Congress Mekedatu Padayatra: ದಯವಿಟ್ಟು ಕೊರೊನಾ ಹೊತ್ತು ಬೆಂಗಳೂರಿಗೆ ಬರಬೇಡಿ, ಬಿಜೆಪಿ ಶಾಸಕರಿಂದ ಜಂಟಿ ಪತ್ರಿಕಾಗೋಷ್ಠಿ

By Suvarna NewsFirst Published Jan 12, 2022, 5:43 PM IST
Highlights

ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ವಿರುದ್ಧ  ಬೆಂಗಳೂರು ಬಿಜೆಪಿ ಶಾಸಕರೆಲ್ಲರೂ ಸೇರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ದಯವಿಟ್ಟು ಬೆಂಗಳೂರಿಗೆ ಬರಬೇಡಿ ಕೊರೊನಾ ಹಬ್ಬಿಸಬೇಡಿ ಎಂದು ಮನವಿ ಮಾಟಿಕೊಂಡಿದ್ದಾರೆ.

ಬೆಂಗಳೂರು (ಜ.12): ಕಾಂಗ್ರೆಸ್​ ಮೇಕೆದಾಟು ಪಾದಯಾತ್ರೆ ಬುಧವಾರ 4ನೇ ದಿನಕ್ಕೆ ಕಾಲಿಡುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿ ಕಚೇರಿಯಲ್ಲಿ ಬೆಂಗಳೂರು ಬಿಜೆಪಿ ಶಾಸಕರೆಲ್ಲರೂ ಸೇರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಶಾಸಕರಾದ ಅರವಿಂದ್ ಲಿಂಬಾವಳಿ, ಸತೀಶ್ ರೆಡ್ಡಿ, ಉದಯ್ ಗರುಡಾಚಾರ್, ರವಿ ಸುಬ್ರಹ್ಮಣ್ಯ ಸೇರಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಕಾಂಗ್ರೆಸ್ ಪಾದಯಾತ್ರೆ ವಿರುದ್ಧ ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಲಿಂಬಾವಳಿ, ಕೊರೋನಾ ತಾರಕಕ್ಕೆ ಏರುವ ಸಂದರ್ಭದಲ್ಲಿ ಅನಿವಾರ್ಯವಾಗಿ ಬೆಂಗಳೂರು ಶಾಸಕರು ಸುದ್ದಿಗೋಷ್ಠಿ ಮಾಡಬೇಕಿದೆ. ಬೆಂಗಳೂರಿನಲ್ಲಿ ಮೂರನೇ ಅಲೆ, ವಿಶೇಷವಾಗಿ ಓಮಿಕ್ರಾನ್ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಮಂಗಳವಾರದ ವರದಿಯಂತೆ 15 ಸಾವಿರ ಪ್ರಕರಣ ದಾಖಲಾಗಿದೆ. ಸರ್ಕಾರ ಮತ್ತು ನಮ್ಮ  ಪಕ್ಷ ಕೊರೋನಾ ತಡೆಯೋ ಕೆಲಸ ಮಾಡ್ತಿದೆ. ಆದ್ರೆ ಕಾಂಗ್ರೆಸ್‌ ಮಾತ್ರ ಮೇಕೆದಾಟು ಯಾತ್ರೆ ಮಾಡುತ್ತಿದೆ. ಮೇಕೆದಾಟು ಯೋಜನೆ ವಿಚಾರವಾಗಿ ನಮ್ಮ ಸರ್ಕಾರ, ಕಾಂಗ್ರೆಸ್ ಸರ್ಕಾರಕ್ಕಿಂತ ಹೆಚ್ಚು ಕೆಲಸ ಮಾಡಿದೆ.

ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಮೇಕೆದಾಟು ಯೋಜನೆ ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆಗಿಂತ, ಕೊರೋನಾ ತಡೆಗಟ್ಟೋದು ಮುಖ್ಯ ಆಗಿದೆ. ತಿಳುವಳಿಕೆ ಇರೋ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಕೊರೋನಾ ಹರಡೋದನ್ನ ತಡೆಯುತ್ತೀರಿ ಅಂತ ತಿಳಿದಿದ್ದೇವೆ.

ರಾಜಕೀಯ ವ್ಯಕ್ತಿಗಳಿಗೆ ಒಂದು ನಿಯಮ, ಜನ ಸಾಮಾನ್ಯರಿಗೇ ಒಂದು ನಿಯಮ ಅಂತ ಮಾದ್ಯಮದಲ್ಲಿ ವರದಿ ಬರುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಹೆಚ್ಚು ಸೋಂಕು ಬರುತ್ತಿದೆ. ನಾವೆಲ್ಲ ಕೊರೋನಾ ತಡೆಗೆ ಆದ್ಯತೆ ನೀಡಿ ಕೆಲಸ ಮಾಡ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಸಾವಿರಾರು ಜನರನ್ನು ಕಟ್ಟಿಕೊಂಡು ಬೆಂಗಳೂರಿಗೆ ನುಗ್ಗುವ ಕೆಲಸ ಮಾಡಬೇಡಿ. 

ಕುಮಾರಸ್ವಾಮಿ, ದೇವೇಗೌಡರು, ಯಡಿಯೂರಪ್ಪ, ನಾವ್ಯಾರೂ ಮೇಕೆದಾಟು ವಿರೋಧಿಗಳಲ್ಲ. ಮೇಕೆದಾಟಿಗಿಂತ ಇಂದಿನ ದಿನದಲ್ಲಿ ಕೊರೋನಾ ತಡೆಯೋದೇ ಮುಖ್ಯವಾಗಿದೆ. ನಿಮ್ಮ ಆಟಿಟ್ಯೂಡ್ ಹೀಗೆ ಮುಂದುವರೆದು, ಬೆಂಬಲಿಗರು ತಮ್ಮ ಜಿಲ್ಲೆಗಳಿಗೆ ಹೋಗ್ತಿದ್ದಾರೆ. ಹೀಗಿರುವಾಗ ಕೊರೋನಾ ಹರಡಿದ್ರೆ, ಕಾಂಗ್ರೆಸ್ ಪಕ್ಷವೇ ನೇರ ಹೊಣೆಯಾಗಲಿದೆ.

ದೆಹಲಿಯಲ್ಲಿ ಅಘೋಷಿತ ಬಂದ್ ಆಗಿದೆ. ಮಹಾರಾಷ್ಟ್ರ, ಕೇರಳ ರೆಡ್ ಅಲರ್ಟ್ ಇದೆ. ಕೋರ್ಟ್ ಕೂಡ ನಿಮ್ಮನ್ನು ಪ್ರಶ್ನಿಸಿದೆ. ಕೊರೋನಾ ತಾರಕಕ್ಕೆ ಏರಿದಾಗ ನಿಮ್ಮ ಪಾದಯಾತ್ರೆ ಅಗತ್ಯತೆ ಇದೆಯಾ.? ಎಂದು ಶಾಸಕ ಅರವಿಂದ ಲಿಂಬಾವಳಿ ಪ್ರಶ್ನಿಸಿದ್ದಾರೆ.

Congress Padayatra ಪಾದಯಾತ್ರಗೆ ಬ್ರೇಕ್ ಬೀಳುತ್ತಾ? ಅರ್ಧಕ್ಕೆ ನಿಲ್ಲಿಸುತ್ತಾ ಕಾಂಗ್ರೆಸ್?

ಇನ್ನು ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಬೆಂಗಳೂರು ಸುರಕ್ಷಿತವಾಗಿ ಇರಬೇಕು ಅನ್ನೋ ಜನ, ಸೌಮ್ಯ ಸ್ವಬಾವದ ಜನ. ಬೆಂಗಳೂರಿಗೆ ಬರುವ ಪಾದಯಾತ್ರೆಯನ್ನ ಜನ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ನವರು ಉದ್ದೇಶ ಪೂರಕವಾಗಿ ಪಾದಯಾತ್ರೆ ನಡೆಸಿ, ಕೊರೋನಾ ಹರಡುತ್ತಿದ್ದಾರೆ. ಬೆಂಗಳೂರು ಜನರ ಮನೋಭಾವನೆಯನ್ನ ಕೋರ್ಟ್ ಕೂಡ ಪ್ರಶ್ನಿಸಿದೆ. ನಮಗೂ ಜನ ಕರೆಸಲು ಬರುತ್ತದೆ. ಆದ್ರೆ ಬೆಂಗಳೂರು ಜನರ ಪ್ರಾಣ ಮುಖ್ಯ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಕೂಡ ಇದೆ. ನೀವು ಇದನ್ನು ಅರ್ಥ ಮಾಡಿಕೊಳ್ಳಿ ಎಂದು ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಒಂದುವರೆ ಕೋಟಿ ಜನ ಇದ್ದಾರೆ. ಅವರಿಗೆ ಕೊರೋನಾ ಹರಡಿಸೋ ಕೆಲಸ ಮಾಡಬೇಡಿ. WHO ಕೂಡ ಬೆಂಗಳೂರು ಡೇಂಜರ್ ಅಂತ ಎಚ್ಚರಿಕೆ ನೀಡಿದೆ. ಪಾದಯಾತ್ರೆಯನ್ನ ತಡೆಯದಿದ್ರೆ, ಬೆಂಗಳೂರಿನ ಜನ ನಿಮ್ಮನ್ನ ತಿರಸ್ಕರಿಸುತ್ತಾರೆ. ನಾವು ಕೂಡ ನಿಮ್ಮ ಪಾದಯಾತ್ರೆ ವಿರೋಧಿಸಿ ಪ್ರತಿಭಟನೆ ನಡೆಸ್ತೀವಿ ಎಂದು ಸತೀಶ್ ರೆಡ್ಡಿ ಹೇಳಿದ್ದಾರೆ.

ಶಾಸಕ ಉದಯ್ ಗರುಡಾಚಾರ್  ಮಾತನಾಡಿ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ಸಿಕ್ಕಾಪಟ್ಟೆ ಬಿಸಿನೆಸ್ ಏರಿಯಾ. ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಬೇರೆ ಬೇರೆ ಜನ ಬರ್ತಾರೆ. ಕೂಲಿ ಕಾರ್ಮಿಕರು ಇದ್ದು, ಕೊರೋನಾ ಪ್ರೊಟೋಕಾಲ್ ಮೇಂಟೆನ್ ಮಾಡಲ್ಲ, ಮಾಸ್ಕ್ ಹಾಕಲ್ಲ. ದಯವಿಟ್ಟು ನಮ್ಮ ಕ್ಷೇತ್ರಕ್ಕೆ ಬರಬೇಡಿ. ಬಂದ್ರೆ ದೊಡ್ಡ ಸ್ಪೋಟ ಆಗೋದು ಖಂಡಿತ.  ಪಾದಯಾತ್ರೆ ತಡೆಯುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.  ದಯವಿಟ್ಟು ಬೆಂಗಳೂರಿಗೆ ನಿಮ್ಮ ಪಾದಯಾತ್ರೆ ತರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Mekedatu Padayatra: ಕಾಂಗ್ರೆಸ್ ನಾಯಕರ ವಿರುದ್ಧ 3ನೇ FIR ದಾಖಲು

ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, ಬೆಂಗಳೂರು ರೆಡ್ ಅಲರ್ಟ್ ನಲ್ಲಿದೆ. ಕಾಂಗ್ರೆಸ್ ಪಕ್ಷ‌ ಮೇಕೆದಾಟು ಯೋಜನೆ ಕುಡಿಯುವ ನೀರಿಗೆ ಹೋರಾಟ ಮಾಡ್ತಿದ್ದಾರೆ. ಕುಡಿಯುವ ನೀರಿನ ಬಗ್ಗೆ ಕಾಂಗ್ರೆಸ್ ಗಿಂತ, ಬಿಜೆಪಿಗೆ ಹೆಚ್ಚು ಕಾಳಜಿ ಇದೆ. ಮಾತುಕತೆ ಮೂಲಕ ಕೆಲವು ಆಗಬೇಕಿದೆ, ಕಾನೂನು ಮೂಲಕವೂ ಆಗಬೇಕಿದೆ. 2014ರಲ್ಲಿ ಕಾಂಗ್ರೆಸ್ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿದ್ದು, ಅದನ್ನ ಮಾಡದೆ ಸುಮ್ಮನೆ ಕೂತಿದ್ರು. ಕೊರೋನಾ ಬಂದ ಸಂದರ್ಭದಲ್ಲಿ ಈಗ ಯಾಕೆ ಬೇಕಿತ್ತು. 

ನಿಮ್ಮ ಹೋರಾಟಕ್ಕೆ ನಮ್ಮ ವಿರೋಧ ಇಲ್ಲ. ಕುಡಿಯುವ ನೀರಿಗೆ ರಾಜಕೀಯ ಮಾಡೋದು ಬೇಡ. ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡೋಣ. ಟೆಸ್ಟಿಂಗ್ ಹೆಚ್ಚಳ ಆಗಬೇಕಿದೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಮನವಿ ಮಾಡ್ತೀನೆ, ಮತ್ತೊಂದು ಲಾಕ್ ಡೌನ್ ತಡೆದುಕೊಳ್ಳುವ ಪರಿಸ್ಥಿತಿಗೆ ಬೆಂಗಳೂರನ್ನು ತರಬೇಡಿ. ಇದರಿಂದ ಕೈಗಾರಿಕೆ, ಫ್ಯಾಕ್ಟರಿ, ಕೂಲಿ ಕಾರ್ಮಿಕರು ಎಲ್ಲವೂ ಬಂದ್ ಆಗಲಿದೆ. ಕಠಿಣ ಪರಿಸ್ಥಿತಿಗೆ ದಯವಿಟ್ಟು ತರಬೇಡಿ. ಜನಸಾಮಾನ್ಯರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ಸರ್ಕಾರ, ನಾವು ಎಲ್ಲರೂ ಕೂಡ ಮುಂದೆ ಹೋರಾಟ ಮಾಡೋಣ ಎಂದರು.

click me!