
ಯಾದಗಿರಿ(ನ.08): ಅ.28 ರಂದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಎಫ್ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಎರಡ್ಮೂರು ದಿನಗಳ ಮೊದಲೇ ಬ್ಲೂಟೂತ್ ಡಿವೈಸ್ಗಳನ್ನು ಹಂಚಿಕೆ ಮಾಡಲು ಕಬ್ಬಿನ ಗದ್ದೆಗಳು ಹಾಗೂ ದಾರಿಬದಿಯ ಜ್ಯೂಸ್ ಅಂಗಡಿಯನ್ನು "ಸ್ಪಾಟ್" ಆಗಿ ಗುರುತಿಸಲಾಗಿತ್ತು ಎನ್ನುವ ವಿಚಾರ ಪೊಲೀಸರ ವಿಚಾರಣೆ ವೇಳೆ ಹೊರಬಿದ್ದಿದೆ
ಅಕ್ರಮ ಆರೋಪದಡಿ, ಯಾದಗಿರಿಯಲ್ಲಿ ಬಂಧಿತ ಕಲಬುರಗಿ ಜಿಲ್ಲೆಯ ಅಫಜಲ್ಪೂರ ಹಾಗೂ ವಿಜಯಪುರ ಜಿಲ್ಲೆ ಸಿಂಧಗಿ ಮೂಲದ 9 ಅಭ್ಯರ್ಥಿಗಳನ್ನು ಹೆಚ್ಚಿನ ವಿಚಾರಣೆಗೆಂದು ಕಸ್ಟಡಿಗೆ ಪಡೆದಿರುವ ಇಲ್ಲಿನ ಪೊಲೀಸರು, ಮಂಗಳವಾರ ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ಇಂತಹ ಅಂಶವನ್ನು ಆರೋಪಿಗಳು ಬಾಯ್ಬಿಟ್ಟು, ಸ್ಳಳ ತೋರಿಸಿದ್ದಾರೆ.
ಕೆಇಎ ಪರೀಕ್ಷೆ ಅಕ್ರಮ: ಸಿಐಡಿ ತನಿಖೆಗೆ ಸರ್ಕಾರದ ಚಿಂತನೆ
ಕಲಬುರಗಿ ಜಿಲ್ಲೆ ಅಫಜಲ್ಪೂರ ಚವಡಾಪುರ ಮಧ್ಯೆ ನಿರ್ಜನ ಪ್ರದೇಶದಲ್ಲಿ, ಅದೂ ಕಬ್ಬಿನ ಗದ್ದಗಳಲ್ಲಿ ಬ್ಲೂಟೂತ್ ಹಂಚಿಕೆಯಾಗಿದ್ದವು. ಮೊಬೈಲ್ ಮೂಲಕ ಸಂಪರ್ಕಿಸಿದಾಗ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದು ಬ್ಲೂಟೂತ್ ಕೊಟ್ಟಿದ್ದಾರೆಂದು ವಿಚಾರಣೆಯಲ್ಲಿ ಆರೋಪಿಗಳು ತಿಳಿಸಿದ್ದಾರೆಂದು ಕನ್ನಡಪ್ರಭಕ್ಕೆ ಪೊಲೀಸ್ ಮೂಲಗಳು ತಿಳಿಸಿವೆ. ಜನನಿಬಿಡ ಪ್ರದೇಶದಲ್ಲಿ ಇಂತಹ ಹಂಚಿಕೆ ನಡೆದರೆ ಸಿಸಿಟಿವಿ ಅಥವಾ ಮತ್ತಿತರರ ಕಣ್ಣಿಗೆ ಬಿದ್ದು ಸಾಕ್ಷಿಗಳಾಗುವ ಸಾಧ್ಯತೆ ಎದುರಾಗಬಹುದೆಂಬ ಆತಂಕದಿಂದ ಇಂತಹ ಅಡಗುತಾಣದಲ್ಲಿ ಬ್ಲೂಟೂತ್ ಹಂಚಿಕೆ ನಡೆದಿತ್ತು ಎನ್ನಲಾಗಿದೆ.
ಬ್ಲೂಟೂತ್ ಎಫೆಕ್ಟ್: ಖಾಕಿ ಕಾವಲಿನಲ್ಲಿ ಕೆಪಿಎಸ್ಸಿ ಪರೀಕ್ಷೆ..!
ಯಾದಗಿರಿಯ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮದ ಆರೋಪದಡಿ ಒಟ್ಟು 16 ಜರನ್ನು ಬಂಧಿಸಲಾಗಿತ್ತು. ಇದರಲ್ಲಿ 11 ಜನ ಆಭ್ಯರ್ಥಿಗಳು ಹಾಗೂ ಐವರು ಮಧ್ಯವರ್ತಿಗಳನ್ನು ವಶಕ್ಕೆ ಪಡೆದು, ನಂತರ ನ್ಯಾಯಾಂಗ ಬಂಧನಕಕ್ಕೆ ಒಪ್ಪಿಸಲಾಗಿತ್ತು. ಸೋಮವಾರ ಹೆಚ್ಚಿನ ವಿಚಾರಣೆಗೆಂದು ಪೊಲೀಸರು ಮನವಿ ಮಾಡಿದ ಹಿನ್ನೆಲೆಯಲ್ಲಿ 9 ಜನರನ್ನು 10 ದಿನಗಳ ಕಾಲ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕಲಬುರಗಿಯಲ್ಲೇ ಬಿಡಾರ ಹೂಡಿರುವ ಯಾದಗಿರಿ ಪೊಲೀಸರು, ಮತ್ತಷ್ಟೂ ಮಾಹಿತಿ ಕಲೆ ಹಾಕಲು ಮುಂದಾಗಿದ್ದು, ಪ್ರಮುಖ ಆರೋಪಿಗಳ ಬಗ್ಗೆ ಸಾಕ್ಷ್ಯಾಧಾರಗಳ ಸಂಗ್ರಹದಲ್ಲಿ ತೊಡಗಿದ್ದಾರೆ. ವಿಜಯಪುರ ಜಿಲ್ಲೆಗೆ ತೆರಳಿ, ಸಾಕ್ಷಿ ಸಂಗ್ರಹ ಸಾಧ್ಯತೆಯಿದೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ