
ಚಿತ್ರದುರ್ಗ (ಮೇ.9): ಜಿಲ್ಲೆಯಲ್ಲಿ ಶನಿವಾರ ನಡೆಯಲಿರುವ ಬಿಎಸ್ ವೈ ಅಭಿಮಾನೋತ್ಸವಕ್ಕೆ ಎಲ್ಲರನ್ನೂ, ಎಲ್ಲವನ್ನೂ ಒಳಗೊಳ್ಳುವ ಸೂತ್ರಪಾಲನೆಗೆ ಸಂಘಟಕರು ಮುಂದಾಗಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಜಾರಿಗೊಳಿಸಿದ ಯೋಜನೆಗಳಿಗೆ ಸ್ತಬ್ಧಚಿತ್ರಗಳ ಸ್ವರೂಪ ನೀಡಿದ್ದರೆ ರಾಜಕೀಯ ಆರಂಭದ ದಿನಗಳಲ್ಲಿ ಅವರು ಬಳಸಿದ್ದ ಅಂಬಾಸಿಡರ್ ಕಾರನ್ನು ಕಾರ್ಯಕ್ರಮ ನಡೆಯವ ಪ್ರದೇಶಕ್ಕೆ ತಂದು ಜನರನ್ನು ಆಕರ್ಷಿಸಲಾಗುತ್ತಿದೆ.
ಬಿ.ಎಸ್.ಯಡಿಯೂರಪ್ಪ ತಮ್ಮ ರಾಜಕೀಯ ಜೀವನದಲ್ಲಿ ಬಳಸಿದ ಸಿಕೆಆರ್ 45 ನಂಬರಿನ ಹಿಂದೂಸ್ತಾನ್ ಅಂಬಾಸಿಡರ್ ಕಾರಿನ ಬಗ್ಗೆ ಮಾಹಿತಿ ನೀಡಿದ ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ.ವಿಜಯೇಂದ್ರ ಈ ಕಾರನ್ನು ರಾಜ್ಯದ ಜನ ಈಗಲೂ ನೆನಪಿನಲ್ಲಿ ಇಟ್ಟುಕೊಡಿದ್ದಾರೆ ಎಂದರು.
ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ರೈತನಾಯಕ ಎಂದು ಜನ ಗುರುತಿಸುತ್ತಾರೆ, ಪ್ರೀತಿಸುತ್ತಾರೆ. ಯಡಿಯೂರಪ್ಪ ಅವರ ಮೇಲೆ ನಾಡಿನ ಜನ ಯಾವ ರೀತಿಯ ಪ್ರೀತಿ ಮತ್ತು ಅಭಿಮಾನ ತೋರುತ್ತಾರೋ ಅದೇ ಸಿಕೆಆರ್ 45 ನಂಬರಿನ ಕಾರಿಗೂ ಜನ ಪ್ರೀತಿ ತೋರುತ್ತಾರೆ. ಆ ಕಾಲದಲ್ಲಿ ಕೇವಲ ನಗರಕ್ಕೆ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಹಳ್ಳಿಗೆ ತೆಗೆದುಕೊಂಡು ಹೋಗಿ ಪಕ್ಷದ ಸಂಘಟನೆ ಬಲಪಡಿಸಲು ಬಿಎಸ್ವೈ ಸಾಕಷ್ಟು ಶ್ರಮಿಸಿದರು. ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪ ಅವರ ಪಾತ್ರ ಎಷ್ಟಿದೆಯೊ ಈ ಕಾರಿನ ಪಾತ್ರವೂ ಅಷ್ಟೇ ಇತ್ತು ಎಂದರು.
ಬಿಎಸ್ವೈ ಅವರೊಂದಿಗೆ ಅನಂತ ಕುಮಾರ್, ಡಿ.ಎಚ್.ಶಂಕರಮೂರ್ತಿ ಅವರು ಇದೇ ಕಾರಿನಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಆ ದಿನಗಳಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚಿದ್ದವು. ಯಡಿಯೂರಪ್ಪ ಇದೇ ಕಾರನ್ನು ಸದಾ ಬಳಸುತ್ತಿದ್ದರು. ಅವರ ಪ್ರವಾಸಕ್ಕೆ ಶಕ್ತಿ ತುಂಬಿದ್ದು ಈ ಕಾರು ಎಂದರು.
ಶಂಕರ್ ಎಂಬುವರು ಹತ್ತಾರು ವರ್ಷ ಚಾಲಕರಾಗಿದ್ದರು. ಮಂಜಣ್ಣ ಎಂಬ ಮತ್ತೊಬ್ಬರು ಚಾಲಕರಾಗಿದ್ದರು. ಅವರು ನಮ್ಮ ಕುಟುಂಬ ಸದಸ್ಯರಂತೆ ಹದಿನೈದು ವರ್ಷ ಕಾರು ಓಡಿಸಿದ್ದಾರೆ. ಒಮ್ಮೆ ಮಾತ್ರ ಕಾರು ಅಡಿಮೇಲಾಗಿದ್ದು ಮತ್ತೆ ಯಾವುದೇ ಅವಘಡ ಸಂಭವಿಸಿಲ್ಲ. ಸುರಕ್ಷಿತವಾಗಿ ಇಡೀ ರಾಜ್ಯದಲ್ಲಿ ಬಿಎಸ್ ವೈ ಅವರನ್ನು ಈ ಕಾರು ಸುತ್ತಾಡಿಸಿದೆ ಎಂದರು.
ಅಭಿಮಾನೋತ್ಸವದಲ್ಲಿ ಈ ಕಾರು ಪ್ರಮುಖ ಆಕರ್ಷಣೆಯಾಗಿದ್ದು ಎಲ್ಲರೂ ಬಂದು ಕಾರಿನ ಬಳಿ ಪೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ