
ವೆಂಕಟೇಶ್ ಕಲಿಪಿ
ಬೆಂಗಳೂರು (ಮಾ.13): ಕೈಗಾರಿಕೆ ಪ್ರದೇಶದ ಅಭಿವೃದ್ಧಿಗಾಗಿ ಐದು ಎಕರೆ ಜಮೀನು ವಶಪಡಿಸಿಕೊಂಡು ಉದ್ಯಮಿಗೆ ಮಾರಾಟ ಮಾಡಿ ಹಣ ಪಡೆದರೂ, ಭೂಸ್ವಾಧೀನವಾಗಿ 16 ವರ್ಷ ಕಳೆದರೂ ಭೂ ಮಾಲಿಕರಿಗೆ ಪರಿಹಾರ ನೀಡದ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿ (ಕೆಐಎಡಿಬಿ) ನಡೆಗೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೆ ‘ಸರ್ಕಾರ ಪ್ರಜೆಗಳ ಜಮೀನಿನ ದರೋಡೆಕೋರರಂತೆ ವರ್ತಿಸಲು ಸಾಧ್ಯವಿಲ್ಲ’ ಎಂದು ಕಟುವಾಗಿ ಟೀಕಿಸಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾರಾಟ ವಲಯಕ್ಕೆ ತೀರಾ ಹತ್ತಿರವಿದ್ದ ಐದು ಎಕರೆ ಜಮೀನನ್ನು ವಶಪಡಿಸಿಕೊಂಡು, ಪರಿಹಾರ ನೀಡದೇ ಇರುವ ಸಂಬಂಧ ಬೆಂಗಳೂರಿನ ಜೆ.ಪಿ.ನಗರದ ನಿವಾಸಿಗಳಾದ ಎಂ.ವಿ.ಗುರುಪ್ರಸಾದ್ ಮತ್ತು ನಂದಿನಿ ಎಂ.ಗುರುಪ್ರಸಾದ್ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಪೀಠ ಈ ಆದೇಶ ಮಾಡಿದೆ. ಪ್ರಕರಣದಲ್ಲಿ ಸರ್ಕಾರ ಮತ್ತು ಕೆಐಎಡಿಬಿಯ ವರ್ತನೆ ಊಳಿಗಮಾನ್ಯ ವ್ಯವಸ್ಥೆಯ ಸಂಕೋಲೆಯನ್ನು ಬಲಪಡಿಸುವಂತಿದೆ.
ಜನರಿಂದ ಜನರಿಗಾಗಿ ಬಿಜೆಪಿ ಪ್ರಣಾಳಿಕೆ: ಸಚಿವ ಸುಧಾಕರ್
ಸುದೀರ್ಘ ಕಾಲ ಪರಿಹಾರ ಪಾವತಿಸದಕ್ಕೆ ‘ನ್ಯಾಯಸಮ್ಮತ ಪರಿಹಾರ, ಭೂ ಸ್ವಾಧೀನದಲ್ಲಿ ಪಾರದರ್ಶಕತೆ ಮತ್ತು ಪುನರ್ವಸತಿ ಕಾಯ್ದೆ-2013ರ ಅಡಿಯಲ್ಲಿ ಪರಿಹಾರವನ್ನು ಮೊತ್ತವನ್ನು ಮರು ನಿಗದಿಪಡಿಸಬೇಕು. ಶೇ.12ರಷ್ಟು ಬಡ್ಡಿದರ ಪಾವತಿಸಬೇಕು ಹಾಗೂ ಇತರೆ ನಿಗದಿತ ಸೌಲಭ್ಯ ಕಲ್ಪಿಸಬೇಕು. ವಶಪಡಿಸಿಕೊಂಡ ಪ್ರತಿ ಎಕರೆಗೆ ತಲಾ .25 ಸಾವಿರ ದಂಡ ನೀಡಬೇಕು. ಈ ಆದೇಶವನ್ನು ಮೂರು ತಿಂಗಳಲ್ಲಿ ಪಾಲಿಸಬೇಕು. ತಪ್ಪಿದರೆ ಹೆಚ್ಚುವರಿಯಾಗಿ ಶೇ.2ರಷ್ಟುಬಡ್ಡಿದರ ಪಾವತಿಸಬೇಕು. ಆ ಹಣವನ್ನು ಪರಿಹಾರ ಪಾವತಿಸಲು ವಿಳಂಬ ಮಾಡಿದ ರಾಜ್ಯ ಸರ್ಕಾರ ಮತ್ತು ಕೆಐಎಡಿಬಿಯ ತಪ್ಪಿತಸ್ಥರ ಅಧಿಕಾರಿಗಳಿಂದ ವಸೂಲಿ ಮಾಡಬೇಕು’ ಎಂದು ನಿರ್ದೇಶಿಸಿದೆ.
ಅರ್ಜಿದಾರರ ಮನವಿಗೆ ಕ್ಯಾರೇ ಎನ್ನದ ಸರ್ಕಾರ: ಎಂ.ವಿ.ಗುರುಪ್ರಸಾದ್ 2007ರ ಜ.27ರಂದು ದೇವನಹಳ್ಳಿಯ ತಾಲೂಕಿನ ಜೊನ್ನಹಳ್ಳಿ ಗ್ರಾಮದ ಸರ್ವೆ ನಂಬರ್ 132ರಲ್ಲಿನ 5 ಎಕೆರೆ 1 ಗುಂಟೆ ಜಮೀನನ್ನು ಖರೀದಿಸಿದ್ದರು. ನಂದಿನಿ ಎಂ.ಗುರುಪ್ರಸಾದ್ ಅವರು ಅದೇ ಗ್ರಾಮದ ಸರ್ವೇ ನಂಬರ್ 66/6ರಲ್ಲಿನ 38 ಗುಂಟೆ ಜಮೀನನ್ನು 2006ರ ಡಿ.23ರಂದು ಖರೀದಿಸಿದ್ದರು. ಈ ಜಮೀನು ಸ್ವಾಧೀನಪಡಿಕೊಂಡ ಕೆಐಎಡಿಬಿ ಪರಿಹಾರ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಗುರುಪ್ರಸಾದ್ ಮತ್ತು ನಂದಿನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣದಲ್ಲಿ ಭೂ ಸ್ವಾಧೀನ ಸಂಬಂಧ ಸರ್ಕಾರ 2007ರ ಮೇ 17ರಂದು ಅಂತಿಮ ಅಧಿಸೂಚನೆ ಪ್ರಕಟಿಸಿದೆ. 2014ರ ಜೂ.5ರಂದು ತಿದ್ದುಪಡಿ ಅಧಿಸೂಚನೆ ಹೊರಡಿಸಿ ಅರ್ಜಿದಾರರು ಪರಿಹಾರ ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಿತ್ತು. ಭೂ ಸ್ವಾಧೀನವಾಗಿ 9 ವರ್ಷ ಕಳೆದರೂ ಮತ್ತು ಸಾಕಷ್ಟುಮನವಿ ಸಲ್ಲಿಸಿದರೂ ಪರಿಹಾರ ಸಂದಾಯವಾಗದಕ್ಕೆ ಅರ್ಜಿದಾರರು ನ್ಯಾಯಕ್ಕಾಗಿ ಮೊರೆಯಿಟ್ಟು 2016ರ ನ.28ರಂದು ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ. 2017ರ ಜ.16ರಂದು ಹೈಕೋರ್ಟ್ನಿಂದ ನೋಟಿಸ್ ಜಾರಿಯಾದ ನಂತರ ಸರ್ಕಾರ ಮತ್ತು ಕೆಐಎಡಿಬಿ ಎಚ್ಚೆತ್ತುಕೊಂಡು ಪರಿಹಾರ ಪಾವತಿ ವ್ಯವಸ್ಥೆ ಮಾಡಿದೆ ಎಂದು ಆದೇಶದಲ್ಲಿ ವಿವರಿಸಿದೆ.
ಕಾಂಗ್ರೆಸ್ ಸೇರಲಿರುವ ಸಚಿವ ನಾರಾಯಣಗೌಡ ಮೋದಿ ಕಾರ್ಯಕ್ರಮದಲ್ಲಿ ಭಾಗಿ
ಪರಿಹಾರ ತಡೆಗೆ ಕಾರಣವನ್ನೇ ಹೇಳದ ಸರ್ಕಾರ: ವಿಚಿತ್ರ ಏನೆಂದರೆ, ಅರ್ಜಿದಾರರ ಜಮೀನಿನಲ್ಲಿ ನಿವೇಶನ ರಚಿಸಿ ಉದ್ಯಮಿಗೆ ಮಾರುಕಟ್ಟೆದರಕ್ಕಿಂತ ಶೇ.50ರಷ್ಟುಮಾರಾಟ ಮಾಡಿದ್ದರಿಂದ ಕೆಐಎಡಿಬಿಗೆ .7.5 ಕೋಟಿ ಸಂದಾಯವಾಗಿದೆ. ರಿಯಾಯಿತಿ ನೀಡದಿದ್ದರೆ .15 ಕೋಟಿ ಸಂದಾಯವಾಗುತ್ತಿತ್ತು. ಅರ್ಜಿದಾರರಿಗೆ ಪರಿಹಾರ ನೀಡುವುದಕ್ಕೆ ಮತ್ತೊಬ್ಬರು ಕ್ಲೇಮು ಸಲ್ಲಿಸದಿದ್ದರೂ ಪರಿಹಾರ ಮೊತ್ತವನ್ನು ಬಡ್ಡಿ ದುಡಿಯುವ ರೀತಿಯಲ್ಲಿ ಠೇವಣಿಯಿಟ್ಟಿಲ್ಲ. ಸಾಲದೆ ಅರ್ಜಿ ವಜಾಗೊಳಿಸುವಂತೆ ಸರ್ಕಾರ ಮತ್ತು ಕೆಐಎಡಿಬಿ 2021ರ ಏ.9ರಂದು ಆಕ್ಷೇಪಣೆ ಸಲ್ಲಿಸಿದೆ. ಆದರೆ, ತಿದ್ದುಪಡಿ ಅಧಿಸೂಚನೆ ಹೊರಡಿಸದ್ದರೂ ಈವರೆಗೆ ಏಕೆ ಪರಿಹಾರವನ್ನು ತಡೆ ಹಿಡಿಯಲಾಗಿದೆ ಎಂಬದಕ್ಕೆ ಸಕಾರಣ ತಿಳಿಸಿಲ್ಲ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿ, ಅರ್ಜಿದಾರರಿಗೆ ಪರಿಹಾರ ಪಾವತಿಸಲು ನಿರ್ದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ