ಕೊಡಗು ಸೇರಿ 8 ಜಿಲ್ಲೆಗಳಿಗೆ ಸಿಗಲಿದೆ 550 ಕೋಟಿ 'ನಿಧಿ'

By Web DeskFirst Published Nov 20, 2018, 8:30 AM IST
Highlights

ಈ ವರ್ಷದ ಮುಂಗಾರು ಮಳೆ ಸಂದರ್ಭದಲ್ಲಿ ಕೊಡಗು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಸಂಭವಿಸಿದ್ದ ಭಾರಿ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ 546.21 ಕೋಟಿ ರೂಪಾಯಿ ನೆರವು ನೀಡಲು ತೀರ್ಮಾನಿಸಿದೆ.

ಬೆಂಗಳೂರು[ನ.20]: ಈ ವರ್ಷದ ಮುಂಗಾರು ಮಳೆ ಸಂದರ್ಭದಲ್ಲಿ ಕೊಡಗು ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಸಂಭವಿಸಿದ್ದ ಭಾರಿ ಪ್ರವಾಹ ಪರಿಸ್ಥಿತಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರವು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‌ಡಿಆರ್‌ಎಫ್‌)ಯಿಂದ .546.21 ಕೋಟಿ ನೆರವು ನೀಡಲು ತೀರ್ಮಾನಿಸಿದೆ.

ಎನ್‌ಡಿಆರ್‌ಎಫ್‌ಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ, ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌, ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್‌ ಗೌಬ ಮತ್ತು ಮೂರು ಸಚಿವಾಲಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಸೋಮವಾರ ಈ ನಿರ್ಧಾರಕ್ಕೆ ಬಂದಿದೆ.

ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಕೊಡಗು ಜಿಲ್ಲೆ ನಲುಗಿ ಹೋಗಿತ್ತು. ಇದರೊಂದಿಗೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಪ್ರವಾಹದಿಂದ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿಯೊಂದಿಗೆ ಜೀವ ಹಾನಿ ಕೂಡ ಸಂಭವಿಸಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ಸಚಿವ ಸಂಪುಟದ ಸದಸ್ಯರೊಂದಿಗೆ ಪ್ರಧಾನಿ ಮೋದಿ ಸೇರಿ ಕೇಂದ್ರ ಗೃಹ ಮತ್ತು ಕೃಷಿ ಸಚಿವರನ್ನು ಭೇಟಿಯಾಗಿ ಸುಮಾರು .1,200 ಕೋಟಿ ಮಧ್ಯಂತರ ಪರಿಹಾರಕ್ಕೆ ಮನವಿ ಮಾಡಿದ್ದರು.

742 ಕೋಟಿ ರೂಪಯಿಗೆ ಅರ್ಹತೆ ಇತ್ತು

ರಾಜ್ಯವು ಒಟ್ಟು 742 ಕೋಟಿಗಳ ಎನ್‌ಡಿಆರ್‌ಎಫ್‌ ನಿಧಿ ಪಡೆಯುವ ಆರ್ಹತೆ ಹೊಂದಿತ್ತು. ಕೇಂದ್ರ ಸರ್ಕಾರ .546.21 ಕೋಟಿ ನೀಡಿದೆ. ಇದು ಉತ್ತಮ ಮೊತ್ತ. ನಾವು ಈ ಹಣವನ್ನು ಎನ್‌ಡಿಆರ್‌ಎಫ್‌ನ ಮಾರ್ಗದರ್ಶಿ ಸೂತ್ರದಂತೆ ಬಳಸಿಕೊಳ್ಳುತ್ತೇವೆ. ಪ್ರವಾಹ ಪರಿಹಾರ ಕಾಮಗಾರಿ, ಪರಿಹಾರ ಧನಗಳಿಗೆ ರಾಜ್ಯ ಸರ್ಕಾರ ಈಗಾಗಲೇ .400 ಕೋಟಿ ವಿನಿಯೋಗಿಸಿದೆ ಎಂದು ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದ ಪ್ರಧಾನ ಕಾರ್ಯದರ್ಶಿ ಗಂಗಾರಾಮ ಬಡೇರಿಯಾ ತಿಳಿಸಿದ್ದಾರೆ.

click me!