'ಮಂಗ್ಳೂರು ಗೋಲಿಬಾರ್ ಹಿಂದಿನ ದಿನ ಕಲ್ಲಡ್ಕ ಪ್ರಭಾಕರ್ ಭಟ್ ಮನೆಯಲ್ಲಿ ಪೊಲೀಸ್ರು'

By Suvarna NewsFirst Published Dec 22, 2019, 3:55 PM IST
Highlights

ಪೌರತ್ವ ಕಾಯ್ದೆ ವಿರೋಧಿಸಿ ಗುರುವಾರ ಮಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪೊಲೀಸರ ಗೋಲಿಬಾರ್‌ಗೆ ಇಬ್ಬರು ಬಲಿಯಾಗಿದ್ದಾರೆ. ಆದ್ರೆ, ಗಲಾಟೆ ಹಿಂದಿನ ದಿನ ಪೊಲೀಸ್ ಅಧಿಕಾರಿಗಳು ಆರ್‌ಎಸ್‌ಎಸ್‌ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಮನೆಯಲ್ಲಿ ಇದ್ದರು ಎಂದು ಮಾಜಿ ಸಿಎಂ ಗಂಭೀರ ಆರೋಪ ಮಾಡಿದ್ದಾರೆ. ಯಾರು ಅವರು..? ಈ ಬಗ್ಗೆ ಇನ್ನಷ್ಟು ಮಾಹಿತಿ ಈ ಕೆಳಗಿನಂತಿದೆ.

ಮಂಗಳೂರು, (ಡಿ.22): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದು (ಭಾನುವಾರ ಬೆಳಗ್ಗೆ ಮಂಗಳೂರಿಗೆ ತೆರಳಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನೆಯಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಬಳಿಕ ನಗರದಲ್ಲಿ ಪೊಲೀಸರ ಗೋಲಿಬಾರ್ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈಗಿರುವ ಸರ್ಕಾರವೇನು ಗೃಹ ಸಚಿವರ ಆದೇಶದ ಮೇಲೆ ನಡೀತಿದೆಯೋ? ಇಲ್ಲ ಕಲ್ಲಡ್ಕ ಪ್ರಭಾಕರ್ ಭಟ್ ಸೂಚನೆ ಮೇಲೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರಾ? ಗಲಾಟೆ ನಡೆಯುವ ಹಿಂದಿನ ದಿನ ಕಲ್ಲಡ್ಕ ಪ್ರಭಾಕರ್ ಮನೆಯಲ್ಲಿ ಅಧಿಕಾರಿಗಳು ಇದ್ದರು. ಇದರ ಬಗ್ಗೆ ತನಿಖೆ ಮಾಡ್ತೀರಾ ಎಂದು ಪ್ರಶ್ನಿಸಿ ಏಕವಚನದಲ್ಲೇ ಕಲ್ಲಡ್ಕ ಪ್ರಭಾಕರ್ ವಿರುದ್ಧ ಗುಡುಗಿದರು.

ಮಂಗಳೂರು: ಗುಂಡೇಟಿಗೆ ಬಲಿಯಾದ ಇಬ್ಬರ ಕುಟುಂಬಸ್ಥರಿಗೆ ಸಿಎಂ ಪರಿಹಾರ ಘೋಷಣೆ

ಯಡಿಯೂರಪ್ಪಗೆ ಮಾನ ಮಾರ್ಯಾದೆ ಇದ್ದರೆ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ, ಅವರನ್ನ ಜೈಲಿಗೆ ಕಳುಹಿಸಲಿ. ಇವರ ಯೋಗ್ಯತೆಗೆ ಇದೊಂದು ಸರ್ಕಾರನಾ? ಸತ್ತವರ ಮೇಲೂ ಎಫ್‍ಐಆರ್ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಮಿಷನರ್ ಹೇಳ್ತಾನೆ 7 ಸಾವಿರ ಜನ ಮಾಬ್ ಇತ್ತು ಅಂತ. ಅದಕ್ಕೆ ಬೀದಿ ಬೀದಿಯಲ್ಲಿ ಸಿಕ್ಕವರಿಗೆ ಹೊಡೆದ್ರೆ ಹೇಗೆ? ಐಎಎಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡ್ರೆ, ಗಣಪತಿ ಆತ್ಮಹತ್ಯೆ ಆದಾಗ ಗೃಹ ಮಂತ್ರಿ ಜವಾಬ್ದಾರಿ ಅಂದರು. ಈಗ ಎರಡು ಸಾವಾಗಿದೆ ಇದರ ಜವಾಬ್ದಾರಿ ಯಾರು? 15 ಜನರಿಗೆ ಪ್ರಮಾಣ ವಚನ ಬೋಧನೆ ಮಾಡ್ತಿದ್ದಾರೆ. 20-25 ಲಕ್ಷ ಖರ್ಚು ಮಾಡಿ ಪ್ರಮಾಣ ವಚನ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.

ಗುರುವಾರ ನಡೆದ ಪ್ರತಿಭಟನೆ ಹಿಂಸಾತ್ಮಕಕ್ಕೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದರು. ಇದರಲ್ಲಿ ಜಲೀಲ್ ಹಾಗೂ ನೌಶೀನ್ ಎನ್ನುವರು ಮೃತಪಟ್ಟಿದ್ದರು. 

ಡಿಸೆಂಬರ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!