ಮಾಡಾಳ್‌ ವಿರುಪಾಕ್ಷಪ್ಪ ಜಾಮೀನು ರದ್ದುಗೊಳಿಸಿ: ಸುಪ್ರೀಂ ಕೋರ್ಟ್‌ ಮೊರೆಹೋದ ಲೋಕಾಯುಕ್ತ ಪೊಲೀಸರು

By Sathish Kumar KHFirst Published Mar 13, 2023, 2:30 PM IST
Highlights

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು (ಮಾ.13): ಚನ್ನಗಿರಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಪ್ರಕರಣದ ಕುರಿತು ಲೋಕಾಯುಕ್ತ ಪೊಲೀಸರು ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರ ಪುತ್ರ ಬೆಂಗಳೂರು ಜಲಮಂಡಳಿಯ ಚೀಫ್‌ ಅಕೌಂಟಿಂಗ್‌ ಆಫೀಸರ್‌ ಮಾಡಾಳ್‌ ಪ್ರಶಾಂತ್‌ ಅವರು 40 ಲಕ್ಷ ರೂ. ಹಣವನ್ನು ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದರು. ಈ ವೇಳೆ ಪ್ರಶಾಂತ್‌ ಅವರಿಗೆ ಹಣ ಕೊಡಲು ಬಂದ ವ್ಯಕ್ತಿಗಳು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಮಾಡಾಳ್‌ ವಿರುಪಾಕ್ಷಪ್ಪ ಅವರಿಗೆ ಸಂಬಂಧಪಟ್ಟ ಹಣವಾಗಿದೆ ಎಂದು ಹೇಳಿದ್ದರು. ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರಿಗೆ 6 ದಿನಗಳ ಕಾಲ ಸಿಗದೇ ಕಣ್ಮರೆಸಿಕೊಮಡಿದ್ದ ಮಾಡಾಳ್‌ ವಿರುಪಾಕ್ಷಪ್ಪ ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದು ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾಗಿದ್ದರು.

ಬೆಂಗಳೂರಿನತ್ತ ಹೊರಟ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ: 2 ಕಾರುಗಳ ತುಂಬ 6 ಕೋಟಿ ರೂ.ಗಳ ದಾಖಲೆಗಳು

ಈಗ ಜಾಮೀನು ರದ್ದತಿಗೆ ಸುಪ್ರೀಂಗೆ ಮೊರೆ: ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರು ಜಾಮೀನು ಪಡೆದು ಬಂಧನದ ಭೀತಿಯಿಲ್ಲದೆ ಓಡಾಡುತ್ತಿದ್ದು, ಅವರನ್ನು ವಶಕ್ಕೆ ಪಡೆಯಲು ಲೋಕಾಯುಕ್ತ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಇನ್ನು ವಕೀಲರೊಂದಿಗೆ ವಿಚಾರಣೆಗೆ ಹಾಜರಾಗುತ್ತಿದ್ದು, ಸೂಕ್ತವಾಗಿ ವಿಚಾರಣೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಿಂದ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರಿಗೆ ನೀಡಲಾದ ಮಧ್ಯಂತರ ನಿರೀಕ್ಷಣಾ ಜಾಮೀನು ರದ್ದುಗೊಳಿಸುವಂತೆ ಲೋಕಾಯುಕ್ತ ಪೊಲೀಸರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಕುರಿತು ಈಗಾಗಲೇ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ನಾಳೆ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.

ಮಾಡಾಳ್‌ ಪ್ರಶಾಂತ್‌ ಮಾ.16ರವರೆಗೆ ಲೋಕಾಯುಕ್ತ ಕಸ್ಟಡಿಗೆ: ಮಾಡಾಳು ವಿರೂಪಾಕ್ಷಪ್ಪ ಪತ್ರ ಪ್ರಶಾಂತ್ ಮಾಡಾಳ್‌ ಅವರನ್ನು ಲೋಕಾಯುಕ್ತ ಪೊಲೀಸರು ಮೂರು ದಿನ ಕಸ್ಟಡಿಗೆ ಪಡೆದುಕೊಳ್ಳಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಹೊರಡಿಸಿದೆ. ಒಟ್ಟು 40 ಲಕ್ಷ ರೂ. ಹಣವನ್ನು ಪಡೆಯುವಾಗ ಪ್ರಶಾಂತ್‌ ಮಾಡಾಳ್‌ ಅವರನ್ನು ಲೋಕಾಯುಕ್ತ ಪೊಲೀಸರು ಟ್ರ್ಯಾಪ್ ಮಾಡಿ ಜೈಲಿಗೆ ಕಳಿಸಿದ್ದರು. ಇನ್ನು ಹೆಚ್ಚಿನ‌ ವಿಚಾರಣೆಗೆ ಮನವಿ ಮಾಡಿದ್ದ ಲೋಕಾ ಪೊಲೀಸರ ಕಸ್ಟಡಿಗೆ ಮಾರ್ಚ್ 16 ರವರೆಗೆ ಪ್ರಶಾಂತ್‌ ಅವರನ್ನು ಒಪ್ಪಿಸಲಾಗಿದೆ. ಈ ಕುರಿತು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಜಯಂತ್ ಕುಮಾರ್ ಆದೇಶ ನೀಡಿದ್ದಾರೆ.

ಹೈಕೋರ್ಟ್‌ ಜಾಮೀನು ಬೆನ್ನಲ್ಲೇ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಪ್ರತ್ಯಕ್ಷ: ಅದ್ಧೂರಿ ಸ್ವಾಗತ

ಮಾಡಾಳ್‌ ಅಪ್ಪ- ಮಗನ ಮುಖಾಮುಖಿ ವಿಚಾರಣೆ: ಮಾಡಾಳ್‌ ವಿರುಪಾಕ್ಷಪ್ಪ ಮನೆ ಹಾಗೂ ಕಚೇರಿಯ ಮೇಲೆ ಲೋಕಾಯುಕ್ತ ದಾಳಿಯ ವೇಳೆ ಸುಮಾರು 6 ಕೋಟಿ ರೂ. ದಾಖಲೆಗಳಿಲ್ಲದ ಹಣ ಲಭ್ಯವಾಗಿದೆ. ಈ ಎಲ್ಲ ಹಣಕ್ಕೂ ಸೂಕ್ತ ದಾಖಲೆಗಳಿವೆ ಎಂದು ವಿರುಪಾಕ್ಷಪ್ಪ ಹೇಳಿಕೊಂಡಿದ್ದರು. ಇನ್ನು ಲೋಕಾಯುಕ್ತರ ದಾಳಿಯ ವೇಳೆ ಪ್ರಶಾಂತ್‌ ಮಾಡಾಳ್‌ ಅವರು ಪಡೆಯುತ್ತಿದ್ದ 40 ಲಕ್ಷ ರೂ. ಹಣಕ್ಕೂ ತಮಗೂ ಸಂಬಂಧ ಇಲ್ಲವೆಂದು ಹೇಳಿದದರು. ಹೀಗಾಗಿ, ಮಾಡಾಳ್‌ ವಿರುಪಾಕ್ಷಪ್ಪ ಹಾಗೂ ಅವರ ಪುತ್ರ ಮಾಡಾಳ್‌ ಪ್ರಶಾಂತ್‌ ಅವರನ್ನು ಮುಖಾಮುಖಿಯಾಗಿ ಕೂರಿಸಿ ವಿಚಾರಣೆ ಮಾಡಲು ಲೋಕಾಯುಕ್ತ ಪೊಲೀಸರು ಮುಂದಾಗಿದ್ದಾರೆ. 

click me!