07): ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮ ಮಂದಿರ ಲೋಕಕಲ್ಯಾಣಕ್ಕೆ ದಿನಗಣನೆ ಶುರುವಾಗಿದೆ. ಆ ಕಾರ್ಯದಲ್ಲಿ ಕನ್ನಡಿಗರ ಹವಾ ಜೋರಾಗಿದೆ. ರಾಮಮಂದಿರದಲ್ಲಿ ಕಂಗೊಳಿಸುವ ಶ್ರೀರಾಮ, ವಿಜ್ಞೇಶ್ವರನ ಮೂರ್ತಿ ನಿರ್ಮಾಣ ಕಾರ್ಯದಲ್ಲಿ ನಾಲ್ವರು ಕನ್ನಡಿಗರು ಭಾಗಿಯಾಗಿದ್ದಾರೆ. ಅವರಲ್ಲಿ ಚಿತ್ರದುರ್ಗದ ಕೀರ್ತಿ ನಂಜುಂಡಸ್ವಾಮಿ ಸಹ ಒಬ್ಬರಾಗಿರೋದು, ಕನ್ನಡಿಗರೊಂದು ಹೆಮ್ಮೆ. ಅದು ಅವರ ಕುಲ ಕಸುಬಲ್ಲ. ಪೂರ್ವಜರಿಂದ ಕಲಿತ ವಿದ್ಯೆಯೂ ಅಲ್ಲ. ಆದ್ರೆ ಸಾಧಿಸುವ ಹಂಬಲದಿಂದ ಕಲಿತ ವಿದ್ಯೆಯು, ಅನಿರೀಕ್ಷಿತ ಅವಕಾಶವನ್ನು ಚಿತ್ರದುರ್ಗದ ಕೀರ್ತಿ ನಂಜುಂಡಸ್ವಾಮಿಗೆ ಒದಗಿ ಬಂದಿದೆ.
ಹೌದು, ಕೀರ್ತಿ ನಂಜುಂಡ ಸ್ವಾಮಿಯವರು, ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಶ್ರೀರಾಮಮಂದಿರದಲ್ಲಿ ಕೆತ್ತಿರುವ ಮೂರ್ತಿಗಳ ನಿರ್ಮಾಣಕಾರ್ಯದಲ್ಲಿ ಭಾಗಿಯಾದ ಕನ್ನಡಿಗರಲ್ಲಿ ಒಬ್ಬರಾಗಿದ್ದಾರೆ. ಕರ್ನಾಟಕ ರಾಜ್ಯದಿಂದ ಒಟ್ಟು ನಾಲ್ವರು ಶಿಲ್ಪಿಗಳು ಈ ಕಾರ್ಯದಲ್ಲಿ ಭಾಗಿಯಾಗಿದ್ದು, ಅವರಲ್ಲಿ ಮೂಲತಃ ಚಿತ್ರದುರ್ಗದ ಕಾಮನಬಾವಿ ಬಡವಾಣೆ ನಿವಾಸಿಗಳಾದ ನಂಜುಂಡಸ್ವಾಮಿ ಹಾಗು ಶಾರದಮ್ಮ ದಂಪತಿಯ ಪುತ್ರನಾದ ಕೀರ್ತಿ ನಂಜುಂಡಸ್ವಾಮಿ ವಿಜ್ಞೇಶ್ವರನ ಮೂರ್ತಿ ಕೆತ್ತನೆ ಮಾಡಿದ ಶಿಲ್ಪಿಯಾಗಿಯಾಗಿದ್ದಾರೆ. ಚಿತ್ರದುರ್ಗದ ಕೋಟೆ ಮುಂಭಾಗದಲ್ಲಿ ಸನಾತನ ಕಲಾವೈಭವ ಎನ್ನುವ ಹೆಸರಿನಲ್ಲಿ ಶಿಲ್ಪಗಳ ಕೆತ್ತನೆ ಕಾರ್ಯ ಮಾಡಿಕೊಂಡಿರುವ ಕೀರ್ತಿ ನಂಜುಂಡಸ್ವಾಮಿ 32 ವರ್ಷದ ಯುವಕರಾಗಿದ್ದಾರೆ.
ಕಳೆದ 12 ವರ್ಷಗಳಿಂದ ಶಿಲ್ಪಗಳ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಕಳದ ಕೆನರಾ ಶಿಲ್ಪಕಲಾ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದು, ಇವರ ಮನೆತನ ಹಿಂದಿನಿಂದಲೂ ವಿಶ್ವ ಹಿಂದುಪರಿಷತ್ ನಲ್ಲಿ ಸೇವೆ ಸಲ್ಲಿಸುತ್ತ ಬಂದಿರುವ ಹೆಗ್ಗಳಿಕೆ ಇದೆ. ಹೀಗಾಗಿ ಇವರ ಪುತ್ರನ ಸಾಧನೆ ಬಗ್ಗೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ನಂಜುಂಡಸ್ವಾಮಿಯವರು ನನ್ನ ಮಗ ಅಯೋಧ್ಯೆಯಲ್ಲಿ ವಿನಾಯಕ ಮೂರ್ತಿ ಕೆತ್ತನೆ ಮಾಡಿರೋದು ಸಂತಸ ತಂದಿದೆ. ಈ ಅವಕಾಶ ನಮ್ ಮಗನಿಗೆ ಸಿಕ್ಕಿದ್ದು, ನಮ್ಮ ಪುಣ್ಯ ಎನಿಸಿದೆ. ನಮ್ಮ ಕುಲಕಸುಬು ಬಿಟ್ಟು ಈ ತರಭೇತಿ ಪಡೆದಿದ್ದು ಸಾರ್ಥಕ ಎನಿಸಿದೆ.ನಮ್ಮಕನ್ನಡಿಗರು ಕೆತ್ತನೆ ಮಾಡಿರುವ ಎಲ್ಲಾ ಶಿಲೆಗಳು ಅದ್ಬುತವಾಗಿ ಮೂಡಿಬಂದಿವೆ ಅಂತ ಅಲ್ಲಿನ ಉಸ್ತುವಾರಿಗಳು ನಮ್ಮ ಮಗನನ್ನು ಅಭಿನಂದಿಸಿರೋದು ಬಾರಿ ಸಂತಸ ತಂದಿದೆ ಎಂದಿದ್ದಾರೆ.
ಯುವನಿಧಿಗೆ ಜ.12ಕ್ಕೆ ಶಿವಮೊಗ್ಗದಲ್ಲಿ ಚಾಲನೆ: ಸಚಿವ ಪ್ರಿಯಾಂಕ್ ಖರ್ಗೆ
ಇನ್ನು ಕೀರ್ತಿ ನಂಜುಂಡಸ್ವಾಮಿಯವರ ಕಾರ್ಯಕ್ಕೆ ಕೋಟೆನಾಡಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಹೀಗಾಗಿ ಅವರ ದೊಡ್ಡಪ್ಪ ಕರಸೇವಕ ಟೈಗರ್ ತಿಪ್ಪೇಸ್ವಾಮಿ ಸಹ ಕೀರ್ತಿ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಡಿನಲ್ಲಿದ್ದ ರಾಮನನ್ನು ನಾಡಿಗೆ ತರಲು ನಾವು ಆಗ ಕರಸೇವೆ ಮಾಡಿದ್ವಿ. ಈಗ ನಮ್ಮ ಮಗ ರಾಮಮಂದಿರದಲ್ಲಿ ಶಿಲ್ಪಿಯಾಗಿ ನಿಸ್ವಾರ್ಥಸೇವೆ ಸಲ್ಲಿಸಿರೋದು ಬಾರಿ ಸಂತಸ ತಂದಿದೆ ಎಂದಿದ್ದಾರೆ. ಒಟ್ಟಾರೆ ಕೋಟೆನಾಡಿನ ಕೀರ್ತಿ ನಂಜುಂಡಸ್ವಾಮಿ ಅಯೋದ್ಯೆಯಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಭಕ್ತಿಪೂರ್ವಕ ವಿಜ್ಞೇಶ್ವರನ ಮೂರ್ತಿಯನ್ನು ಕೆತ್ತನೆ ಮಾಡಿ ದೇಶದ ಗಮನ ಸೆಳೆದಿದ್ದಾರೆ. ಇದು ಇಡೀ ಕನ್ನಡಿಗರಿಗೊಂದು ಹೆಮ್ಮೆಯ ಸಂಗತಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ