
ಬೆಂಗಳೂರು(ಸೆ.14): '''ಬಿಜೆಪಿ ಟಿಕೆಟ್ ಡೀಲ್'''' ಸಂಬಂಧ ಹಿಂದೂ ಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಹಾಗೂ ಉದ್ಯಮಿ ಗೋವಿಂದಬಾಬು ಪೂಜಾರಿ ನಡುವಿನ ಆಡಿಯೋ ಸಹ ಬಹಿರಂಗವಾಗಿದ್ದು, ಆರೋಪಿಗಳು ಸೃಷ್ಟಿಸಿದ್ದ "ಆರ್ಎಸ್ಎಸ್ ಪ್ರಚಾರಕ" ವಿಶ್ವನಾಥ್ ಜೀ ಪಾತ್ರದ ಸಾವಿನ ಬಗ್ಗೆ ಕರುಣಾಜನಕವಾಗಿ ಚೈತ್ರಾ ಮಾತನಾಡಿರುವುದು ಬಯಲಾಗಿದೆ.
2023ರ ಮಾರ್ಚ್ 8 ರಂದು ಪೂಜಾರಿಗೆ ಅವರಿಗೆ ಕರೆ ಮಾಡಿದ್ದ ಚೈತ್ರಾ, "ಅನಾರೋಗ್ಯದಿಂದ ಕಾಶ್ಮೀರದಲ್ಲಿ ಪ್ರಚಾರಕ್ ವಿಶ್ವನಾಥ್ ಜೀ ಮೃತಪಟ್ಟಿದ್ದಾರೆ. ಆದರೆ ಪ್ರಚಾರಕ ಜೀವನ ಶೈಲಿ ಗೌಪ್ಯವಾಗಿರುತ್ತದೆ. ಅವರು ಮೃತಪಟ್ಟರೂ ಪ್ರಚಾರವಾಗದಂತೆ ಬದುಕುತ್ತಾರೆ. ಪ್ರಧಾನ ಮಂತ್ರಿ ಮೋದಿ ಅವರ ತಾಯಿ ಅಂತ್ಯಕ್ರಿಯೆ ಸಹ ಎಷ್ಟು ಸೀಮಿತ ಜನರ ಪಾಲ್ಗೊಳ್ಳುವಿಕೆಯಲ್ಲಿ ಮುಕ್ತಾಯವಾಯಿತು. ಮೋದಿರವರ ತಾಯಿ ಎಂಬ ಕಾರಣಕ್ಕೆ ಅಷ್ಟು ದೊಡ್ಡ ಸುದ್ದಿಯಾಯಿತು. ಇಲ್ಲದೆ ಹೋದರೆ ಸಾವು ಸಹ ಹೊರಗೆ ಬರುವುದಿಲ್ಲ" ಎಂದು ಚೈತ್ರಾ ಹೇಳಿಕೊಂಡಿದ್ದಾಳೆ.
ಆರ್ಎಸ್ಎಸ್- ಬಿಜೆಪಿ ನಾಯಕರ ಹೆಸರಲ್ಲಿ ಹಲವರಿಗೆ "ಟೋಪಿ" ಹಾಕಿದ್ದ ಚೈತ್ರಾ ಕುಂದಾಪುರ?
ವಿಶ್ವನಾಥ್ ಜೀ ಸಾವಿನಿಂದ ತುಂಬಾ ನೊಂದಿರುವುದಾಗಿ ಗಗನ್ ಹೇಳಿಕೊಂಡಿದ್ದಾನೆ. "ಒಂದು ತಿಂಗಳ ಅವಧಿಯಲ್ಲಿ ನಾನು ತಾಯಿ ಕಳೆದುಕೊಂಡೆ, ಈಗ ತಂದೆಗಿಂತ ಹೆಚ್ಚಾಗಿದ್ದ ವಿಶ್ವನಾಥ್ ಜೀ ಅವರನ್ನು ಕಳೆದುಕೊಂಡಿದ್ದೇನೆ. ನನ್ನ ಜೀವನದಲ್ಲಿ ಏನಾಗುತ್ತದೆ ಎಂಬುದು ಗೊತ್ತಾಗುತ್ತಿಲ್ಲ" ಎಂದು ಗಗನ್ ಹೇಳಿಕೊಂಡು ಕಣ್ಣೀರಿಟ್ಟಿದ್ದಾನೆ. "ಕಾಶ್ಮೀರಕ್ಕೆ ಗಗನ್ ಹೋಗುತ್ತಾನೆ" ಎಂದು ಚೈತ್ರಾ ಪ್ರಸ್ತಾಪಿಸಿದ್ದಾಳೆ. "20-30 ವರ್ಷಗಳು ಪ್ರಚಾರಕರಾಗಿ ಕೆಲಸ ಮಾಡಿದ್ದ ವಿಶ್ವನಾಥ್ ಅವರ ಅಂತಿಮ ದರ್ಶನ ಪಡೆಯಲು ಯತ್ನಿಸಿದ್ದೇನೆ. ಸ್ವಾಮೀಜಿ (ಹಾಲಶ್ರೀ) ಅವರೊಂದಿಗೆ ಸಹ ಮಾತುಕತೆ ನಡೆಸಿದ್ದೇನೆ" ಎಂದು ಆಕೆ ಉಲ್ಲೇಖಿಸಿದ್ದಾಳೆ.
ಡೀಲ್ ಮಾತುಕತೆ ರೆಕಾರ್ಡ್ ಮಾಡಿದ್ದ ಪೂಜಾರಿ
ತನ್ನ ಮೊಬೈಲ್ನಲ್ಲಿ ''''ಬಿಜೆಪಿ ಟಿಕೆಟ್ ಡೀಲ್ ಮಾತುಕತೆ'''' ಸಂಭಾಷಣೆಯನ್ನು ಪೂಜಾರಿ ರೆಕಾರ್ಡ್ ಮಾಡಿಕೊಂಡಿದ್ದರು. ಇವುಗಳನ್ನು ತಮ್ಮ ದೂರಿನ ಜತೆ ಪೊಲೀಸರಿಗೆ ಪೂಜಾರಿ ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ವಂಚನೆ ಬಗ್ಗೆ ದೂರು ಕೊಡಲು ಬಂದಾಗಲೇ ಪೂಜಾರಿ ಅವರಿಗೆ ಇದೊಂದು ರಾಜಕೀಯವಾಗಿ ಭಾರಿ ಸದ್ದು ಮಾಡುವ ಪ್ರಕರಣವಾಗುತ್ತದೆ. ಹಾಗಾಗಿ ಸೂಕ್ತ ಪುರಾವೆ ಇಲ್ಲದೆ ಸುಮ್ಮನೆ ದೂರು ನೀಡಿದರೆ ನಿಮಗೆ ತೊಂದರೆಯಾಗಲಿದೆ ಎಂದು ಪೂಜಾರಿ ಅವರಿಗೆ ಅಧಿಕಾರಿಗಳು ಸಲಹೆ ನೀಡಿದ್ದರು. ಆಗ ತನ್ನ ಬಳಿ ಚೈತ್ರಾ ಕುಂದಾಪುರ ಹಾಗೂ ಗಗನ್ ಸೇರಿದಂತೆ ಇತರೆ ಆರೋಪಿಗಳು ನಡೆಸಿರುವ ಮಾತುಕತೆಯ ಆಡಿಯೋಗಳಿವೆ ಎಂದು ಪೂಜಾರಿ ಹೇಳಿದ್ದರು. ಬಳಿಕ ಹಿರಿಯ ಅಧಿಕಾರಿಗಳಿಗೆ ಆಡಿಯೋವನ್ನು ಪೂಜಾರಿ ಕೇಳಿಸಿದ್ದರು ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ