ಪತ್ರಕರ್ತರಿಗೆ ಸರ್ಕಾರದಿಂದಲೇ ಸರ್ಟಿಫಿಕೆಟ್‌ ಕೋರ್ಸ್‌: ಸಚಿವ ಅಶ್ವತ್ಥ್‌

By Govindaraj SFirst Published Nov 14, 2022, 9:16 AM IST
Highlights

ಪತ್ರಕರ್ತರ ಕೌಶಲ್ಯ ವೃದ್ಧಿಗೆ ಪೂರಕವಾಗಿ ಪ್ರಮಾಣ ಪತ್ರ ಕೋರ್ಸ್‌ ಪ್ರಾರಂಭಿಸಲು ಸರ್ಕಾರ ಸಿದ್ಧವಿದೆ. ಈ ಬಗ್ಗೆ ಮಾಧ್ಯಮ ಅಕಾಡೆಮಿಯಿಂದ ಅಧಿಕೃತ ಮನವಿ ಬಂದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ. 

ಬೆಂಗಳೂರು (ನ.14): ಪತ್ರಕರ್ತರ ಕೌಶಲ್ಯ ವೃದ್ಧಿಗೆ ಪೂರಕವಾಗಿ ಪ್ರಮಾಣ ಪತ್ರ ಕೋರ್ಸ್‌ ಪ್ರಾರಂಭಿಸಲು ಸರ್ಕಾರ ಸಿದ್ಧವಿದೆ. ಈ ಬಗ್ಗೆ ಮಾಧ್ಯಮ ಅಕಾಡೆಮಿಯಿಂದ ಅಧಿಕೃತ ಮನವಿ ಬಂದರೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದ್ದಾರೆ. ದೂರದರ್ಶನ ಕೇಂದ್ರದಲ್ಲಿ ದೂರದರ್ಶನ ಸಂಸ್ಥಾಪನಾ ದಿನಾಚರಣೆ ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿಯ ನಲವತ್ತರ ಸಂಭ್ರಮಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ‘ಮಾಧ್ಯಮ ಮೈಲುಗಲ್ಲು ನಲವತ್ತರ ಹೊಸ್ತಿಲು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದಲ್ಲಿ ಅತ್ಯಂತ ವೇಗವಾಗಿ ಬದಲಾವಣೆ ಆಗುತ್ತಿದೆ. ಈ ಬದಲಾವಣೆಯಲ್ಲಿ ಒಳ್ಳೆಯದು, ಕೆಟ್ಟದು ಎರಡೂ ಇರುತ್ತದೆ. ನಾವು ಒಳ್ಳೆಯ ವಿಚಾರ ಹೆಚ್ಚಿಸಿಕೊಂಡರೆ ಕೆಟ್ಟದು ತನ್ನಿಂದ ತಾನೇ ಕಡಿಮೆ ಆಗುತ್ತದೆ. ಜನರು ಸರ್ಕಾರವನ್ನು ಹೇಗೆ ತೆಗಳುತ್ತಾರೆಯೋ ಅದೇ ರೀತಿ ದೂರದರ್ಶನವನ್ನೂ ಟೀಕಿಸುತ್ತಾರೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಿದ ಅನುಭವ ದೂರದರ್ಶನಕ್ಕಿದೆ. ಈಗಿನ ಕಾಲಕ್ಕೆ ಅನುಗುಣವಾಗಿ ದೂರದರ್ಶನದ ಮರು ಚಿಮ್ಮುವಿಕೆ ಅಗತ್ಯವಿದೆ ಎಂದು ಹೇಳಿದರು. 

ಪುಳಕ ಹುಟ್ಟಿಸಿದ ಪ್ರಗತಿ ಪ್ರತಿಮೆಯ ಯಾತ್ರೆ: ಸಚಿವ ಅಶ್ವತ್ಥ್‌ನಾರಾಯಣ

ಚಿತ್ರ ನಟಿ ಪ್ರಿಯಾಂಕ ಉಪೇಂದ್ರ ಮಾತನಾಡಿ, ಡಿಡಿ ನನ್ನ ಇಷ್ಟದ ವಾಹಿನಿ. ಮನೆಯಲ್ಲಿ ಅತ್ತೆ ಮಾವ ಈಗಲೂ ಚಂದನ ವಾಹಿನಿಯನ್ನು ನೋಡುತ್ತಾರೆ. ನಾನು ಟೀವಿ ನೋಡಿಯೇ ಕನ್ನಡ ಕಲಿತದ್ದು. ವಿದೇಶದಲ್ಲಿಯೂ ದೂರದರ್ಶನಕ್ಕೆ ದೊಡ್ಡ ನೋಡುಗ ಬಳಗವಿದೆ ಎಂದು ಹೇಳಿದರು. ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾನಂದ ಶೆಣೈ ಹಾಗೂ ದೂರದರ್ಶನ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥೆ ಡಾ.ನಿರ್ಮಲಾ ಎಲಿಗಾರ ಮಾತನಾಡಿದರು. ವಿಜಯವಾಣಿ ಪತ್ರಿಕೆ ಸಂಪಾದಕ ಕೆ.ಎನ್‌.ಚನ್ನೇಗೌಡ ಸೇರಿದಂತೆ ಹಲವು ಹಿರಿಯ ಪತ್ರಕರ್ತರು ಉಪಸ್ಥಿತರಿದ್ದರು.

ಮೂವರು ಹಿರಿಯ ಪತ್ರಕರ್ತರಿಗೆ ಸನ್ಮಾನ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲ್ಯೂಜೆ) ವತಿಯಿಂದ ಹಿರಿಯ ಪತ್ರಕರ್ತರಾದ ದೇವನಾಥ್‌(81), ಬಾಲ ಭಾಸ್ಕರ್‌(85) ಮತ್ತು ಜಿ.ಅಶ್ವತ್‌(76) ಅವರನ್ನು ಸನ್ಮಾನಿಸಲಾಯಿತು. ಬೆಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸನ್ಮಾನಿಸಿದರು. ನಂತರ ಮಾತನಾಡಿದ ಅವರು, ವಿವಿಧ ಪತ್ರಿಕೆಗಳಲ್ಲಿ ದಶಕಗಳ ಕಾಲ ಕೆಲಸ ಮಾಡಿದ ದೇವನಾಥ್‌ ಅವರು ವೃತ್ತಿ ಜೀವನದಲ್ಲಿ ಆದರ್ಶಪ್ರಾಯರಾಗಿ ನಡೆದುಕೊಂಡು ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.

Ramanagara: ಹೊಡೆದಾಟದಲ್ಲಿ ಮಾಜಿ ಶಾಸಕ ಬಾಲಕೃಷ್ಣ ಸ್ಪೆಷಲಿಸ್ವ್‌: ಸಚಿವ ಅಶ್ವತ್ಥ್‌

ಕರಡು ತಿದ್ದುವ ಕೆಲಸದಿಂದ ಪತ್ರಿಕೋದ್ಯಮ ಆರಂಭಿಸಿದ ಬಾಲ ಭಾಸ್ಕರ್‌ ಅವರು, ಹಿರಿಯ ಪತ್ರಕರ್ತರ ಸಮಸ್ಯೆ ಈಡೇರಿಸಿಕೊಳ್ಳಲು ಪ್ರತ್ಯೇಕವಾದ ವೇದಿಕೆ ಹುಟ್ಟಲು ಕಾರಣಕರ್ತರಾಗಿದ್ದಾರೆ. ಮತ್ತೊಬ್ಬ ಪತ್ರಕರ್ತ ಅಶ್ವತ್ಥ ಅವರು ಖಾದ್ರಿ ಶಾಮಣ್ಣ ಅವರ ಒಡನಾಡಿಯಾಗಿದ್ದು, ಸುದೀರ್ಘ ಕಾಲ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದರು. ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಪೊನ್ನಪ್ಪ, ಪ್ರೆಸ್‌ ಕ್ಲಬ್‌ ಪ್ರಧಾನ ಕಾರ್ಯದರ್ಶಿ ಬಿ.ಪಿ.ಮಲ್ಲಪ್ಪ, ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಂ, ಸದಸ್ಯ ಸೋಮಶೇಖರ ಗಾಂಧಿ ಮೊದಲಾದವರು ಇದ್ದರು.

click me!