ನೈಸ್ ಯೋಜನೆ ವಿವಾದ ಸಂಪುಟ ಉಪಸಮಿತಿ ಸಭೆ ಮುಗಿದ ತಕ್ಷಣ ವಿಧಾನಸೌಧದಲ್ಲಿ ಅಶೋಕ್ ಖೇಣಿ ಸುತ್ತುವರೆದು ರೈತರ ಆಕ್ರೋಶ

Published : Oct 16, 2025, 07:52 PM IST
Ashok Kheny

ಸಾರಾಂಶ

ನೈಸ್ ಯೋಜನೆ ಕುರಿತ ಸಂಪುಟ ಉಪಸಮಿತಿ ಸಭೆಯ ನಂತರ, ತಮ್ಮ ಜಮೀನುಗಳಿಗೆ ನಿವೇಶನ ನೀಡದೆ ವಂಚಿಸಲಾಗಿದೆ ಎಂದು ಆರೋಪಿಸಿ ರೈತರು ಅಶೋಕ್ ಖೇಣಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಖೇಣಿ, ರೈತರಿಗೆ ನಿವೇಶನ ಹಂಚಿಕೆ ಮಾಡಲು ಲೇಔಟ್ ಸಿದ್ಧವಿದೆ ಎಂದರು.

ಬೆಂಗಳೂರು: ನೈಸ್ ಯೋಜನೆ (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ರಸ್ತೆ ಯೋಜನೆ) ಕಾರ್ಯನಿರ್ವಹಣೆ ಹಾಗೂ ಹೆಚ್ಚುವರಿ ಭೂಮಿ ವಾಪಸ್ಸು ಕುರಿತಂತೆ ಇಂದು ವಿಧಾನಸೌಧದಲ್ಲಿ ಸಂಪುಟ ಉಪಸಮಿತಿ ಸಭೆ ನಡೆಯಿತು. ಉಪಸಮಿತಿ ಅಧ್ಯಕ್ಷ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಸಚಿವರು ಹೆಚ್.ಕೆ. ಪಾಟೀಲ್ ಮತ್ತು ಎಂಬಿ ಪಾಟೀಲ್ ಸೇರಿದಂತೆ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು. ಸಭೆಯಲ್ಲಿ ಯೋಜನೆಯ ಪ್ರಗತಿ, ಭೂಸ್ವಾಧೀನ ಸಂಬಂಧಿತ ಅಡಚಣೆಗಳು ಹಾಗೂ ರೈತರಿಗೆ ನೀಡಬೇಕಾದ ಪರಿಹಾರ ಕುರಿತಂತೆ ವಿಸ್ತೃತ ಚರ್ಚೆ ನಡೆಯಿತು. ಈ ಸಭೆಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಆಗಮಿಸಿ ಬಳಿಕ ಹೊರಟರು.

ಸಭೆ ನಂತರ ರೈತರ ಪ್ರತಿಭಟನೆ – ಅಶೋಕ್ ಖೇಣಿ ವಿರುದ್ಧ ಆಕ್ರೋಶ

ಸಭೆ ಮುಗಿದ ಕೂಡಲೆ ವಿಧಾನಸೌಧದ ಆವರಣದಲ್ಲಿ ನೈಸ್ ಯೋಜನೆಗೆ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟ ರೈತರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರು ಸಭೆಗೆ ಹಾಜರಾಗುತ್ತಿದ್ದಂತೆ ರೈತರು ಅವರನ್ನು ಸುತ್ತುವರಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

2003ರಲ್ಲಿ ಒಂದು ಎಕರೆಗೆ ₹6 ಲಕ್ಷ ಹಣದ ಜೊತೆಗೆ ಒಂದು ಸೈಟ್ ನೀಡುವುದಾಗಿ ಸರ್ಕಾರ ಹಾಗೂ ನೈಸ್ ಸಂಸ್ಥೆ ಮಾತುಕತೆ ನಡೆಸಿತ್ತು. ಆದರೆ ಇಷ್ಟೊಂದು ವರ್ಷ ಕಳೆದರೂ ಸೈಟ್ ನೀಡದ ಮೂಲಕ ರೈತರನ್ನು ಮೋಸ ಮಾಡಲಾಗಿದೆ ಎಂದು ರೈತರು ಆರೋಪಿಸಿದರು. ರೈತರು ಖೇಣಿ ಅವರನ್ನು ಉದ್ದೇಶಿಸಿ, ಆ ಸಮಯದಲ್ಲಿ ನೀವು ನಮಗೆ ನೀಡಿದ ಮಾತುಗಳನ್ನು ಇಂದು ಮುರಿದಿದ್ದೀರಿ. ಭೂಮಿ ಬಿಟ್ಟುಕೊಡುವ ಸಮಯದಲ್ಲಿ ಒಂದು ಮಾತು, ಈಗ ಮಾತು ಸಂಪೂರ್ಣ ಬದಲಾಗಿದೆ ಎಂದು ಪ್ರಶ್ನೆ ಎಸೆದರು.

ಅಶೋಕ್ ಖೇಣಿ ಸ್ಪಷ್ಟನೆ

ರೈತರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಅಶೋಕ್ ಖೇಣಿ ಅವರು, “ಆ ಸಮಯದಲ್ಲಿ ಜಮೀನು ಮೌಲ್ಯ ₹2 ಲಕ್ಷ ಮಾತ್ರ ಇತ್ತು. ನಾನು ಅದಕ್ಕಿಂತ ಹೆಚ್ಚು, ಎಕರೆಗೆ ₹7 ಲಕ್ಷ ನೀಡಿ ಖರೀದಿಸಿದ್ದೇನೆ. 2+5 = 7 ಲಕ್ಷ ನೀಡಿದ್ದೇನೆ. ಜೊತೆಗೆ ಪ್ರತಿ ಎಕರೆಗೆ ಒಂದು ನಿವೇಶನ ಕೊಡಲು ಸಹ ಒಪ್ಪಿಕೊಂಡಿದ್ದೇವೆ,” ಎಂದು ವಿವರಿಸಿದರು.

“ರೈತರು ಡಿಸಿಯವರ ಮುಂದೆ ಈ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ. ನಂತರ ನೈಸ್ ಸಂಸ್ಥೆಯೇ ರೈತರಿಗಾಗಿ ಒಂದು ಲೇಔಟ್ ನಿರ್ಮಿಸಿದೆ. ಆದರೆ ಈ ಲೇಔಟ್‌ನ ನಿವೇಶನ ಹಂಚಿಕೆಗೆ ಸರ್ಕಾರದಿಂದ ಇನ್ನೂ ಅನುಮತಿ ದೊರೆತಿಲ್ಲ. ಇದೇ ಸಮಸ್ಯೆಯ ಮೂಲ,” ಎಂದು ಖೇಣಿ ಹೇಳಿದರು.

ಹೊಸ ಅಧಿಕಾರಿಗಳು ಈ ನಿವೇಶನ ಹಂಚಿಕೆಗೆ ಅನುಮತಿ ನೀಡಲು ಹಿಂಜರಿಯುತ್ತಿರುವುದರಿಂದ ವರ್ಷಗಳಿಂದ ರೈತರಿಗೆ ಅವರ ಹಕ್ಕಿನ ನಿವೇಶನ ಸಿಗದೆ ಉಳಿದಿದೆ ಎಂದು ಅವರು ಆರೋಪಿಸಿದರು. “ಡಿಸಿ ಸರ್ಕಾರ ಅಲ್ಲಂದ್ರೆ ಇನ್ಯಾರು? ರಾಜಕಾರಣಿಗಳು ಈ ವಿಷಯದಲ್ಲಿ ಭಾಗಿಯಾಗಿದ್ದಾರೆ. ಆದರೆ ಜನ ನನ್ನ ಪರ ಇದ್ದಾರೆ,” ಎಂದು ಖೇಣಿ ವಿಧಾನಸೌಧದ ಆವರಣದಲ್ಲಿ ಸ್ಪಷ್ಟಪಡಿಸಿದರು.

ವರ್ಷಗಳ ಹೋರಾಟದ ಬಳಿಕವೂ ಪರಿಹಾರ ದೂರ

ನಿವೇಶನ ಹಂಚಿಕೆಗೆ ಸರ್ಕಾರದಿಂದ ಒಪ್ಪಿಗೆ ಸಿಗದ ಹಿನ್ನೆಲೆ, ರೈತರು ಹಲವು ವರ್ಷಗಳಿಂದ ಕಾನೂನು ಹೋರಾಟ ನಡೆಸಿದ್ದಾರೆ. ಆದಾಗ್ಯೂ, ಯಾವುದೇ ಫಲಿತಾಂಶ ಸಿಕ್ಕಿಲ್ಲ. ಇಂದು ರೈತರು ತಮ್ಮ ವಕೀಲರೊಂದಿಗೆ ವಿಧಾನಸೌಧಕ್ಕೆ ಆಗಮಿಸಿ ನ್ಯಾಯಕ್ಕಾಗಿ ಧ್ವನಿ ಎತ್ತಿದರು. ನೈಸ್ ಕಾರಿಡಾರ್ ಯೋಜನೆಯ ಅಡಿಯಲ್ಲಿ ಜಮೀನು ಬಿಟ್ಟುಕೊಟ್ಟ ರೈತರು, ತಮ್ಮ ಹಕ್ಕಿನ ನಿವೇಶನವನ್ನು ಪಡೆಯದೇ ಸರ್ಕಾರ ಹಾಗೂ ಸಂಸ್ಥೆಗಳಿಂದ ಮೋಸಕ್ಕೀಡಾಗಿರುವುದಾಗಿ ಆರೋಪಿಸಿದ್ದಾರೆ.

ನೈಸ್ ಯೋಜನೆ ಕುರಿತ ಸಂಪುಟ ಉಪಸಮಿತಿ ಸಭೆ ಮೂಲತಃ ಯೋಜನೆಯ ಕಾರ್ಯನಿರ್ವಹಣೆ, ಭೂಮಿ ವಾಪಸ್ಸು ಹಾಗೂ ರೈತರಿಗೆ ನೀಡಬೇಕಾದ ಪರಿಹಾರ ಕುರಿತ ಚರ್ಚೆಗೆ ವೇದಿಕೆಯಾದರೂ, ಸಭೆ ನಂತರ ರೈತರ ಅಸಮಾಧಾನವೇ ಕೇಂದ್ರಬಿಂದುವಾಯಿತು. ಅಶೋಕ್ ಖೇಣಿ ವಿರುದ್ಧ ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರೆ, ಖೇಣಿ ಅವರು ಸರ್ಕಾರದ ಅನುಮತಿ ಇಲ್ಲದಿರುವುದೇ ಸಮಸ್ಯೆಯ ಮೂಲ ಎಂದು ಸ್ಪಷ್ಟಪಡಿಸಿದರು. ಈ ವಿವಾದಕ್ಕೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಹಾಗೂ ಶೀಘ್ರ ಪರಿಹಾರ ದೊರೆಯುವ ನಿರೀಕ್ಷೆಯಲ್ಲಿದ್ದಾರೆ ರೈತರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

20000 ರೈತರ ಜತೆ ಸೇರಿ ಡಿ. 9ಕ್ಕೆ ಸುವರ್ಣಸೌಧಕ್ಕೆ ಮುತ್ತಿಗೆ : ಬಿವೈವಿ
ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ