
ಬೆಂಗಳೂರು (ಮಾ.21) ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಏಕವಚನದಲ್ಲಿ ಹಾಗೂ ವಿವಾದಾತ್ಮಕವಾಗಿ ವಾಗ್ದಾಳಿ ನಡೆಸಿದ್ದ ಬಿಜೆಪಿ ಸಂಸದೆ ಕಂಗನಾ ರನೌತ್ ಅವರಿಗೆ ನಗರದ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಮಾನಸಿಕ ಚಿಕಿತ್ಸೆ ಕೊಡಿಸಬೇಕು ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಆಗ್ರಹಿಸಿದೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಎಚ್.ಎಸ್. ಮಂಜುನಾಥ್ ಗೌಡ ಪತ್ರ ಬರೆದಿದ್ದು, ರಾಹುಲ್ ಗಾಂಧಿ ಮಹಿಳಾ ಸಂಸದರಿಗೆ ಮುಜುಗರ ಉಂಟು ಮಾಡುತ್ತಾರೆ, ಟಪೋರಿಯಂತೆ ವರ್ತಿಸುತ್ತಾರೆ ಎಂದು ಕಂಗನಾ ಅವಹೇಳನಕಾರಿಯಾಗಿ ಟೀಕಿಸಿದ್ದಾರೆ. ಮಹಿಳೆಯರ ವಿಷಯವನ್ನು ಅಗ್ಗದ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೂಡಲೇ ಅವರನ್ನು ನಿಮ್ಹಾನ್ಸ್ಗೆ ಕಳುಹಿಸಿಕೊಡಿ, ಚಿಕಿತ್ಸೆಯ ವೆಚ್ಚವನ್ನು ಯುವ ಕಾಂಗ್ರೆಸ್ ಭರಿಸಲಿದೆ ಎಂದು ತಿಳಿಸಿದ್ದಾರೆ.
ಸಾಂವಿಧಾನಿಕ ಹುದ್ದೆಯಲ್ಲಿರುವ ರಾಹುಲ್ ಗಾಂಧಿ ವಿರುದ್ಧ ಇಂತಹ ಕೀಳುಮಟ್ಟದ ಭಾಷೆ ಬಳಸಿರುವುದು ಆಘಾತಕಾರಿಯಾಗಿದೆ. ಇದು ತೀವ್ರ ಖಂಡನೀಯ. ಇದು ಕಂಗನಾ ಅವರ ಮಾನಸಿಕ ಅಸಮತೋಲನ ತೋರಿಸುತ್ತದೆ. ಅವರಿಗೆ ಪ್ರಜಾಸತ್ತಾತ್ಮಕ ಚರ್ಚೆ ಮತ್ತು ವೈಯಕ್ತಿಕ ಟೀಕೆಯ ಅರಿವಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ಹೇಗೆ ವರ್ತಿಸಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಇಂತಹ ಅಸಂಸದೀಯ ವರ್ತನೆಗೆ ನಿಮ್ಮ ಸಮ್ಮತಿ ಇಲ್ಲವಾದರೆ, ತಕ್ಷಣವೇ ಕಂಗನಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಂಗನಾ ಅವರು ರಾಹುಲ್ ಗಾಂಧಿ ಅವರ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದಾರೆ. ಅವಹೇಳನಕಾರಿ ಭಾಷೆ ಬಳಸಿ ಸಂಸತ್ತಿನ ಘನತೆಯನ್ನು ಅಗ್ಗದ ಪ್ರಚಾರಕ್ಕಾಗಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಕಂಗನಾ ಅವರ ಈ ಹೇಳಿಕೆ ಮಾನಹಾನಿಕಾರಕವಾಗಿದೆ. ಸಂಸದೆಯಾಗಿ ಇರಬೇಕಾದ ಘನತೆ, ಗಾಂಭೀರ್ಯ, ಪ್ರೌಢಿಮೆ ಇಲ್ಲ ಎಂಬುದನ್ನು ಇದು ಸಾಬೀತುಪಡಿಸಿದೆ. ಕಂಗನಾ ಅವರಿಗೆ ಸಾರ್ವಜನಿಕ ವೇದಿಕೆಯಲ್ಲಿ ಇರಬೇಕಾದ ನಡೆ-ನುಡಿಗಳ ಬಗ್ಗೆ ಕನಿಷ್ಠ ಅರಿವೂ ಇಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾಂವಿಧಾನಾತ್ಮಕ ಹುದ್ದೆಯಾದ ಪ್ರತಿಪಕ್ಷ ನಾಯಕರ ವಿರುದ್ಧ ಕೀಳು ಮಟ್ಟದ ಭಾಷೆ ಬಳಸಿರುವುದು ಅತ್ಯಂತ ಆಘಾತಕಾರಿಯಾಗಿದೆ. ಇಂತಹ ದುರ್ವರ್ತನೆಯನ್ನು ಸಹಿಸುವುದು ಅಥವಾ ಉತ್ತೇಜಿಸುವುದು ಅಪಾಯಕಾರಿಯಾಗಿದೆ. ಇದು ನಿಮ್ಮ ಸರ್ಕಾರದ ಮಾನದಂಡಗಳ ಮೇಲೆಯೇ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಟಪೋರಿ ಎಂಬ ಟೀಕೆಯು ರಾಜಕೀಯ ಟೀಕೆಯ ಮಿತಿ ಮೀರಿದೆ. ತಮ್ಮತ್ತ ಗಮನ ಸೆಳೆಯುವ ಪ್ರಚಾರದ ಹಪಾಹಪಿತನದಿಂದ ಅಸಭ್ಯವಾಗಿ ಕಂಗನಾ ವರ್ತಿಸಿದ್ದಾರೆ. ಇದು ಅವರ ಹಿಂದಿನ ಅವಾಂತರಗಳ ಮುಂದುವರಿದ ಭಾಗವಾಗಿದ್ದು, ಮಾನಸಿಕ ಅಸಮತೋಲನದ ಕುರಿತು ಗಂಭೀರ ಪ್ರಶ್ನೆ ಎಬ್ಬಿಸಿದೆ. ರಾಜಕೀಯ, ಪ್ರಜಾಸತ್ತಾತ್ಮಕ ಚರ್ಚೆ ಮತ್ತು ವೈಯಕ್ತಿಕ ಟೀಕೆ ಬಗ್ಗೆ ಅರಿವಿಲ್ಲದವರು ಸಂಸದೆಯಂತಹ ಹುದ್ದೆಯಲ್ಲಿರುವ ಯೋಗ್ಯತೆ ಹೊಂದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ