ತೆರಿಗೆ ವಂಚಕರಿಗೆ ಅಧಿಕಾರಿಗಳೇ ಸಾಥ್‌, ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ

Published : Oct 31, 2019, 09:29 AM ISTUpdated : Oct 31, 2019, 09:31 AM IST
ತೆರಿಗೆ ವಂಚಕರಿಗೆ ಅಧಿಕಾರಿಗಳೇ ಸಾಥ್‌, ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ

ಸಾರಾಂಶ

ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಕಟ್ಟಡ ವಿಸ್ತೀರ್ಣದ ತಪ್ಪು ಲೆಕ್ಕ ನೀಡಿ ವಂಚಿಸಿದ್ದ ಪ್ರತಿಷ್ಠಿತ ಹೋಟೆಲ್‌, ಕಂಪೆನಿಗಳು ಸೇರಿದಂತೆ ನಗರದ ಎಂಟು ಕಟ್ಟಡಗಳ ಮಾಲೀಕರಿಗೆ ತೆರಿಗೆ ವಿನಾಯಿತಿ ನೀಡಿ ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಅವರು ಬಿಬಿಎಂಪಿಗೆ ಸುಮಾರು 64 ಕೋಟಿ ರು.ಗೂ ಹೆಚ್ಚು ನಷ್ಟಉಂಟು ಮಾಡಿದ್ದಾರೆ ಎಂದು ಪಾಲಿಕೆ ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು(ಅ.31): ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಕಟ್ಟಡ ವಿಸ್ತೀರ್ಣದ ತಪ್ಪು ಲೆಕ್ಕ ನೀಡಿ ವಂಚಿಸಿದ್ದ ಪ್ರತಿಷ್ಠಿತ ಹೋಟೆಲ್‌, ಕಂಪೆನಿಗಳು ಸೇರಿದಂತೆ ನಗರದ ಎಂಟು ಕಟ್ಟಡಗಳ ಮಾಲೀಕರಿಗೆ ತೆರಿಗೆ ವಿನಾಯಿತಿ ನೀಡಿ ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಅವರು ಬಿಬಿಎಂಪಿಗೆ ಸುಮಾರು 64 ಕೋಟಿ ರು.ಗೂ ಹೆಚ್ಚು ನಷ್ಟಉಂಟು ಮಾಡಿದ್ದಾರೆ ಎಂದು ಪಾಲಿಕೆ ಬಿಜೆಪಿ ನಾಯಕ ಪದ್ಮನಾಭ ರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.

ಬಿಬಿಎಂಪಿ ಕೌನ್ಸಿಲ್‌ ಗಮನಕ್ಕೂ ತಾರದೆ ಕಾನೂನುಬಾಹಿರವಾಗಿ ಈ ರೀತಿ ತೆರಿಗೆ ಮನ್ನಾ ಮಾಡಿ, ಪಾಲಿಕೆಗೆ ನಷ್ಟಉಂಟು ಮಾಡಿರುವ ರವೀಂದ್ರ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಿ, ತನಿಖೆಗೊಳಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ತೆರಿಗೆ ವಂಚಕರ ಪತ್ತೆಗೆ ಬಿಬಿಎಂಪಿ ನಡೆಸಿದ ಟೋಟಲ್‌ ಸ್ಟೇಷನ್‌ ಸರ್ವೇಯಲ್ಲಿ ಎಂ.ಜಿ.ರಸ್ತೆಯ ಓಬೆರಾಯ್‌ ಹೋಟೆಲ್‌, ರೆಸಿಡೆನ್ಸಿ ರಸ್ತೆಯ ಗೇಟ್‌ವೇ ಹೋಟೆಲ್‌, ಎಲೇಕ್ಸೈರ್‌ ಎಂಟರ್‌ಪ್ರೈಸಸ್‌ ಮತ್ತು ಹೋಟೆಲ್‌ ಪ್ರೈವೇಟ್‌ ಲಿಮಿಟೆಡ್‌, ಕುಮಾರಕೃಪಾ ರಸ್ತೆಯ ಅಶೋಕ ಹೋಟೆಲ್‌, ಹಳೆ ವಿಮಾನ ನಿಲ್ದಾಣ ರಸ್ತೆಯ ರಾಯಲ್‌ ಆರ್ಕಿಡ್‌ ಹೋಟೆಲ್‌,ಪ್ಯಾಲೇಸ್‌ ರಸ್ತೆಯ ಶ್ರೀರಾಮ್‌ ಲೀಲಾ ಡೆವಲಪ​ರ್‍ಸ್, ಎ.ಎಸ್‌.ಕೆ.ಬ್ರದ​ರ್‍ಸ್ ಲಿಮಿಟೆಡ್‌, ದೊಮ್ಮಲೂರಿನ ಸಸ್‌ಕೆನ್‌ ಟೆಕ್ನಾಲಜೀಸ್‌ ಕಂಪೆನಿಗಳು ತಮ್ಮ ಕಟ್ಟಡದ ನೈಜ ವಿಸ್ತೀರ್ಣವನ್ನು ಮುಚ್ಚಿಟ್ಟು ತೆರಿಗೆ ವಂಚಿಸಿರುವುದು ಪತ್ತೆಯಾಗಿತ್ತು ಎಂದು ಹೇಳಿದರು.

ಬಳಿಕ ಈ 8 ಕಟ್ಟಡಗಳಿಗೆ 2008ರಿಂದ ಪೂರ್ವಾನ್ವಯವಾಗುವಂತೆ ವಂಚಿಸಿರುವ ತೆರಿಗೆ ಮೊತ್ತ, ಅದರ ಬಡ್ಡಿ ಮತ್ತು ದಂಡ ಸೇರಿ ಒಟ್ಟು 83.58 ಕೋಟಿ ರು. ಪಾವತಿಸುವಂತೆ ಬಿಬಿಎಂಪಿಯಿಂದ ಡಿಮ್ಯಾಂಡ್‌ ನೋಟಿಸ್‌ ನೀಡಲಾಗಿತ್ತು. ಆದರೆ, ಇದನ್ನು ಪ್ರಶ್ನಿಸಿ ಕಟ್ಟಡ ಮಾಲೀಕರು ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣಗಳ ವಿಚಾರಣೆ ನಡೆಸಿದ ರವೀಂದ್ರ ಯಾರ ಗಮನಕ್ಕೂ ತಾರದೆ ಆ ಆಸ್ತಿ ಮಾಲೀಕರಿಗೆ 63.30 ಕೋಟಿ ರು.ನಷ್ಟುತೆರಿಗೆ ಮನ್ನಾ ಮಾಡಿ ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ 83.58 ಕೋಟಿ ರು. ಬದಲಿಗೆ ಕೇವಲ 20.27 ಕೋಟಿ ರು. ತೆರಿಗೆ ವಿಧಿಸಿ, ಪಾಲಿಕೆ ಬೊಕ್ಕಸಕ್ಕೆ 63 ಕೋಟಿ ರು.ಗಳಿಗೂ ಹೆಚ್ಚು ನಷ್ಟಉಂಟು ಮಾಡಿದ್ದಾರೆ ಎಂದು ಆಪಾದಿಸಿದರು.

ವಿಶೇಷವೆಂದರೆ ತಪ್ಪು ಲೆಕ್ಕ ಕೊಟ್ಟಿದ್ದಕ್ಕೆ ಅಶೋಕ ಹೋಟೆಲ್‌ ಪಾವತಿಸಬೇಕಿದ್ದ 9.94 ಕೋಟಿ ರು.ಗಳನ್ನೂ ರವೀಂದ್ರ ಮನ್ನಾ ಮಾಡಿದ್ದಾರೆ. ಕೆಲ ಹೋಟೆಲ್‌, ಕಂಪೆನಿಗಳಿಗೆ ಭಾಗಶಃ ತೆರಿಗೆ ವಿನಾಯಿತಿ ನೀಡಲಾಗಿದೆ. ಪೂರ್ವ ವಲಯವೊಂದರಲ್ಲೇ 10-15 ಕಟ್ಟಡಗಳಿಗೆ ತೆರಿಗೆ ಮನ್ನಾ ಮಾಡಲಾಗಿದೆ. ಅದೇ ರೀತಿ ಮಹದೇವಪುರ ಮತ್ತು ಇತರೆ ವಲಯಗಳಲ್ಲೂ ಈ ರೀತಿ ಕಾನೂನು ಬಾಹಿರವಾಗಿ ವಿನಾಯಿತಿ ನೀಡಿ ತೆರಿಗೆ ಮನ್ನಾ ಮಾಡಿರುವ ಸಾಧ್ಯತೆಗಳಿವೆ. ಹಾಗಾಗಿ ಎಲ್ಲಾ ಪ್ರಕರಣಗಳನ್ನು ಎಸಿಬಿ ತನಿಖೆಗೆ ವಹಿಸಲು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದ್ದು, ರವೀಂದ್ರ ಅವರನ್ನು ತಕ್ಷಣ ಸೇವೆಯಿಂದ ಅಮಾನತುಗೊಳಿಸಿ, ತನಿಖೆಗೊಳಪಡಿಸಬೇಕು ಎಂದು ಒತ್ತಾಯಿಸಿದರು.

ಯಾವ್ಯಾವ ಕಂಪನಿಗಳಿಗೆ ಎಷ್ಟುವಿನಾಯಿತಿ-ಪಾಲಿಕೆಗಾದ ನಷ್ಟವೆಷ್ಟು?

ಹೋಟೆಲ್‌/ಕಂಪೆನಿ  ಪಾವತಿಸಬೇಕಿದ್ದ ತೆರಿಗೆ  ವಿನಾಯಿತಿ ಮೊತ್ತ  ನಷ್ಟ

ಸಸ್‌ಕೆನ್‌ ಟೆಕ್ನಾಲಜೀಸ್‌ ಲಿಮಿಟೆಡ್‌ : 22.72 ಕೋಟಿ 58.97 ಕೋಟಿ 16.82 ಕೋಟಿ

ಅಶೋಕ ಹೋಟೆಲ್‌ : 9.94 ಕೋಟಿ 9.94 ಕೋಟಿ 9.94 ಕೋಟಿ

ಎಎಸ್‌ಕೆ ಬ್ರದ​ರ್‍ಸ ಲಿಮಿಟೆಡ್‌ : 8.57 ಕೋಟಿ 18.08 ಲಕ್ಷ 8.39 ಕೋಟಿ

ರಾಯಲ್‌ ಆರ್ಕಿಡ್‌ ಹೋಟೆಲ್‌ : 7.06 ಕೋಟಿ 49.32 ಲಕ್ಷ 6.57 ಕೋಟಿ

ದಿ ಓಬೇರಾಯ್‌ : 6.14 ಕೋಟಿ 1.09 ಕೋಟಿ 5.04 ಕೋಟಿ

ಶ್ರೀರಾಮ್‌ ಲೀಲಾ ಡೆವಲಪರ್ಸ್‌: 2.52 ಕೋಟಿ 14.72 ಕೋಟಿ 2.37 ಕೋಟಿ

ಗೇಟ್‌ವೇ ಹೋಟೆಲ್‌ : 3.65 ಕೋಟಿ 69.59 ಕೋಟಿ 2.96 ಕೋಟಿ

ಎಲೆಕ್ಸೈರ್‌ ಎಂಟರ್‌ಪ್ರೈಸಸ್‌ ಮತ್ತು ಹೋಟೆಲ್‌ : 22.95 ಕೋಟಿ 11.76 ಕೋಟಿ 11.18 ಕೋಟಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Karnataka News Live: Underrated Movies - ಸೌಂಡ್‌ ಮಾಡಿಲ್ಲ ಅನ್ಕೋಬೇಡಿ; ಕಂಟೆಂಟ್‌ನಲ್ಲಿ ಕನ್ನಡದ ಚಿನ್ನದಂಥ ಸಿನಿಮಾಗಳಿವು!
ಹೆದ್ದಾರಿ ಸುರಕ್ಷತೆಗೆ ಭಾರೀ ಕ್ರಮ: 100 ವಾಹನಗಳಲ್ಲಿ ಪೊಲೀಸ್ ಗಸ್ತು, ಏನಿದು ಹೊಸ ಯೋಜನೆ!