ಬೆಂಗಳೂರು (ಸೆ.04): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಾಸ್ತವ್ಯ ಹೂಡಿರುವ ಸರ್ಕಾರಿ ನಿವಾಸ ‘ಕಾವೇರಿ’ಯನ್ನು ಅಧಿಕೃತವಾಗಿ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಹಂಚಿಕೆ ಮಾಡಲಾಗಿದೆ. ಆದರೆ ಈ ಮನೆಯಲ್ಲಿ ಅಶೋಕ್ ವಾಸ್ತವ್ಯ ಹೂಡುವುದಿಲ್ಲ ಎನ್ನಲಾಗಿದ್ದು, ಹೀಗಾಗಿ ಯಡಿಯೂರಪ್ಪ ಅವರು ಅಲ್ಲಿಯೇ ವಾಸ್ತವ್ಯ ಮುಂದುವರೆಸಲಿದ್ದಾರೆ.
ಕಳೆದ ಆ.10ರಂದೇ ಕಾವೇರಿ ನಿವಾಸವನ್ನು ಅಶೋಕ್ ಅವರಿಗೆ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಚಿವ ಆರ್.ಅಶೋಕ್ ಅವರು ಈವರೆಗೂ ಸರ್ಕಾರಿ ನಿವಾಸವನ್ನು ತೆಗೆದುಕೊಂಡಿರಲಿಲ್ಲ.
ಕಾರ್ಯಕರ್ತರೂ ಸಿಎಂ ಆಗೋದು ಬಿಜೆಪಿಯಲ್ಲಿ ಮಾತ್ರ: ಸಚಿವ ಅಶೋಕ್
ಅವರು ಸ್ವಂತ ನಿವಾಸದಿಂದಲೇ ಕಾರ್ಯನಿರ್ವಹಿಸುತ್ತಿದ್ದರು. ಈಗ ಅಶೋಕ್ ಹೆಸರಿಗೆ ಕಾವೇರಿ ನಿವಾಸವನ್ನು ಹಂಚಿಕೆ ಮಾಡಲಾಗಿದೆ. ಈ ಹಿಂದೆಯೂ ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಕಾವೇರಿ ನಿವಾಸ ಹಂಚಿಕೆಯಾಗಿದ್ದರೂ, ಅಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಾಸ್ತವ್ಯಕ್ಕೆ ಬಿಟ್ಟುಕೊಟ್ಟಿದ್ದರು. ಅದರಂತೆ ಅಶೋಕ್ ಅವರಿಗೆ ಕಾವೇರಿ ನಿವಾಸ ನೀಡಿದರೂ ಯಡಿಯೂರಪ್ಪ ಅವರೇ ವಾಸ್ತವ್ಯ ಮುಂದುವರಿಸಲಿದ್ದಾರೆ ಎನ್ನಲಾಗಿದೆ.